ಕರ್ನಾಟಕ

ಪ್ರಿಯಕರನಿಗಾಗಿ ಮಗು ಕೊಂದ ತಾಯಿ

Pinterest LinkedIn Tumblr


ಆನೇಕಲ್‌: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ತನ್ನ ಎರಡೂವರೆ ವರ್ಷದ ಮಗಳನ್ನು ಆಕೆಯ ಪ್ರಿಯಕರನ ಜತೆ ಸೇರಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಆವಡದೇನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಆವಡದೇನಹಳ್ಳಿಯ ಚಂದ್ರಶೇಖರ ಎಂಬುವರ ಎರಡೂವರೆ ವರ್ಷದ ಬಾಲಕಿ ಅನ್ನಪೂರ್ಣ ಮೃತಳು. ಪ್ರಕರಣದ ಆರೋಪಿಗಳಾದ ನಿವೇದಿತಾ ಹಾಗೂ ಆಕೆಯ ಪ್ರಿಯಕರ ಸತೀಶನನ್ನು ಆನೇಕಲ್‌ ಪೊಲೀಸರು ಬಂಧಿಸಿದ್ದಾರೆ.

ಐದು ವರ್ಷಗಳ ಹಿಂದೆ ತನ್ನ ಅಕ್ಕನ ಮಗಳು ನಿವೇದಿತಾಳನ್ನು ಮದುವೆಯಾಗಿದ್ದ ಚಂದ್ರಶೇಖರ್‌, ಕಾಯಿಲೆಗೊಳಗಾಗಿದ್ದ ಮಗಳಾದ ಅನ್ನಪೂರ್ಣಳನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಒಳರೋಗಿಯಾಗಿದ್ದ ಮಗುವನ್ನು ನಿವೇದಿತಾ ಆರೈಕೆ ಮಾಡಿಕೊಂಡು ಆಸ್ಪತ್ರೆಯಲ್ಲೇ ಇದ್ದಳು. ಡಿ. 24ರಂದು ರಾತ್ರಿ ಆಕೆ ಮಗುವಿನ ಜತೆ ಪರಾರಿಯಾಗಿದ್ದಳು. ಇದನ್ನು ಗಮನಿಸಿದ ಆಸ್ಪತ್ರೆಯವರು ಮಗು ಮತ್ತು ತಾಯಿ ಪರಾರಿಯಾಗಿದ್ದಾರೆಂದು ಕರೆ ಮಾಡಿ ಚಂದ್ರಶೇಖರ್‌ಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಈತ ವೈದ್ಯರೊಡನೆ ಸೇರಿ ಸಿಸಿಟಿವಿಯಲ್ಲಿ ದಾಖಲಾಗಿದ್ದ ವಿಡಿಯೋವನ್ನು ಪರಿಶೀಲಿಸಿದ್ದಾರೆ. ನಿವೇದಿತಾ ತನ್ನ ಮಗುವಿನೊಂದಿಗೆ ಪರಪುರುಷನೊಡನೆ ಬೈಕ್‌ನಲ್ಲಿ ಪರಾರಿಯಾಗಿರುವುದು ಕಂಡು ಬಂದಿದೆ. ಬಳಿಕ ನಿವೇದಿತಾಳನ್ನು ಕರೆದುಕೊಂಡು ಹೋಗಿದ್ದು ಆಕೆಯ ಮಾವನ ಮಗ ಆವಡದೇನಹಳ್ಳಿಯ ಸತೀಶ ಎಂಬುದು ಬಳಿಕ ತನಿಖೆಯಲ್ಲಿ ಗೊತ್ತಾಗಿದೆ.

ಅತ್ತಿಬೆಲೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಮ್ಮಿಬ್ಬರ ನಡುವೆ ಹಲವು ವರ್ಷಗಳಿಂದ ಅನೈತಿಕ ಸಂಬಂಧ ಇತ್ತು. ಇದಕ್ಕೆ ಮಗು ಅಡ್ಡಿಯಾಗಬಹುದು ಎಂಬ ಸಂಶಯದಿಂದ ಹತ್ಯೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಮಗುವನು ವೇಲ್‌ನಿಂದ ಉಸಿರುಗಟ್ಟಿಸಿ ಸಾಯಿಸಿ ಅತ್ತಿಬೆಲೆಯ ಎಜಿ ಬಡಾವಣೆಯ ಪೊದೆಯಲ್ಲಿ ಎಸೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಂತರ ಶವ ಪತ್ತೆ ಮಾಡಿದ ಪೊಲೀಸರು, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

Comments are closed.