ಕರಾವಳಿ

ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಲು ಕೇಂದ್ರ ರೈಲ್ವೇ ಸಚಿವರಿಗೆ ಮನವಿ: ಸಂಸದ ಬಿ.ವೈ. ರಾಘವೇಂದ್ರ

Pinterest LinkedIn Tumblr

ಉಡುಪಿ: ಬೆಂಗಳೂರಿನಿಂದ ಮಂಗಳೂರು ಬೈಂದೂರು ಮಾರ್ಗವಾಗಿ ಕಾರವಾರಕ್ಕೆ ರೈಲು ಸೇವೆಗಳನ್ನು ನೇರ ಮಾರ್ಗದಲ್ಲಿ ವಿಸ್ತರಿಸಿದ್ದಕ್ಕೆ ಹಾಗೂ ಎಸ್.ಎಂ.ವಿ.ಟಿ ಬೆಂಗಳೂರಿನಿಂದ ಮಂಗಳೂರುವರೆಗೆ ಇದ್ದ ರೈಲಿನ ಸೇವೆಗಳನ್ನು ಮುರ್ಡೇಶ್ವರದವರೆಗೆ ವಿಸ್ತರಿಸಿದ್ದಕ್ಕಾಗಿ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ಬಿ.ವೈ ರಾಘವೇಂದ್ರ ಕೃತಜ್ಞತೆ ತಿಳಿಸಿದ್ದಾರೆ‌.

ಬೈಂದೂರು ಶಾಸಕ ಗುರುರಾಜ್ ಶಟ್ಟಿ ಗಂಟಿಹೊಳೆ ಅವರು ರೈಲು ಸಂಖ್ಯೆ 16595/16596 ಪಂಚಗಂಗಾ ಎಕ್ಸ್‌ಪ್ರೆಸ್‌ನ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಬೇಕೆಂದು ಮನವಿ ಮಾಡಿದ್ದು ಇದು ಕರಾವಳಿ ಕರ್ನಾಟಕ ಪ್ರದೇಶದ ಸಾರ್ವಜನಿಕರ ನಿರಂತರ ಬೇಡಿಕೆ ಕೂಡ ಆಗಿದೆ. ಪ್ರಸ್ತುತ ಎಲ್ಲಾ ಇತರ ರೈಲುಗಳು 22 ಎಲ್.ಎಚ್.ಬಿ ಕೋಚ್‌ಗಳೊಂದಿಗೆ ಓಡುತ್ತಿದ್ದರೂ, ಪಂಚಗಂಗಾ ಎಕ್ಸ್ ಪ್ರೆಸ್ ರೈಲು ಕೇವಲ 14 ಎಲ್.ಎಚ್.ಬಿ ಕೋಚ್‌ಗಳೊಂದಿಗೆ ಓಡುತ್ತಿದೆ. ಕರಾವಳಿ ಕರ್ನಾಟಕ ಪ್ರದೇಶದಿಂದ ಬೆಂಗಳೂರಿಗೆ ಕನಿಷ್ಠ ಸಮಯದೊಂದಿಗೆ ತಲುಪುವ ಏಕೈಕ ರೈಲು ಇದಾಗಿದ್ದು, ಈ ರೈಲಿನಲ್ಲಿ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಅತ್ಯಗತ್ಯ. ಶಿರಾಡಿ ಘಾಟ್ ಮೂಲಕ ರಸ್ತೆ ಪ್ರಯಾಣ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇತರ ಘಾಟ್ ರಸ್ತೆಗಳೂ ಹಾಳಾಗಿವೆ. ಕರಾವಳಿ ಕರ್ನಾಟಕ ಪ್ರದೇಶಕ್ಕೆ ಬೇರೆ ಯಾವುದೇ ಪರ್ಯಾಯ ರೈಲು ಮಾರ್ಗ ಲಭ್ಯವಿಲ್ಲ. ಅನೇಕ ಜನರು ತಮ್ಮ ಜೀವನೋಪಾಯಕ್ಕಾಗಿ ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಅವಲಂಬಿಸಿದ್ದಾರೆ ಮತ್ತು ನಿರಂತರವಾಗಿ ಬೆಂಗಳೂರಿನಿಂದ ಕರಾವಳಿಗೆ ಹಾಗೂ ಕರಾವಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ.

ಪಂಚಗಂಗಾ ರೈಲು ಸುಬ್ರಹ್ಮಣ್ಯ, ಕಟೀಲು, ಧರ್ಮಸ್ಥಳ, ಉಡುಪಿ, ಕೊಲ್ಲೂರು, ಮುರ್ಡೇಶ್ವರ, ಗೋಕರ್ಣ ಮುಂತಾದ ಯಾತ್ರಾ ಕೇಂದ್ರಗಳ ಜೊತೆಗೆ ಮಣಿಪಾಲ, ಮೂಡಬಿದ್ರೆ, ಮಂಗಳೂರು ಹಾಗೂ ಇತರೆ ಭಾಗಗಳ ಶಿಕ್ಷಣ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಸಂಘಟಿತ ಕಾರ್ಮಿಕರಿಗೆ ರೈಲು ಅತ್ಯಂತ ಅಗ್ಗದ ಮತ್ತು ಅನುಕೂಲಕರ ಸಾರಿಗೆ ಸಂಪರ್ಕವಾಗಿದೆ. ಪ್ರಸ್ತುತ ಈಗಿರುವ ಪಂಚಗಂಗಾ ರೈಲಿನ ನಿರ್ಗಮನ ಹಾಗೂ ಆಗಮನದ ಸಮಯದಲ್ಲಿ ಯಾವುದೇ ವ್ಯತ್ಯಾಸಗಳು ಆಗದ ರೀತಿಯಲ್ಲಿ ಬೋಗಿಗಳನ್ನು ಹೆಚ್ಚಿಸಲು ಅವಕಾಶವಿದೆ. ಆದ್ದರಿಂದ ರೈಲು ಸಂಖ್ಯೆ 16595/16596 ಪಂಚಗಂಗಾ ಎಕ್ಸ್‌ಪ್ರೆಸ್‌ನ 14 ಎಲ್.ಎಚ್.ಬಿ. ಕೋಚ್‌ಗಳನ್ನು 22 ಎಲ್.ಎಚ್.ಬಿ ಕೋಚ್‌ಗಳಿಗೆ ಬೆಂಗಳೂರು ಹಾಗೂ ಕಾರವಾರದ ಆಗಮನ ಮತ್ತು ನಿರ್ಗಮನ ಸಮಯದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಹೆಚ್ಚಿಸುವ ಮೂಲಕ ಕರಾವಳಿ ಕರ್ನಾಟಕದ ಜನರಿಗೆ ಅನುಕೂಲ ಮಾಡಿಕೊಡಬೇಕೇಂದು ಸಚಿವರಲ್ಲಿ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರು ವಿನಂತಿಸಿದ್ದಾರೆ.

Comments are closed.