ಕರಾವಳಿ

ಮಹಿಳೆಯ ಚಿನ್ನದ ಸರ ಸುಲಿಗೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿದ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು

Pinterest LinkedIn Tumblr

ಕುಂದಾಪುರ: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು 75 ವರ್ಷ ಪ್ರಾಯದ ಬಾಬಿ ದಾಸ್ ಎನ್ನುವರ ಬಳಿ ನೀರು ಕೇಳುವ ನೆಪದಲ್ಲಿ ಮಾತನಾಡಿಸಿ 8 ಗ್ರಾಂ ತೂಕದ ಚಿನ್ನದ ಸರ ಎಳೆದೊಯ್ದ ಘಟನೆ ಮಾ.5 ರಂದು ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ಗುಡ್ರಿ ಎಂಬಲ್ಲಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲ್ಬುರಗಿ ಅಫಜಲ್‌ಪುರ ಹಾಗರಗಿ ಮೂಲದ ಪ್ರಸ್ತುತ ಬೆಂಗಳೂರು ಯಲಹಂಕ ನಿವಾಸಿ ವಿಜಯ ಕುಮಾರ್‌ (23), ಕುಂದಾಪುರ ನೇರಳಕಟ್ಟೆ ಹಿಲ್ಕೋಡು‌ ಮೂಲದ ಪ್ರಸ್ತುತ ಯಲಹಂಕ ನಿವಾಸಿ ಮನೋಜ್‌‌ (27) ಬಂಧಿತ ಆರೋಪಿಗಳು. ಪಿಎಸ್ಐ ನೂತನ್‌ ಡಿ.ಈ ಅವರ ತಂಡ
ಮಾ.11 ರಂದು ಬೆಳಿಗ್ಗೆ ನೇರಳಕಟ್ಟೆ ಬಳಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಸುಲಿಗೆ ಮಾಡಿದ ಚಿನ್ನದ ಚೈನ್‌ ಸರ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು ಇದರ ಮೌಲ್ಯ 1,50,000 ರೂ. ಎಂದು ಅಂದಾಜಿಸಲಾಗಿದೆ.

ಘಟನೆ ಹಿನ್ನೆಲೆ: ನೇರಳಕಟ್ಟೆ ಗುಡ್ರಿ ಎಂಬಲ್ಲಿ ರಾಜ್ಯ ಹೆದ್ದಾರಿ-27 ಅಂಚಿನಲ್ಲಿ ಗೂಡಂಗಡಿಯಿಟ್ಟುಕೊಂಡಿದ್ದ ಬಾಬಿ ದಾಸ್‌ ಒಂಟಿಯಾಗಿದ್ದ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ಯುವಕರಿಬ್ಬರು ನೀರು ಕೇಳಿ ಅಂಗಡಿಗೆ ಬಂದು ಬಾಬಿಯವರ ಕುತ್ತಿಗೆಯಲ್ಲಿದ್ದ 8ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದು ಈ ಬಗ್ಗೆ ಕುಂದಾಪುರ ಗ್ರಾಮಾಂತರ
ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಉಡುಪಿ ಜಿಲ್ಲಾ ಎಸ್ಪಿ ಅರುಣ್‌ ಕೆ. ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ , ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಈ ಪ್ರಕರಣದ ತನಿಖಾಧಿಕಾರಿ ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಜಯರಾಮ ಡಿ. ಗೌಡ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪಿಎಸ್ಐಗಳಾದ ಭೀಮಾಶಂಕರ್‌, ನೂತನ್‌ ಡಿ.ಈ., ಶಂಕರನಾರಾಯಣ ಠಾಣೆ ಪಿಎಸ್ಐ ಶಂಭುಲಿಂಗ ಮತ್ತ ಕುಂದಾಪುರ ಉಪವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಗಳ ಪತ್ತೆಯಲ್ಲಿ ಕುಂದಾಪುರ ಉಪವಿಭಾಗದ ಠಾಣೆಯ ಎ.ಎಸ್.ಐ ಸೀತಾರಾಮ ಹಾಗೂ ಸಿಬ್ಬಂದಿಗಳಾದ ರಾಜು, ಚಿದಾನಂದ, ಕಿಶನ್‌, ಗುರುರಾಜ್‌, ಮಂಜುನಾಥ, ಸಚಿನ್, ನವೀನ್‌‌‌, ಮೌನೇಶ್‌, ರಾಮು ಹೆಗ್ಡೆ, ರಾಘವೇಂದ್ರ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಸಹಕರಿಸಿದ್ದರು.

Comments are closed.