ಕರಾವಳಿ

ಭೋಪಾಲ್‌ನಲ್ಲಿ ಕರ್ತವ್ಯದಲ್ಲಿರುವಾಗಲೇ ಮಂಗಳೂರು ಮೂಲದ ಯೋಧ ಮುರಳೀಧರ್‌ ರೈ ವಿಧಿವಶ

Pinterest LinkedIn Tumblr

ಮಂಗಳೂರು: ಸಶಸ್ತ್ರ ಸೀಮಾಪಡೆ ಭೋಪಾಲ್‌ನಲ್ಲಿ ಸೇವಾ ನಿರತರಾಗಿದ್ದ ಮಂಗಳೂರು ಶಕ್ತಿನಗರದ ನಿವಾಸಿ ಹವಾಲ್ದಾರ್‌ ಮುರಳೀಧರ್‌ ರೈ (37) ಅವರು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಭಾನುವಾರ ಭೋಪಾಲ್‌ನಲ್ಲಿ ಅವರಿಗೆ ಹೃದಯಾಘಾತವಾಗಿದ್ದು, ಮಾರನೇ ದಿನ ಅಂದೇ ಸೋಮವಾರ ಜತೆಗಿದ್ದವರು ಕರೆದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ವೈದ್ಯರು ಪರೀಕ್ಷಿಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.

ಮುರಳೀಧರ್‌ ರೈ ಅವರು 2007ರಲ್ಲಿ ಕಾನ್‌ಸ್ಟೆಬಲ್‌ ಆಗಿ ಸಶಸ್ತ್ರ ಸೀಮಾ ಬಲ್‌ಗೆ ಸೇರಿದ್ದರು. ಫೆ. 5ರಂದು ನಡೆಯಲಿದ್ದ ತಾಯಿಯ ನಿಧನದ ಮೊದಲ ವರ್ಷದ ಕಾರ್ಯಕ್ರಮಕ್ಕಾಗಿ ಎರಡು ವಾರದ ರಜೆಯಲ್ಲಿ ಮಂಗಳವಾರ ಹೊರಟು ಬುಧವಾರ ಊರಿಗೆ ಬರುವವರಿದ್ದರು. ಅವರು ಪತ್ನಿ ಹಾಗೂ ಏಳು ತಿಂಗಳ ಮಗುವನ್ನು ಅಗಲಿದ್ದಾರೆ.

ಇಂದು ಅಂತ್ಯಸಂಸ್ಕಾರ
ಭೋಪಾಲ್‌ನಿಂದ ವಿಮಾನದ ಮೂಲಕ ಮುರಳೀಧರ ಅವರ ಮೃತದೇಹವನ್ನು ಮಂಗಳವಾರದಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು. ಡಿಸಿ ರವಿ ಕುಮಾರ್‌ ಎಂ.ಆರ್‌., ಜಿ.ಪಂ. ಸಿಇಒ ಡಾ| ಕುಮಾರ್‌, ಸಹಾಯಕ ಆಯುಕ್ತ ಮದನ್‌ ಮೋಹನ್‌ ಮೊದಲಾದವರು ಅಂತಿಮ ನಮನ ಸಲ್ಲಿಸಿದರು. ಮೃತದೇಹವನ್ನು ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು ಬುಧವಾರ ಶಕ್ತಿನಗರದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ.

Comments are closed.