ಕುಂದಾಪುರ: ಕಾರ್ಮಿಕರ ಕುಟುಂಬಗಳ ಕಲ್ಯಾಣಕ್ಕಾಗಿ ಇರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿಯನ್ನು ಕಿಟ್ ಗಳ ಖರೀದಿಗೆ ವಿಪರೀತವಾಗಿ ಬಳಸುತ್ತಿರುವುದನ್ನು ಕಾರ್ಮಿಕ ಸಚಿವರು ನಿಲ್ಲಿಸಬೇಕು ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಿಡಬ್ಲ್ಯೂಎಫ್ಐ ರಾಜ್ಯ ಉಪಾಧ್ಯಕ್ಷ ಶೇಖರ ಬಂಗೇರ ಹೇಳಿದರು.
ಅವರು ಭಾನುವಾರ ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ಕಾಮ್ರೇಡ್ ದಾಸಭಂಡಾರಿ ವೇದಿಕೆಯಲ್ಲಿ ನಡೆದ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಸಿಐಟಿಯು 16ನೇ ಮಹಾಸಭೆಯಲ್ಲಿ ಮಾತನಾಡಿದರು.
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ, ಕಟ್ಟಡ ಕಾರ್ಮಿಕರ ಪಿಂಚಣಿ, ಅಪಘಾತ ಪರಿಹಾರ, ಮನೆ ಕಟ್ಟುವ ಸಹಾಯಧನ, ವೈದ್ಯಕೀಯ ವೆಚ್ಚಕ್ಕಾಗಿ ಇರುವ ನಿಧಿಯನ್ನು ಇತ್ತೀಚೆಗೆ ಕಂಪೆನಿಗಳಿಂದ ಟೂಲ್ ಕಿಟ್ ಗಳ ವಿಪರೀತ ಖರೀದಿಗೆ ಮುಂದಾಗಿ ಕೋಟ್ಯಂತರ ರೂಪಾಯಿ ವ್ಯಯಿಸಿ ಕಮಿಷನ್ ಪಡೆಯಲಾಗುತ್ತಿದೆ ಎಂದು ಅವರು ದೂರಿದರು.
ಕಲ್ಯಾಣ ಮಂಡಳಿ ವೈದ್ಯಕೀಯ ವೆಚ್ಚಕ್ಕೆ ಹಣ ಖರ್ಚು ಮಾಡಲು ಹಿಂದೇಟು ಹಾಕುತ್ತಿದೆ. 2021-22 ಸಾಲಿನ ವಿದ್ಯಾರ್ಥಿ ವೇತನ ಬಾಕಿ ಇರಿಸಿಕೊಂಡಿದ್ದು 2022-23 ಸಾಲಿನ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸುವ ತಂತ್ರಾಂಶ ಸರಿಪಡಿಸಲು ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ ಎಂದು ಶೇಖರ ಬಂಗೇರ ಆಕ್ರೋಶ ವ್ಯಕ್ತಪಡಿಸಿ ಕಟ್ಟಡ ಕಾರ್ಮಿಕರು ಅವರ ಮಕ್ಕಳು ಇದರ ವಿರುದ್ಧ ತೀವ್ರ ಹೋರಾಟ ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್. ನರಸಿಂಹ ಮಾತನಾಡಿ, ಬಿಜೆಪಿ ಸರಕಾರದ ನೀತಿಗಳಿಂದಾಗಿ ಬಡತನ ಹೆಚ್ಚಾಗುತ್ತಿದೆ. ಬೆಲೆ ಏರಿಕೆ ತೀವ್ರವಾಗಿದೆ. ನೆರೆಯ ಸಣ್ಣಪುಟ್ಟ ದೇಶಗಳಿಗಿಂತ ಭಾರತ 101ನೇ ಸ್ಥಾನಕ್ಕೆ ಇಳಿದಿರುವುದು ಆತಂಕಕಾರಿ ಎಂದು ಹೇಳಿದರು.
ಸಿಐಟಿಯು ಮುಖಂಡರಾದ ಮಹಾಬಲ ವಡೇರಹೋಬಳಿ, ಚಂದ್ರಶೇಖರ ವಿ. ಮಾತನಾಡಿದರು.
ಮಹಾಸಭೆ ಅಧ್ಯಕ್ಷತೆ ಚಿಕ್ಕ ಮೊಗವೀರ ವಹಿಸಿದ್ದರು. ಕಟ್ಟಡ ಕಾರ್ಮಿಕರ ಸ್ಥಾಪಕ ಅಧ್ಯಕ್ಷರಾಗಿದ್ದ ದಾಸಭಂಡಾರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ವಾರ್ಷಿಕ ವರದಿ ಮಂಡಿಸಿದರು, ಕೋಶಾಧಿಕಾರಿ ಜಗದೀಶ್ ಆಚಾರ್ ಹೆಮ್ಮಾಡಿ ಲೆಕ್ಕ ಪತ್ರ ಮಂಡಿಸಿದರು. ವರದಿ ಲೆಕ್ಕ ಪತ್ರ ಮೇಲೆ 27 ಮಂದಿ ಚರ್ಚೆ ನಡೆಸಿ ಅಂಗೀಕಾರ ಮಾಡಲಾಯಿತು.
ಸಭೆಯ ನಿರ್ಣಯಗಳು..
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಬಿಡುಗಡೆಗೆ ಹಾಗೂ ಹೊಸ ವಿದ್ಯಾರ್ಥಿ ವೇತನ ಅರ್ಜಿ ಸ್ವೀಕರಿಸಲು, ಕಟ್ಟಡ ಕಾರ್ಮಿಕರ ಮನೆಕಟ್ಟುವ ಸಹಾಯಧನ ಬಿಡುಗಡೆಗಾಗಿ, ಕಲ್ಯಾಣ ಮಂಡಳಿ ಭ್ರಷ್ಟಾಚಾರ ವಿರೋಧಿಸಿ,ಭೋಗಸ್ ಕಾರ್ಡ್ ತಡೆಯಲು, ಕೊರೋನ ಕಾಲದಲ್ಲಿ ತಿರಸ್ಕರಿಸಿದ ವಿದ್ಯಾರ್ಥಿ ವೇತನ, ಮದುವೆ ಧನಸಹಾಯ ಬಿಡುಗಡೆಗಾಗಿ, ವೈದ್ಯಕೀಯ ವೆಚ್ಚ ಹೆಚ್ಚಿಸಲು ಆಗ್ರಹಿಸಿ, ಸಿಐಟಿಯು 17 ನೇ ರಾಷ್ಟ್ರ ಸಮ್ಮೇಳನ, ನಿಧಿ ಹಾಗೂ ಬ್ರಹತ್ ಬಹಿರಂಗ ಸಭೆ ಯಶಸ್ವಿಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.
ನೂತನ ಸಮಿತಿ ಆಯ್ಕೆ:
ಮಹಾಸಭೆಯಲ್ಲಿ 23 ಮಂದಿಯ ನೂತನ ಸಮಿತಿ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಚಿಕ್ಕ ಮೊಗವೀರ, ಅಧ್ಯಕ್ಷರಾಗಿ ಸುರೇಶ್ ಕಲ್ಲಾಗರ, ಉಪಾಧ್ಯಕ್ಷರುಗಳಾಗಿ ಸುರೇಶ್ ಪೂಜಾರಿ, ಅಲೆಕ್ಸಾಂಡರ್, ಚಂದ್ರಶೇಖರ ವಿ, ರಘುರಾಮ ನಾಯ್ಕ, ಶ್ರೀನಿವಾಸ ಪೂಜಾರಿ, ಶಶಿಕಾಂತ್, ಕೃಷ್ಣ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಹೆಮ್ಮಾಡಿ, ಕಾರ್ಯದರ್ಶಿಗಳಾಗಿ ಅರುಣ್ ಕುಮಾರ್,ಅನಂತ ಕುಲಾಲ್,ವಿಜೇಂದ್ರ, ರೇಣುಕಾ,ನೀಲಾ,ಚಂದ್ರ ಅಂಪಾರು,ಸಂತೋಷ ಶೆಟ್ಟಿ, ನರಸಿಂಹ ಹೆಮ್ಮಾಡಿ,ಚಂದ್ರ ಕುಲಾಲ್, ಅಣ್ಣಪ್ಪ ಅಬ್ಬಿಗುಡ್ಡಿ ಆಯ್ಕೆಯಾದರು. ಮಹಿಳೆಗಾಗಿ ಒಂದು ಸ್ಥಾನ ಖಾಲಿ ಇಡಲಾಯಿತು.
ಕೋಶಾಧಿಕಾರಿಯಾಗಿ ಜಗದೀಶ್ ಆಚಾರ್ ಆಯ್ಕೆಯಾದರು.
Comments are closed.