ಕರಾವಳಿ

ಆಳದ ಬಾವಿಗೆ ಬಿದ್ದ ಸಾಕು ನಾಯಿ ರಕ್ಷಿಸಿದ ಕುಂದಾಪುರ ಅಗ್ನಿಶಾಮಕ ಸಿಬ್ಬಂದಿ

Pinterest LinkedIn Tumblr

ಕುಂದಾಪುರ: ಮನೆಯೊಂದರ ಹಿತ್ತಲಿನಲ್ಲಿದ್ದ ಆಳದ ಬಾವಿಗೆ ಬಿದ್ದ ಸಾಕು ನಾಯಿಯನ್ನು ಕುಂದಾಪುರ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿ ಕರ್ತವ್ಯ ಪ್ರಜ್ಞೆಯೊಂದಿಗೆ ಮಾನವೀಯತೆ ಮೆರೆದಿದ್ದಾರೆ.

ಹಟ್ಟಿಯಂಗಡಿಯ ಕನ್ಯಾಣಗುಡ್ಡೆ ಎಂಬಲ್ಲಿ ಮನೆಯ ಹಿತ್ತಲಿನಲ್ಲಿರುವ ಸುಮಾರು 45 ಅಡಿ ಆಳ, 20 ಅಡಿ ಅಗಲದ ಬಾವಿಯಲ್ಲಿ 4 ಅಡಿ ನೀರಿದ್ದು ಜೂ.25 ರಂದು
ಪಕ್ಕದ ಮನೆಯ ಸಾಕು ನಾಯಿ ಬಿದ್ದಿತ್ತು. ನಾಯಿಯ ರಕ್ಷಣೆಗೆ ಕನ್ಯಾಣಗುಡ್ಡೆಯ ನಿವಾಸಿ ಕರೆ ಮಾಡಿದ ತಕ್ಷಣ ಕುಂದಾಪುರ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಕೃಷ್ಣಾನಂದ ಟಿ. ಗೌಡ, ಪ್ರಮುಖ ಅಗ್ನಿಶಾಮಕ ಬಾಲಕೃಷ್ಣ, ಚಾಲಕ ಬಸವರಾಜ, ಅಗ್ನಿಶಾಮಕರಾದ ಕೃಷ್ಣ ನಾಯ್ಕ, ಚಂದ್ರಕಾಂತ ಜೆ. ನಾಯ್ಕ, ದಿನೇಶ ಹಾಗೂ ನವ ಚಾಲಕ ಸಚಿನ್ ಸ್ಥಳಕ್ಕೆ ತೆರಳಿದ್ದರು.

ಬಾವಿಯಲ್ಲಿ ಗಿಡಗಂಟಿಗಳು ಬೆಳೆದು ಬಾವಿಯ ಒಳಗೆ ಮಣ್ಣು ಅಲ್ಲಲ್ಲಿ ಕುಸಿಯುವ ಸ್ಥಿತಿಯಲ್ಲಿದ್ದರೂ ಕೂಡ ಅಗ್ನಿಶಾಮಕ ದಿನೇಶ‌ ಅವರು ಬಾವಿಗೆ ಇಳಿದಿದ್ದು ಭೀತಿಗೊಳಗಾಗಿದ್ದ ನಾಯಿಯ ಎಗರಾಟದಿಂದ ತಪ್ಪಿಸಿಕೊಂಡು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ರನ್ನಿಂಗ್ ಬೋ ಲೈನ್ ಹಗ್ಗದಿಂದ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.

Comments are closed.