ಕುಂದಾಪುರ: ನಾಲ್ಕು ಅಕ್ಷರ ಓದಿದ ಕೂಡಲೇ ಪಾಂಡಿತ್ಯ ಜಾಗೃತವಾಗೋದಿಲ್ಲ. ಜೀವನಾನುಭವವೇ ದೊಡ್ಡ ಪಾಂಡಿತ್ಯ ಎಂದು ಧಾರವಾಡದ ಹೆಬ್ಬಳ್ಳಿಯ ಶ್ರೀ ಬ್ರಹ್ಮಚೈತನ್ಯ ಸ್ಥಿರ ಪಾದುಕಾಶ್ರಮದ ಸದ್ಗುರು ದತ್ತಾವಧೂತ ಮಹರಾಜ್ ಅವರು ಹೇಳಿದರು.
ಬುಧವಾರ ಸಂಜೆ ಉಪ್ಪುಂದದ ಮಾದಯ್ಯ ಶೆಟ್ರಮನೆಯ ಮೂಲಸ್ಥಾನದ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ತೆರಳುವ ದಾರಿಯಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಾಗತ ಗೋಪುರದ ಲೋಕಾರ್ಪಣೆ ಮಾಡಿ, ದೇವರ ದರ್ಶನ ಪಡೆದು ಅವರು ಆಶೀರ್ವಚನ ನೀಡಿದರು.
ಜ್ಞಾನದ ಹೊಂದಿದ್ದರೂ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳದೆ, ಸ್ವಯಂ ಅಜ್ಞಾನಿ ಎನ್ನುವವನೇ ನಿಜವಾದ ಜ್ಞಾನಿ. ಶ್ರೀಮಂತಿಕೆ ಬೆನ್ನು ಹತ್ತಿದವರಿಗೆ ಜೀವನದಲ್ಲಿ ನೆಮ್ಮದಿಯೇ ಇರೋದಿಲ್ಲ. ತೋರಿಕೆಗಳು ಶಾಶ್ವತವಲ್ಲ ಎನ್ನುವುದನ್ನು ಜಗತ್ತಿಗೆ ತೋರಿಸಲೆಂದೇ ಮಹಾತ್ಮರು ಲಂಗೋಟಿ ಧಾರಣೆ ಮಾಡುತ್ತಿದ್ದರು. ಸುಖಕ್ಕಾಗಿ ವಿಶ್ರಾಂತಿ ಇಲ್ಲದೆ ದುಡಿಯುತ್ತಲೇ ಇರುವವರಿಗೆ ಸುಖದ ಪ್ರಾಪ್ತಿಯೇ ಆಗೋದಿಲ್ಲ. ಜೀವನದಲ್ಲಿ ಪರಿಪೂರ್ಣ ಸಂತೃಪ್ತಿ ಹೊಂದಿದವರಿಗೆ ಮಾತ್ರ ಸುಖ ಹಾಗೂ ನೆಮ್ಮದಿ ದೊರಕುತ್ತದೆ. ಅಂತರಾಳದಲ್ಲಿನ ಇರುವ ಭಗವಂತನನ್ನು ಭಕ್ತಿಯಿಂದ ಸಾಕ್ಷಾತ್ಕಾರವಾಗಿಸಿಕೊಳ್ಳಬೇಕು. ಸತ್ಕರ್ಮದಲ್ಲಿ ಕಾಲಕ್ಷೇಪ ಮಾಡಲು ಅವಕಾಶ ನೀಡುವ ದೇವಸ್ಥಾನ ಅಥವಾ ಮಂದಿರ ಕಟ್ಟಬೇಕಾದರೆ ಜನ್ಮ ಜನ್ಮಾಂತರಗಳ ಪುಣ್ಯಫಲ ಬೇಕು.
ಜಗತ್ತಿನಲ್ಲಿನ ಶ್ರೀರಾಮನ ಭಕ್ತರು ಬರೆದಿರುವ 165 ಕೋಟಿ ರಾಮ ನಾಮ ಜಪ ಬರೆದಿರುವ ಪುಸ್ತಕಗಳನ್ನು ಜೋಪಾನವಾಗಿ ಇಡಲು ಹೆಬ್ಬುಳ್ಳಿಯಲ್ಲಿ ಭವ್ಯ ಮಂದಿರ ಕಟ್ಟಿಸಲಾಗಿದೆ. ಭಗವಂತನ ಕಡೆಗೆ ಅಭಿಮುಖವಾಗಿಸುವ ಸಂಕೇತಗಳೇ ಭಗವತ್ ಮಂದಿರಗಳಾಗಿದೆ. ಚೈತನ್ಯಗಳನ್ನು ಬಿಂಬಗಳಲ್ಲಿ ತುಂಬಿ ಚೈತನ್ಯ ಜಾಗೃತಿಗೊಳಿಸುವುದೇ ನಿಜವಾದ ಪ್ರಾಣ ಪ್ರತಿಷ್ಠೆ. ಧರ್ಮ ಕಾರ್ಯ ನಡೆಸುವವರಿಗೆ ಸಮಸ್ಯೆ ಪರಿಹಾರ ಸರಳವಾಗಿರುತ್ತದೆ. ಸತ್ಸಂಗದಲ್ಲಿ ಭಗವಂತ ನಮಗೆ ಹತ್ತಿರವಾಗುತ್ತಾರೆ. ಭಕ್ತಿ ಮತ್ತು ಭಗವಂತ ಎನ್ನುವ ತತ್ವ ಶಾಶ್ವತವಾಗಿರುತ್ತದೆ. ಸ್ಮರಣೆಗಳು ಭಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಉಪಾಸನೆ, ಅನುಷ್ಠಾನ ಹಾಗೂ ಭಗವಂತನೊಂದಿಗಿನ ಅನುಸಂಧಾನ ಭಕ್ತಿಯನ್ನು ನೆಲೆಗೊಳಿಸುತ್ತದೆ ಎಂದರು.
ಉಪ್ಪುಂದ ಮಾದಯ್ಯ ಶೆಟ್ರಮನೆ ಮೂಲಸ್ಥಾನ ಕುಟುಂಬದ ಯು.ಸೀತಾರಾಮ ಶೆಟ್ಟಿ, ಜಲಜಾಕ್ಷಿ ಎಂ ಶೆಟ್ಟಿ, ನಾರಾಯಣ ಎಂ ಶೆಟ್ಟಿ, ಭುಜಂಗ ಎಂ ಶೆಟ್ಟಿ, ಹರೀಶ್ಕುಮಾರ ಶೆಟ್ಟಿ, ಜ್ಯೋತಿ ಆರ್ ಶೆಟ್ಟಿ, ಪತ್ರಕರ್ತ ರಾಜೇಶ್ ಕೆ.ಸಿ ಇದ್ದರು.
ಭಜನಾ ಕೇಸರಿ ಮಂಜುನಾಥ ಮತ್ತು ಸಂಗಡಿಗರಿಂದ ಭಜನಾ ಕಾರ್ಯಕ್ರಮ ಹಾಗೂ ಹೆಬ್ಬಳ್ಳಿ ಅವಧೂತರ ಉಪಸ್ಥಿತಿಯಲ್ಲಿ ಸಾಮೂಹಿಕ ಹನುಮಾನ್ ಚಾಲೀಸ್ ಪಠಣ ನಡೆಯಿತು.
Comments are closed.