ಕರಾವಳಿ

ಮಲ್ಟಿ ಪರ್ಪಸ್ ಹಾರ್ಬರ್ ಹಾಗೂ ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಾಣಕ್ಕೆ ಮನವಿ

Pinterest LinkedIn Tumblr

ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದ ಬಿ.ವೈ ರಾಘವೇಂದ್ರ ಅವರು ಜು.25ರಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವರಾದ ಸರ್ಬಾನಂದ ಸೋನಾವಾಲ ಅವರನ್ನು ಭೇಟಿಯಾಗಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಗರಮಾಲಾ ಯೋಜನೆಯಲ್ಲಿ ಮಲ್ಟಿ ಪರ್ಪಸ್ ಹಾರ್ಬರ್ (ಬಹುಉಪಯೋಗಿ ಬಂದರು) ಹಾಗೂ ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಮೀನುಕಾರಿಕೆ, ಪ್ರವಾಸೋದ್ಯಮ , ವಾಣಿಜ್ಯ ಹಾಗೂ ಆರ್ಥಿಕ ಅಭಿವೃದ್ದಿಗೆ ಪೂರಕ ಅವಕಾಶಗಳಿದ್ದು ಇಲ್ಲಿ ಮಲ್ಟಿ ಪರ್ಪಸ್ ಹಾರ್ಬರ್ (ಬಹುಉಪಯೋಗಿ ಬಂದರು) ಸ್ಥಾಪನೆ ಮಾಡಲು ಕ್ರಮ ವಹಿಸಬೇಕು ಎಂದು ಸಂಸದರು ಒತ್ತಾಯಿಸಿದರು.

ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಾಣದ ಬಗ್ಗೆ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಬೈಂದೂರು ವಿಧಾನಸಭಾ ವ್ಯಾಪ್ತಿಯ ಗಂಗೊಳ್ಳಿಯಿಂದ ಕುಂದಾಪುರಕ್ಕೆ ಬರಲು ಸುಮಾರು 18 ಕಿ.ಮೀ ಸುತ್ತಿ ಬಳಸಿ ಬರಬೇಕಾಗಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರು ಮತ್ತು ವಾಣಿಜ್ಯ ಕೇಂದ್ರವಾದ ಕುಂದಾಪುರ ಸಂಪರ್ಕಿಸಲು ಸೇತುವೆ ನಿರ್ಮಿಸಿದ್ದಲ್ಲಿ ಗಂಗೊಳ್ಳಿಯಿಂದ ಕುಂದಾಪುರ ಬಹಳ ಹತ್ತಿರವಾಗಲಿದೆ. ಕಛೇರಿ, ಆಸ್ಪತ್ರೆ ,ಮೀನುಗಾರಿಕಾ ಹಾಗೂ ಇನ್ನಿತರೆ ಅವಶ್ಯಕತೆಗಳನ್ನು ಪೂರೈಸಲು ಸಹಕಾರಿಯಾಗಲಿದೆ. ಆದ್ದರಿಂದ ತುರ್ತಾಗಿ ಗಣನೆಗೆ ತೆಗೆದುಕೊಂಡು ಪ್ರಥಮ ಆದ್ಯತೆಯ ಮೇರೆಗೆ ಅನುಮೊದನೆ ದೊರಕಿಸಿಕೊಡಬೇಕೆಂದು ಸಂಸದರು ಒತ್ತಾಯಿಸಿದರು.

ಮೇಲಿನ ಎರಡೂ ಪ್ರಸ್ತಾವನೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವರು ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಸದರಿ ಯೋಜನೆಗಳ ಬಗ್ಗೆ ಪತ್ರ ಬರೆದಿದ್ದು ಪಿಪಿಪಿ ಮಾದರಿಯಲ್ಲಿ ಮಲ್ಟಿಪರ್ಪಸ್ ಹಾರ್ಬರ್(ಬಹುಪಯೋಗಿ ಬಂದರು) ನಿರ್ಮಿಸಲು ಶೀಘ್ರವಾಗಿ ಟೆಂಡರ್ ಕರೆಯಲು ಸಂಬಂದಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಹಾಗೂ ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಿಸಲು ಆದಷ್ಟೂ ತ್ವರಿತವಾಗಿ ಸಕಾರಾತ್ಮಕವಾಗಿ ಪರಿಗಣಿಸುವ ಭರವಸೆ ನೀಡಿದರು.

ಮೇಲಿನ ಎರಡೂ ಯೋಜನೆಗಳಿಗೆ ಕರ್ನಾಟಕ ಸರಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

ಸಭೆಯಲ್ಲಿ ಕೇಂದ್ರ ಸಹಾಯಕ ಸಚಿವರಾದ ಶ್ರೀಪಾದ್ ನಾಯಕ್, ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಪ್ರಸಾದ್, ಮೂಲಭೂತ ಸೌಕರ್ಯ ಅಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಾಳಾದ ಗೌರವ್ ಗುಪ್ತ ಉಪಸ್ಥಿತರಿದ್ದರು.

Comments are closed.