ಕರಾವಳಿ

ಪಂಡರಾಪುರ, ಶಿರ್ಡಿ ತೀರ್ಥಯಾತ್ರೆಗೆ ಹೋಗಿದ್ದ ವೇಳೆ ಕುಂಭಾಶಿಯ ಮನೆಯಲ್ಲಿ ಕಳವು; ನೆರೆಮನೆಯವನ ಬಂಧನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ : ಮನೆಮಂದಿ ಕುಟುಂಬ ಸಮೇತ ತೀರ್ಥಯಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಮನೆಗೆ ಕನ್ನ ಹಾಕಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವುಗೈದ ಘಟನೆ ಕುಂಭಾಶಿ ಗ್ರಾಮದ ವಿನಾಯಕ ನಗರದಲ್ಲಿ ಆ.5 ರಂದು ಬೆಳಕಿಗೆ ಬಂದಿದ್ದು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೂಲತಃ ಮರವಂತೆ ನಿವಾಸಿ, ಪ್ರಸ್ತುತ ಕುಂಭಾಶಿ ವಿನಾಯಕ ನಗರಲ್ಲಿರುವ ಸುಭಾಶ್ಚಂದ್ರ ಆಚಾರ್ಯ (40) ಬಂಧಿತ ಆರೋಪಿ. ಈತನಿಂದ 8 ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟ್, 12 ಗ್ರಾಂ ತೂಕದ ಪೆಂಡೇಂಟ್ ಇರುವ ರೋಪ್ ಚೈನ್, 4 ಗ್ರಾಂ, 3 ಗ್ರಾಂ ತೂಕದ ಚಿನ್ನದ ಉಂಗುರ, 1610 ರೂ. ನಗದು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಘಟನೆ ಹಿನ್ನೆಲೆ..
ಕುಂಭಾಶಿ ವಿನಾಯಕ ನಗರದ ನಿವಾಸಿ ಮಂಜುನಾಥ ಜೋಗಿ ಎಂಬವರು ಜುಲೈ 29 ರಂದು ಕುಟುಂಬ ಸಮೇತರಾಗಿ ಪಂಡರಾಪುರ ಮತ್ತು ಶಿರ್ಡಿ ದೇವಸ್ಥಾನಕ್ಕೆ ತೀರ್ಥಯಾತ್ರೆ ತೆರಳಿದ್ದು ಆ.5 ರಂದು ವಾಪಸ್ಸಾದಾಗ ಈ ಘಟನೆ ಬೆಳಕಿಗೆ ಬಂದಿತ್ತು. ಮನೆಯ ಹಿಂಬದಿಯ ಬಾಗಿಲು, ಅಡುಗೆ ಮನೆಯ ಬಾಗಿಲನ್ನು ಒಡೆದು ಮನೆಯ ಕಪಾಟಿನಲ್ಲಿರಿಸಿದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಪಾಟಿನಲ್ಲಿದ್ದ 1 ಲಕ್ಷದ 20 ಸಾವಿರ ಮೌಲ್ಯದ ಒಟ್ಟು 27 ಗ್ರಾಂ ಚಿನ್ನಾಭರಣಗಳು ಮತ್ತು 13,500 ರೂ. ನಗದು ಹಣವನ್ನು ಕಳವು ಮಾಡಲಾಗಿತ್ತು.

ತನಿಖಾ ತಂಡ…
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣವರ್ಧನ್ ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ ಕೆ., ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ. ನಿರ್ದೇಶನದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ತನಿಖಾ ವಿಭಾಗದ ಉಪನಿರೀಕ್ಷಕ ಪ್ರಸಾದ್ ಕುಮಾರ್ ಕೆ ಹಾಗೂ ಕಾನೂನು‌ ಸುವ್ಯವಸ್ಥೆ ಪಿಎಸ್ಐ ಸದಾಶಿವ ಆರ್ ಗವರೋಜಿ ನೇತೃತ್ವದಲ್ಲಿ ಅಪರಾಧ ಪತ್ತೆದಳ ತಂಡದ ಸಿಬ್ಬಂದಿಗಳಾದ ಸಂತೋಷ ಕುಮಾರ್ ಕೆ.ಯು, ಸಂತೋಷ ಕುಮಾರ್, ರಾಘವೇಂದ್ರ ಬೈಂದೂರು, ಅವಿನಾಶ್, ರಾಮ ಪೂಜಾರಿ ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆ.10 ರಂದು ಗೋಪಾಡಿ ಸಮೀಪದಲ್ಲಿ ಬಂಧಿಸಿದ್ದಾರೆ.

ಮನೆಕಟ್ಟಲು ಕಳ್ಳತನ..!
ಆರೋಪಿ ಸುಭಾಶ್ಚಂದ್ರ ಆಚಾರ್ ಮನೆ ಕಟ್ಟುತ್ತಿದ್ದು ಹಣಕ್ಕಾಗಿ ತನ್ನ ಮನೆಯ ಸಮೀಪದ ಮನೆ ಕಳ್ಳತನ ನಡೆಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ ಎನ್ನಲಾಗಿದೆ. ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಈತ ಕಳವು ಕೃತ್ಯದ ಬಳಿಕ ಕೆಲಸಕ್ಕೆ ಹೋಗಿರಲಿಲ್ಲ. ಈತನ್ಮಧ್ಯೆ ಈತನ ಬ್ಯಾಂಕ್ ಖಾತೆಗೆ 20 ಸಾವಿರ ಹಣ ವರ್ಗಾವಣೆ ಕೂಡ ಆಗಿತ್ತು. ಕಳವು ನಡೆಸಿದ ಮನೆಯಲ್ಲಿ ಈತ ಪಕ್ಕದ ಮನೆಯೊಂದರಲ್ಲಿದ್ದ ಯುವಕನ ಚಪ್ಪಲಿಯಿಟ್ಟು ಅವರ ಮೇಲೆ ಸಂಶಯ ಬರುವಂತೆ ಸಂಚು ಮಾಡಿದ್ದ. ತನಿಖೆ ಕೈಗೊಂಡ ಪೊಲೀಸರಿಗೆ ಈತನ ಮೇಲೆ ಸಂಶಯ ಮೂಡಿದ್ದು ನಿಗಾವಹಿಸಿ ತಾಂತ್ರಿಕ ಸಹಾಯದ ಮೂಲಕ ಇನ್ನಷ್ಟು ನಿಖರಗೊಳಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ತಪ್ಪೊಪ್ಪಿಕೊಂಡಿದ್ದಾ‌ನೆ. ಪೊಲೀಸ್ ಮೂಲಗಳ ಪ್ರಕಾರ ಈ ಹಿಂದೆ ಈತನ ಮೇಲೆ ಯಾವುದೇ ಅಪರಾಧ ಕೃತ್ಯಗಳು ದಾಖಲಾಗಿಲ್ಲ.

Comments are closed.