ಕರಾವಳಿ

ಕಾರ್ಕಳದ ಮನೆಯಲ್ಲಿ 9.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಖತರ್ನಾಕ್ ಆರೋಪಿ, ಸಹಕರಿಸಿದ ಮಹಿಳೆ ಬಂಧನ..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಲ್ಯಾ ಗ್ರಾಮದಲ್ಲಿ ಡಿ.3 ರಂದು ಮನೆಯೊಂದಕ್ಕೆ ನುಗ್ಗಿ 9.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣದಲ್ಲಿ ಆರೋಪಿ ಹಾಗೂ ಆತನಿಗೆ ಸಹಕರಿಸಿದ ಓರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ಕಲ್ಯಾದ ಮನೆಯೊಂದರ ಬಾಗಿಲು ಮುರಿದು ಒಳ ಪ್ರವೇಶಿಸಿ ಕೊಠಡಿಯಲ್ಲಿದ್ದ ಗೋದ್ರೇಜ್‌ನ ಬೀಗ ಮುರಿದು ಒಳಗಿದ್ದ 9,75,000‌ರೂ. ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಮನೆಯೊಡತಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಕೈಗೆತ್ತಿಕೊಂಡ ಕಾರ್ಕಳ ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್‌ರವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಬಂಟ್ವಾಳ ಅರಂಬೋಡಿ ಗ್ರಾಮದ ಪ್ರಸಾದ್ ಅಲಿಯಾಸ್ ಪಚ್ಚು (34) ಹಾಗೂ ಕಳ್ಳತನ ಕೃತ್ಯಕ್ಕೆ ಮಾಹಿತಿ ನೀಡಿ ಸಹಕರಿಸಿದ ಕಾರ್ಕಳ ಕಲ್ಯಾ ಮೂಲದ ಶಿಬಾ (39) ಎನ್ನುವರನ್ನು ಡಿ.21 ರಂದು ಬಂಧಿಸಲಾಗಿದೆ. ಆರೋಪಿಗಳಿಂದ ಕಳ್ಳತನವಾಗಿದ್ದ ರೂ 9 ಲಕ್ಷ 75 ಸಾವಿರ ರೂ. ಮೌಲ್ಯದ 216 ಗ್ರಾಂ ಚಿನ್ನದ ಆಭರಣ, 77 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನು ವಶಪಡಿಸಲಾಗಿದೆ.

ಕೊಲೆ, ಪೋಕ್ಸೋ, ಕಳವು ಪ್ರಕರದ ಆರೋಪಿ:
ಬಂಧಿತ ಆರೋಪಿ ಪ್ರಸಾದ್‌ ಮೇಲೆ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಮೂಡಬಿದ್ರಿ, ಕಾರ್ಕಳ ನಗರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ಮತ್ತು ಮೂಡಬಿದ್ರೆ ಠಾಣೆಯಲ್ಲಿ ಸುದರ್ಶನ ಜೈನ್‌ ಎಂಬವರ ಕೊಲೆ ಹಾಗೂ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಫೋಕ್ಸೋ ಪ್ರಕರಣಗಳು ದಾಖಲಾಗಿತ್ತು.

ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಕ್ಷಯ ಹಾಕೆ ಮಚ್ಚೀಂದ್ರ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿದ್ದಲಿಂಗಪ್ಪ ನಿರ್ದೇಶನದಂತೆ, ಕಾರ್ಕಳ ಉಪವಿಭಾಗದ ಡಿವೈಎಸ್‌ಪಿ ವಿಜಯಪ್ರಸಾದ್‌ ಮಾರ್ಗದರ್ಶನದಲ್ಲಿ, ಕಾರ್ಕಳ ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್‌ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್‌ಐ ತೇಜಸ್ವಿ ಟಿ.ಐ ಮತ್ತು ಸಿಬ್ಬಂದಿಗಳಾಸ ಗಿರೀಶ್‌, ಪ್ರಶಾಂತ್‌, ವಿಶ್ವನಾಥ್‌, ಸುಂದರ್‌, ವಿದ್ಯಾ, ಗಣೇಶ್‌ ರೆಡ್ಡಿ, ರುಕ್ಮಿಣಿ, ಶ್ಯಾಮ್‌, ಮಹಂತೇಶ, ಈರಣ್ಣ, ಆಶೋಕ್‌ ಪಡುಬಿದ್ರೆ ಮತ್ತು ಸತೀಶ್‌ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

 

Comments are closed.