ಕುಂದಾಪುರ: ಕಿರಿಮಂಜೇಶ್ವರ ಗ್ರಾ.ಪಂ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ನಿಶ್ಚಿತಾರ್ಥ ನಡೆಯುವ ಬಗ್ಗೆ ಮುಂಚಿತವಾಗಿ ತಿಳಿದು ಬಂದ ಮಾಹಿತಿಯ ಪ್ರಕಾರ ಶುಕ್ರವಾರ ಬೆಳಿಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೇತೃತ್ವದ ತಂಡ ತೆರಳಿ ಸಂಭವ್ಯ ನಿಶ್ಚಿತಾರ್ಥ ತಡೆದು ಪೋಷಕರಿಗೆ ಕಾನೂನು ಮಾಹಿತಿ ನೀಡಿದ್ದಾರೆ.

(ಅಧಿಕಾರಿಗಳ ತಂಡ ಭೇಟಿ)
ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಹೇಶ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶೇಖರ್ ಖಾರ್ವಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಜೇಶ್, ಗ್ರಾಮ ಲೆಕ್ಕಿಗ, ಅಂಗನವಾಡಿ ಮೇಲ್ವಿಚಾರಕಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತರ ತಂಡ ಬೆಳಿಗ್ಗೆಯೇ ಬಾಲಕಿಯ ಮನೆ ಭೇಟಿ ಮಾಡಿದ್ದು 16 ವರ್ಷದ ಬಾಲಕಿಗೆ ನಡೆಸಲು ಉದ್ದೇಶಿಸಿದ್ದ ನಿಶ್ಚಿತಾರ್ಥ ಕಾರ್ಯಕ್ರಮ ರದ್ದುಗೊಳಿಸಲು ತಿಳಿಸಿದ್ದಲ್ಲದೆ ಅಪ್ರಾಪ್ತ ಬಾಲಕಿಯ ಹಾಗೂ ಹುಡುಗನ ಮನೆಯವರಿಗೆ ಸಮಾಲೋಚನೆ ನಡೆಸಿ ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಬಾಲಕಿಯ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿರುವುದಾಗಿ ವರನ ಕಡೆಯವರು ನೀಡಿದ ಹೇಳಿಕೆಯಲ್ಲಿ ತಿಳಿದು ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ಬಾಲಕಿ ಹಾಗೂ ಪೋಷಕರನ್ನು ಹಾಜರುಪಡಿಸಿ, ಬಾಲಕಿಗೆ 18 ವರ್ಷ ಪೂರ್ಣಗೊಳ್ಳುವವರೆಗೆ ಮದುವೆ ಮಾಡದಿರುವ ಬಗ್ಗೆ ತಿಳಿಹೇಳಿ ಬಾಲಕಿಯನ್ನು ಪೋಷಕರ ಸುಪರ್ದಿಗೆ ನೀಡಲಾಯಿತು ಎಂಬ ಮಾಹಿತಿಯಿದೆ.
Comments are closed.