ಕುಂದಾಪುರ: ತಿರುಪತಿ ಯಾತ್ರೆಗೆ ಮನೆಮಂದಿ ತೆರಳಿದ್ದ ವೇಳೆ ಮನೆ ಕಳ್ಳತನ ನಡೆದ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಜನ್ಸಾಲೆ ಎಂಬಲ್ಲಿ ವರದಿಯಾಗಿದೆ.

ಇಲ್ಲಿನ ಸುಕನ್ಯಾ ಕಿಣಿ ಎನ್ನುವರು ಗುರುವಾರ ತಿರುಪತಿ ದರ್ಶನಕ್ಕೆಂದು ತೆರಳಿದ್ದಾಗ ಕಳ್ಳತನ ಕೃತ್ಯ ನಡೆದಿದೆ ಎನ್ನಲಾಗಿದ್ದು ಭಾನುವಾರ ಮುಂಜಾನೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಕುಂದಾಪುರ-ಸಿದ್ದಾಪುರ ಮುಖ್ಯ ರಸ್ತೆ ಸಮೀಪದಲ್ಲಿಯೇ ಮನೆಯಿದ್ದು ತಿರುಪತಿ ದರ್ಶನ ಮುಗಿಸಿ ಬೆಳಿಗ್ಗೆ ಬಂದಾಗ ಮನೆ ಎದುರಿನ ಗೇಟ್ ಬೀಗ ಹಾಗೆ ಇದ್ದು ಮನೆಯ ಮುಖ್ಯ ದ್ವಾರದ ಬೀಗವನ್ನು ಒಡೆದು ಬಾವಿಗೆ ಎಸೆದಿರುವುದು ತಿಳಿದುಬಂದಿದೆ. ಮನೆಯ ಒಳಗಿನ ಕಪಾಟಿನಲ್ಲಿದ್ದ 5 ಪವನ್ ತೂಕದ ಮುತ್ತು ಹವಳ ಮಿಶ್ರಿತ ಚಿನ್ನ, ಒಂದು ಪವನ್ ಚಿನ್ನದ ನಾಣ್ಯ, ಹತ್ತು ಸಾವಿರ ರೂ. ನಗದು ಹಾಗೂ ಬೆಳ್ಳಿ ಸಾಮಾನು ಕದ್ದು ಪರಾರಿಯಾಗಿದ್ದಾರೆ. ಕಪಾಟಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ. ಲಕ್ಷಾಂತರ ಮೌಲ್ಯದ ಸೊತ್ತುಗಳು ಕಳವಾಗಿದೆ.
ಸ್ಥಳಕ್ಕೆ ಶಂಕರನಾರಾಯಣ ಠಾಣೆ ಉಪನಿರೀಕ್ಷಕ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು, ಬೆರಳಚ್ಚು ತಜ್ಙರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
Comments are closed.