(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕೇರಳದಲ್ಲಿ ಬಂಧಿತರಾದ ನಕ್ಸಲ್ವಾದಿಗಳಾದ ಶೃಂಗೇರಿ ತಾಲೂಕು ಭುವನಹಡ್ಲು ಗ್ರಾಮದ ಬಿ. ಜಿ. ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ಬುಧವಾರ ಕುಂದಾಪುರದ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ (ಕಿರಿಯ ವಿಭಾಗ) ಹಾಜರುಪಡಿಸಲಾಗಿದ್ದು ಶಂಕರನಾರಾಯಣ ಹಾಗೂ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಟ್ಟು 7 ಪ್ರಕರಣವನ್ನು ಹೆಚ್ಚಿನ ವಿಚಾರಣೆಗಾಗಿ ಕುಂದಾಪುರದಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಯಾಯಿಸಿ ನ್ಯಾಯಾಧೀಶರಾದ ಧನೇಶ್ ಮುಗಳಿ ಆದೇಶಿಸಿದರು.

ಕೇರಳದಲ್ಲಿ ಬಂಧಿತರಾದ ಇಬ್ಬರು ಶಂಕಿತ ನಕ್ಸಲರನ್ನು ಕರ್ನಾಟಕ ಪೊಲೀಸರು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದಿದ್ದು ಈ ವೇಳೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2003, 2004, 2005ರಲ್ಲಿನ 3, 2006ರ ಒಟ್ಟು 6 ಪ್ರಕರಣ ಹಾಗೂ ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿನ 2005 ಪ್ರಕರಣದಲ್ಲಿ ಮಹಜರು ಮೊದಲಾದ ತನಿಖಾ ಪ್ರಕ್ರಿಯೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು ಅದರಂತೆಯೇ ಈ ಏಳು ಪ್ರಕರಣಗಳು ಸೆಶನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದೆ. ಅಲ್ಲದೆ ಇಬ್ಬರನ್ನೂ ಕೇರಳದ ತ್ರಿಶೂರ್ ಜೈಲಿಗೆ ರವಾನಿಸಲು ಆದೇಶ ನೀಡಲಾಗಿದೆ.
ಶಂಕಿತ ನಕ್ಸಲರಾದ ಬಿ. ಜಿ. ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ನಕ್ಸಲ್ ನಿಗ್ರಹ ಪಡೆ, ಹಾಗೂ ಪೊಲೀಸರು, ಡಿಎಆರ್ ಅಧಿಕಾರಿ, ಸಿಬ್ಬಂದಿಗಳ ಬಿಗು ಪೊಲೀಸ್ ಬಂದೋಬಸ್ತಿನಲ್ಲಿ ಕರೆತರಲಾಗಿತ್ತು.
ಎ.ಎನ್.ಎಫ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಆರ್.ಎಸ್.ಐ ಶ್ರೀಕಾಂತ್, ಶಂಕರನಾರಾಯಣ ಪಿಎಸ್ಐ ಸುದರ್ಶನ, ಕೊಲ್ಲೂರು ಪಿಎಸ್ಐ ಈರಣ್ಣ ಶಿರಗುಪ್ಪಿ ಸಹಿತ ಇಬ್ಬರು ಎ.ಎಸ್.ಐ, ಮಹಿಳಾ ಸಿಬ್ಬಂದಿಗಳು ಇದ್ದರು.
Comments are closed.