ಗಲ್ಫ್

ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದ ಮೋದಿ ! ಭಾರತೀಯರನ್ನು ಉದ್ದೇಶಿಸಿ ಹೇಳಿದ್ದೇನು ನೋಡಿ…

Pinterest LinkedIn Tumblr

ದುಬೈ: ನಾಲ್ಕು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಬುಧಾಬಿಯಲ್ಲಿ ಮೊದಲ ಹಿಂದು ದೇವಾಲಯಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶಿಲಾನ್ಯಾಸ ನೆರವೇರಿಸಿದ್ದಾರೆ.

ಬೃಹತ್ ದೇವಾಲಯ ನಿರ್ಮಾಣಕ್ಕೆ ಅವಕಾಶ ನೀಡಿದ ಅಬುಧಾಬಿಯ ರಾಜಕುಮಾರ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ರಿಗೆ ಭಾರತದ 125 ಕೋಟಿ ಜನರ ಪರವಾಗಿ ಇದೇ ಸಂದರ್ಭ ಮೋದಿ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ದುಬೈನ ಓಪೆರಾ ಹಾಲ್‌ನಲ್ಲಿ ನೆರೆದಿದ್ದ ಸಾವಿರಾರು ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ‘ದೇವಾಲಯ ದಶಕಗಳ ನಂತರ ಭಾರತ ಗಲ್ಫ್ ರಾಷ್ಟ್ರಗಳೊಂದಿಗೆ ಮತ್ತೆ ಬಲವಾದ ಸಂಬಂಧವನ್ನು ಹೊಂದಿಲು ನೆರವಾಗಲಿದೆ’ ಎಂದರು.

‘ಆಗೆತ್ತದೊ ಇಲ್ಲವೋ ಎನ್ನುತ್ತಿದ್ದ ನೀವು ಈಗ ಮೋದಿ ಜಿ.. ಹೇಳಿ ಯಾವಾಗ ಆಗುತ್ತದೆ ಎಂದು ಕೇಳುತ್ತಿದ್ದೀರಿ. ಇದು ನಮ್ಮ ಮೇಲಿಟ್ಟ ನಂಬಿಕೆಯನ್ನು ತೋರಿಸುತ್ತದೆ. ಆಗುವುದಿದ್ದರೆ ಈಗಲೇ ಆಗುತ್ತದೆ’ಎಂದರು.

’21ನೇ ಶತಮಾನ ಏಷಿಯಾ ಖಂಡದ್ದು ಅದರಲ್ಲಿ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿಲು ಇನ್ನಷ್ಟು ಕೆಲಸ ಮಾಡಬೇಕಿದೆ’ ಎಂದರು.

“ವಾಸ್ತುಶಿಲ್ಪ ಮತ್ತು ವೈಭವದ ಕಾರಣಕ್ಕೆ ಮಾತ್ರ ಈ ದೇವಾಲಯ ಅದ್ಭುತವೆನಿಸಲಾರದು. ಈ ದೇವಾಲಯವು ಇಡೀ ವಿಶ್ವಕ್ಕೆ ‘ವಸುಧೈವ ಕುಟುಂಬಕಂ’ ಎನ್ನುವ ಸಂದೇಶವನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ಅರಬ್ ರಾಷ್ಟ್ರಗಳು ಮತ್ತು ಭಾರತದ ಸಂಬಂಧ ತುಂಬಾ ಹಳೆಯದು. ಸಂಬಂಧ ಕೇವಲ ಆಡಳಿತಕಷ್ಟೇ ಸೀಮಿತವಾಗಿಲ್ಲ. ಸಹಕಾರಕ್ಕೆ ಸಂಬಂಧಿಸಿದ್ದು. ಭಾರತದಲ್ಲಿ ವ್ಯಾಪಾರ ವಹಿವಾಟು ಸುಲಭವಾಗಿದೆ. ನಾವು ಜನಪ್ರಿಯ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ. ಉಪಯುಕ್ತ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ.  ಕಡಿಮೆ ಅವಧಿಯಲ್ಲಿ ಜಿಎಸ್ ಟಿ ಸಮಸ್ಯೆ ಬಗೆಹರಿಸಿದ್ದೇವೆ. ಭಾರತ ಈಗ ಬದಲಾವಣೆಯ ಹಾದಿಯಲ್ಲಿದೆ” ಎಂದು ಪ್ರಧಾನಿ ಹೇಳಿದರು.

‘ನಾನು ನೋಟು ನಿಷೇಧ ಮಾಡಿದಾಗ ಬಡವರು ಅರ್ಥಮಾಡಿಕೊಂಡು ಬೆಂಬಲ ನೀಡಿದರು. ಆದರೆ ಆವಾಗ ನಿದ್ದೆ ಕಳೆದುಕೊಂಡವರು 2 ವರ್ಷಗಳಾದ ಮೇಲೂ ಕಣ್ಣೀರಿಡುತ್ತಿದ್ದಾರೆ’ ಎಂದು ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

‘ಕಳೆದ 7 ವರ್ಷಗಳಿಂದ ಜಿಎಸ್‌ಟಿ ಕುರಿತು ಚರ್ಚೆ ನಡೆಯುತ್ತಿತ್ತು ಅದನ್ನೂ ಈಗ ಜಾರಿ ಮಾಡಿದೆವು’ ಎಂದರು.

‘ನಾವು ದೂರದೃಷ್ಟಿ ಇರಿಸಿ ಯೋಜನೆಗಳನ್ನು ತರುತ್ತೇವೆ, ತಕ್ಷಣ ಅದರ ಪರಿಣಾಮ ಗೊತ್ತಾಗುವುದಿಲ್ಲ .70 ವರ್ಷಗಳ ಹಿಂದಿನ ನಿಯಮಗಳನ್ನು ಬದಲಾವಣೆ ಮಾಡಿದಾಗ ಸ್ವಲ್ಪ ಸಮಸ್ಯೆಗಳು ಆಗುವುದು ಸಹಜ’ ಎಂದರು.

‘ಭಾರತ ದೇಶದ ಬದಲಾಗುತ್ತಿದ್ದು ನಿಮ್ಮ ಕನಸುಗಳು ಆಶೋತ್ತರಗಳು ಈಡೇರಿಸುವಲ್ಲಿ ನಾನು ಕೆಲಸ ಮುಂದುವರಿಸುತ್ತೇನೆ’ ಎಂದರು.

ಸಭೆಯಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಾರತೀಯರು ನೆರೆದು ಮೋದಿ ಪರ ಜೈಕಾರ ಹಾಕಿದರು. ಮೋದಿ..ಮೋದಿ.. ಭಾರತ್‌ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸಿದರು.

ಅಬುಧಾಬಿ-ದುಬೈ ರಾಷ್ಟ್ರಿಯ ಹೆದ್ದಾರಿಯಲ್ಲಿ ಭವ್ಯವಾದ ಸ್ವಾಮಿನಾರಾಯಣ ದೇವಾಲಯ ನಿರ್ಮಾಣಕ್ಕೆ ದುಬೈ ಸರಕಾರ ಅನುಮತಿ ನೀಡಿದೆ.

55 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ಈ ದೇವಾಲಯ ನಿರ್ಮಾಣವಾಗಲಿದೆ. 2020ರ ವೇಳೆಗೆ ಈ ದೇವಾಲಯ ನಿರ್ಮಾಣ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

Comments are closed.