ಕುಂದಾಪುರ: ವ್ಯಕ್ತಿಯೊಬ್ಬರಿಗೆ ಹೆಣ್ಣಿನ ಆಮೀಷವೊಡ್ಡಿ ಹಣ ನೀಡುವಂತೆ ಹನಿಟ್ರ್ಯಾಪ್ ನಡೆಸಿದ ಜಾಲವನ್ನು ಕುಂದಾಪುರ ಪೊಲೀಸರು ಬೇಧಿಸಿದ್ದು ಮಹಿಳೆ ಸಹಿತ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಾವುಂದ ಬಡಾಕೆರೆಯ ಸವದ್ ಯಾನೆ ಅಚ್ಚು (28), ಗುಲ್ವಾಡಿ ಗಾಂಧೀಕಟ್ಟೆಯ ಸೈಪುಲ್ಲಾ(38), ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್(36), ಕುಂಭಾಶಿ ಮೂಡುಗೋಪಾಡಿ ಜನತಾ ಕಾಲೋನಿಯ ಅಬ್ದುಲ್ ಸತ್ತಾರ್(23), ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿಯ ಅಬ್ದುಲ್ ಅಝೀಝ್(26), ಕುಂದಾಪುರ ಎಂ.ಕೋಡಿಯ ಆಸ್ಮಾ(43) ಬಂಧಿತ ಆರೋಪಿಗಳು.
ಆರೋಪಿಗಳನ್ನು ಕೋಟೇಶ್ವರ ಗ್ರಾಮದಲ್ಲಿ ವಶಕ್ಕೆ ಪಡೆದಿದ್ದು ಇವರಿಂದ ಕೃತ್ಯಕ್ಕೆ ಬಳಸಿದ ಒಟ್ಟು 18 ಲಕ್ಷ ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಪ್ರಕರಣದ ವಿವರ: ದೂರುದಾರ ವ್ಯಕ್ತಿಯು ಸುಮಾರು ಮೂರು ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಾಗ ಸವಾದ್ನ ಪರಿಚಯವಾಗಿದ್ದು, ಮುಂದೆ ಆತನ ಸ್ನೇಹಿತರಾದ ಉಳಿದ ಆರೋಪಿಗಳ ಪರಿಚಯ ಕೂಡ ಆಗಿತ್ತು. ಇದೇ ವೇಳೆ ಸವದ್, ಆಸ್ಮಾ ಎಂಬಾಕೆಯನ್ನು ಪರಿಚಯ ಮಾಡಿಕೊಟ್ಟು ಮೊಬೈಲ್ ನಂಬರ್ ಕೊಟ್ಟಿದ್ದನು. ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಬಹುದು ಎಂದು ತಿಳಿದು ಆಕೆಗೆ ದೂರುದಾರ ಕರೆ ಮಾಡಿದ್ದು, ಆತನನ್ನು ಆಕೆ ಕುಂದಾಪುರಕ್ಕೆ ಬರಲು ತಿಳಿಸಿದ್ದಳು. ಅದರಂತೆ ವ್ಯಕ್ತಿ ಸೆ.2ರಂದು ಸಂಜೆ 6:30ಕ್ಕೆ ಕುಂದಾಪುರದ ಪೆಟ್ರೋಲ್ ಬಂಕ್ ಬಳಿ ಹೋಗಿದ್ದರು. ಅಲ್ಲಿ ಆಸ್ಮಾ ವ್ಯಕ್ತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಳು ಎನ್ನಲಾಗಿದೆ.
ಬಳಿಕ ಆಸ್ಮಾ ಉಳಿದ ಆರೋಪಿಗಳನ್ನು ಕರೆ ಮಾಡಿ ಕರೆಯಿಸಿ ದೂರುದಾರನ ಬಳಿ 3 ಲಕ್ಷ ಹಣ ನೀಡುವಂತೆ ಬೆದರಿಸಿದರು. ಅವರಲ್ಲಿ ಮೊಹಮ್ಮದ್ ನಾಸೀರ್ ಶರೀಫ್ ಚಾಕು ತೋರಿಸಿ ಹಣ ಕೊಡುವಂತೆ ಹೆದರಿಸಿದ್ದನು ಎಂದು ದೂರಲಾಗಿದೆ. ಈ ವೇಳೆ ದೂರುದಾರ ಅಲ್ಲಿಂದ ಹೆದರಿ ಓಡಿ ಹೋಗಲು ಪ್ರಯತ್ನಿಸಿದಾಗ ಸವದ್ ಯಾನೆ ಅಚ್ಚು ಸೈಪುಲ್ಲಾ, ಮೊಹಮ್ಮದ್ ನಾಸೀರ್, ಶರೀಫ್, ಅಬ್ದುಲ್ ಸತ್ತಾರ್ ಮತ್ತು ಅಬ್ದುಲ್ ಅಝೀಝ್ ಸೇರಿ ಸಂದೀಪ್ ಅವರ ಕೈಗಳನ್ನು ಹಗ್ಗದಿಂದ ಕಟ್ಟಿ ಕೈಯಿಂದ ಹಲ್ಲೆ ಮಾಡಿದರೆನ್ನಲಾಗಿದೆ.
ದೂರುದಾರನಿಗೆ ರಾಡ್ನಿಂದ ಹೊಡೆದು ಬಳಿಕ ಅವರ ಪ್ಯಾಂಟ್ ಜೇಬಿನಲ್ಲಿದ್ದ 6,200ರೂ.ವನ್ನು ಬಲವಂತದಿಂದ ಕಸಿದುಕೊಂಡರು. ನಂತರ ಆಸ್ಮಾ ಆತನಿಗೆ ಗೂಗಲ್ ಫೇ ಮೂಲಕ ಹಣ ಹಾಕಲು ಒತ್ತಾಯಿಸಿದ್ದು, ಅದರಂತೆ ಪ್ರದೀಪ್ ಗೂಗಲ್ ಪೇ ಮೂಲಕ ಸೈಪುಲ್ಲಾನ ಖಾತೆಗೆ 5000ರೂ. ಹಣ ವರ್ಗಾವಣೆ ಮಾಡಿದ್ದರು.
ಬಳಿಕ ಆರೋಪಿಗಳು ಇನ್ನೂ ಹೆಚ್ಚಿನ ಹಣವನ್ನು ಹಾಕುವಂತೆ ಅತನಿಗೆ ಒತ್ತಾಯಿಸಿ, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ ಹಲ್ಲೆ ಮಾಡಿದರು. ಇದಕ್ಕೆ ಹೆದರಿದ ಆತ, ಸೈಪುಲ್ಲಾನ ಖಾತೆಗೆ 30ಸಾವಿರ ರೂ. ವರ್ಗಾವಣೆ ಮಾಡಿದರು. ನಂತರ ಮತ್ತೆ ಬಲತ್ಕಾರವಾಗಿ ಎಟಿಎಂ ಕಾರ್ಡ್ನ್ನು ಕಿತ್ತುಕೊಂಡು ಪಿನ್ ನಂಬರ್ ಪಡೆದುಕೊಂಡು, ಆಸ್ಮಾಳ ಮನೆಯ ರೂಮಿನಲ್ಲಿ ಕೂಡಿಹಾಕಿ ಸೈಪುಲ್ಯಾ ಮೊಹಮ್ಮದ್ ನಾಸೀರ್ ಶರೀಫ್ ಮತ್ತು ಅಬ್ದುಲ್ ಸತ್ತಾರ್ ಅಲ್ಲಿಯೇ ಇದ್ದು, ಅ ವ್ಯಕ್ತಿ ಬ್ಯಾಂಕ್ ಖಾತೆಯಿಂದ 40000ರೂ. ಹಣ ಡ್ರಾ ಮಾಡಿ ಕೊಂಡು, ಎಟಿಎಂ ಕಾರ್ಡ್ ಮತ್ತು ಹಣವನ್ನು ಇಟ್ಟುಕೊಂಡಿದ್ದಾರೆ. ಅತನನ್ನು ಅವರನ್ನು ರಾತ್ರಿ 11:30ರ ಸುಮಾರಿಗೆ ಬೆದರಿಸಿ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ವ್ಯಕ್ತಿ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕುಂದಾಪುರ ಪೊಲೀಸ್ ಠಾಣೆ ಉಪನಿರೀಕ್ಷಕರಾದ ನಂಜಾನಾಯ್ಕ್ ಎನ್., ಪುಷ್ಪ ಹಾಗೂ ಸಿಬ್ಬಂದಿಗಳಾದ ಪ್ರೀನ್ಸ್, ಘನಶ್ಯಾಮ್, ಚಾಲಕರಾದ ರಾಜು, ನಾಗೇಶ, ಮಹಾಬಲ, ರಾಘವೇಂದ್ರ, ಗೌತಮ್, ಭಾಗೀರತಿ ನಾಗಶ್ರೀ ಮತ್ತು ರೇವತಿ ಭಾಗವಹಿಸಿದ್ದರು.
Comments are closed.