ಕರಾವಳಿ

ಕುಂದಾಪುರದಲ್ಲಿ ಸೌಹಾರ್ದತೆಯ ಸಂದೇಶ ಸಾರಿದ ‘ಮಾನವ ಸರಪಳಿ’

Pinterest LinkedIn Tumblr

ಕುಂದಾಪುರ: ಮಹಾತ್ಮ ಗಾಂಧಿಯವರು ಹುತಾತ್ಮರಾದ ದಿನವಾದ ಜ.30 ರಂದು ಕರ್ನಾಟಕ ರಾಜ್ಯಾದ್ಯಂತ ಹಮ್ಮಿಕೊಂಡ ಕರ್ನಾಟಕ ಸೌಹಾರ್ದ ಪರಂಪರೆಯ ಮಹಾಸಂಕಲ್ಪ‌ ದಿನದಂದು ಸಮಾನ ಮನಸ್ಕ ವಿವಿಧ ಸಂಘನೆಗಳ ಆಶ್ರಯದಲ್ಲಿ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಬ್ರಹತ್ ‘ಮಾನವ ಸರಪಳಿ’ ನಡೆಸಲಾಯಿತು.

ಬಳಿಕ ತಾ.ಪಂ ಎದುರು ನಡೆದ ಶಾಂತಿ ಸಂದೇಶ ಸಭೆಯಲ್ಲಿ ಮಾತನಾಡಿದ ಚಿಂತಕ ಡಾ. ದಿನೇಶ್ ಹೆಗ್ಡೆ, ಗಾಂಧೀ ಹುತಾತ್ಮರ ದಿನದಂದು ಮಾನವ ಸರಪಳಿ ರಚಿಸುವ ಮೂಲಕ ಶಾಂತಿ, ಸಮನ್ವಯತೆ, ಸಹಬಾಳ್ವೆಗೆ ಕರೆಕೊಡುವ ಚಳುವಳಿ ಇದಾಗಿದೆ. ಸಾವಿರಾರು ವರ್ಷಗಳ ಸಹಬಾಳ್ವೆಯಿರುವ ದೇಶದಲ್ಲಿ ನಾವಿದ್ದೇವೆ. ಇತಿಹಾಸದಲ್ಲಿ ಹಲವು ಘಟನೆಗಳು ನಡೆದಿದ್ದು ಅದು ಪ್ರಭುತ್ವದ ಒಳಗಿನ ಅಧಿಕಾರದ ಸಂಘರ್ಷ ಹೊರತು‌ ಜನಸಾಮಾನ್ಯರದ್ದಲ್ಲ. ಜನರ ಮದ್ಯೆ ಸಹಬಾಳ್ವೆ ಇಂದಿಗೂ ಇದೆ. ವರ್ಣಬೇಧ, ಜಾತಿ-ನೀತಿಗಳಿಂದ ಅನ್ಯಾಯಗಳಾಗಿದ್ದು ಅದನ್ನು ವಿರೋಧಿಸಿ ಹೋರಾಟಗಳು ನಡೆದಿದ್ದು ಬುದ್ಧ, ಬಸವ, ನಾರಾಯಣಗುರುಗಳು, ಜ್ಯೋತಿ ಬಾಪುಲೆ, ಫಾತಿಮಾ ಮೊದಲಾದ ದಾರ್ಶನಿಕರು ಹುಟ್ಟಿದ್ದು, ಶಿಕ್ಷಣಸಹಿತ ವಿವಿಧ ಕ್ಷೇತ್ರಕ್ಕೆ ಕೊಡುಗೆ ನೀಡಿ ದೀನದಲಿತರಲ್ಲಿ ಚೈತನ್ಯ ಮೂಡಿಸಿದರು. ಬಳಿಕ ಅಂಬೇಡ್ಕರ್ ಹಾಗೂ ಗಾಂಧಿಯವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. 1915-47 ರತನಕದ ಸಮಯ ಭಾರತದಲ್ಲಿ ಗಾಂಧಿ ತುಗವಾಗಿದೆ. ಸತ್ಯಶೋಧಕರಾಗಿ, ಅಹಿಂಸಾ ಮಾರ್ಗದಲ್ಲಿ ತೊಡಗಿಸಿಕೊಂಡ ವ್ಯಕ್ತಿತ್ವ ಗಾಂಧಿವರದ್ದು. ಹಿಂಸೆ ಪ್ರಾಣಿಗಳ, ಬಲಹೀನ, ದುರ್ಬಲರ ಮಾರ್ಗ. ಅಹಿಂಸೆಯೆಂಬುದು ಬಲಶಾಲಿಗಳ ಮಾರ್ಗ ಎಂಬುದು ಗಾಂಧಿಯವರ ವಿಚಾಧಾರೆಯಾಗಿತ್ತು. ರಾಜ್ಯ, ಸರಕಾರ‌ ಪ್ರಧಾನವಲ್ಲ ಬದಲಾಗಿ ಜನರ ಪರವಾಗಿರಬೇಕು ಎಂಬುದನ್ನು‌ ಪ್ರತಿಪಾದಿಸಿದರು.‌ಶೋಷಣೆ ಮಾಡುವ, ಜನವಿರೋಧಿಯಾದ ಕಾನೂನನ್ನು ವಿರೋಧಿಸಿದ ಅವರ ತತ್ವ ಇಂದಿಗೂ ಒಪ್ಪಬೇಕಿದೆ. ಅಂಬೇಡ್ಕರ್ ಅವರ ಜ್ಞಾನವನ್ನು ಗಾಂಧಿ ಮೆಚ್ಚಿಕೊಂಡಿದ್ದು ಇಬ್ಬರ ವಿಚಾರಧಾರೆಗಳಿಗೆ ಸಾಮ್ಯತೆಯಿತ್ತು ಎಂದರು.

ಸಹಬಾಳ್ವೆ ಕುಂದಾಪುರದ ರಾಮಕೃಷ್ಣ ಹೇರ್ಳೆ, ಉಡುಪಿ ಜಿಲ್ಲಾ ಮುಸ್ಲೀಂ ಒಕ್ಕೂಟದ ಕುಂದಾಪುರ ತಾಲೂಕು ಘಟಕದಿಂದ ದಸ್ತಗಿರಿ ಸಾಹೇಬ್ ಕಂಡ್ಲೂರು, ರಿಯಾಝ್ ಕೋಡಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವಾಸುದೇವ ಮುದೂರು, ಟಿ. ಮಂಜುನಾಥ ಗಿಳಿಯಾರು, ದಸಂಸ ಭೀಮಘರ್ಜನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯಕುಮಾರ್ ತಲ್ಲೂರು, ವಿಜಯ ಕೆ.ಎಸ್., ಸಮುದಾಯ ಕುಂದಾಪುರದ ಬಾಲಕೃಷ್ಣ ಕೆ.ಎಂ., ಕ್ಯಾಥೋಲಿಕ್ ಸಭಾ ಕುಂದಾಪುರ ವಲಯದ ವಿಲ್ಸನ್ ಅಲ್ಮೇಡಾ, ಸಿಐಟಿಯು ಕುಂದಾಪುರದ ಎಚ್. ನರಸಿಂಹ, ಜನವಾದಿ ಮಹಿಳಾ ಸಂಘಟನೆಯ ಬಲ್ಕೀಸ್, ಡಿ.ವೈ.ಎಫ್.ಐ ಸಂಘಟನೆಯ ರಾಜಾ ಬಿ.ಟಿ.ಆರ್., ಮಾನವ ಬಂಧುತ್ವ ವೇದಿಕೆಯ ಅಶೋಕ್ ಸುವರ್ಣ, ಕರ್ನಾಟಕ ಮುಸ್ಲೀಂ ಜಮಾತೆಯ ಮಹಮ್ಮದ್ ರಫಿಕ್ ಗಂಗೊಳ್ಳಿ, ದಲಿತ ಹಕ್ಕುಗಳ ಸಮಿತಿ ಕುಂದಾಪುರದ ರವಿ ವಿ.ಎಮ್ ಮೊದಲಾದವರಿದ್ದರು.

ಸೌಹಾರ್ದ ಕರ್ನಾಟಕದ ಸಂಚಾಲಕ ಚಂದ್ರಶೇಖರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ವಂದಿಸಿದರು.

ಇದೇ ಸಂದರ್ಭ ತ್ರಾಸಿ, ಹೆಮ್ಮಾಡಿ, ತಲ್ಲೂರು, ಸಂಗಮ್, ಕುಂದಾಪುರ ಶಾಸ್ತ್ರೀ ವೃತ್ತ ಬಳಿ ಸರ್ವೀಸ್ ರಸ್ತೆ, ಬಸ್ರೂರು ಮೂರುಕೈ, ಕೋಟೇಶ್ವರದಲ್ಲೂ ಮಾನವ ಸರಪಳಿ ನಡೆಯಿತು.

Comments are closed.