ಕುಂದಾಪುರ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಆಂಜನೇಯ ಅವರು ಶನಿವಾರ ಕುಂದಾಪುರ ತಾಲೂಕಿನ ಮೂರೂರು ಹಾಡಿಯಲ್ಲಿ ಮರ್ಲಿ ಕೊರಗ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ಸಚಿವರೊಂದಿಗೆ ಅಧಿಕಾರಿಗಳ ತಂಡವೂ ಗ್ರಾಮಕ್ಕೆ ಬಂದಿದ್ದು, ಸ್ಥಳೀಯರೊಂದಿಗೆ ಸಂವಾದ ನಡೆಸಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ಯನ್ನೂ ಸಚಿವರು ನೀಡಿದರು.
ಕೊರಗರ ಸಾಂಪ್ರದಾಯಿಕ ವಾದನವಾದ ಡೊಳ್ಳು ಮೆರವಣಿಗೆಯಲ್ಲಿ ಸಚಿವರನ್ನು ಸಂಜೆಯ ವೇಳೆ ಹಾಡಿಯೊಳಕ್ಕೆ ಸ್ವಾಗತಿಸ ಲಾಯಿತು. ಹಾಳೆಯ ಮುಟ್ಟಾಳೆ ಧರಿಸಿದ ಸಚಿವರಿಗೆ ಮಲ್ಲಿಗೆಯ ಹಾರ ಹಾಕಲಾಯಿತು.
ಮರ್ಲಿ ಮನೆಮಂದಿಯೊಂದಿಗೆ ವಿಶೇಷ ವಾಗಿ ಬೆರೆತ ಸಚಿವರು, ಅಡುಗೆ ಕೋಣೆಗೆ ಕೂಡ ಹೋಗಿ ಅಲ್ಲಿ ಅಡುಗೆ ತಯಾರಿ ಮಾಡುವುದನ್ನು ಅಲ್ಲಿಯೇ ನಿಂತು ವೀಕ್ಷಿಸಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ವೆಂಕಟೇಶ್,ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುಂದಾ ಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್, ಗ್ರಾ.ಪಂ. ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಹಾಗೂ ಕೆಡಿಪಿ ಸದಸ್ಯ ರಾಜು ಪೂಜಾರಿ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಬೇಳೆ ಸಾರು, ಚಟ್ನಿ-ಚಪಾತಿ ಸಚಿವರಿಗೆ ಸಸ್ಯಾಹಾರವನ್ನು ಒದಗಿಸಲಾಯಿತು. ಚಪಾತಿ, ಪಲ್ಯ, ಹುರುಳಿ ಚಟ್ನಿ, ಕುಚ್ಚಿಗೆ ಅನ್ನ, ಬೇಳೆ ಸಾರು, ಪಾಯಸ ಮಾಡಲಾಗಿತ್ತು. ಸಚಿವರು ಮನೆ ಮಂದಿಯೊಂದಿಗೆ ಊಟ ಸೇವಿಸಿ ಅನಂತರ ಮನೆಯ ಹೊರಾಂಗಣದಲ್ಲಿ ಆಯೋಜಿಸಲಾಗಿದ್ದ ಕೊರಗರ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ವೀಕ್ಷಿಸಿ ರಾತ್ರಿ ಮರ್ಲಿ ಕೊರಗ ಅವರ ಮನೆಯಲ್ಲಿ ನಿದ್ರಿಸಿದರು.
Comments are closed.