ಕರಾವಳಿ

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಕೊಕ್ಕರ್ಣೆ‌ ಮೂಲದ ವ್ಯಕ್ತಿಯ ಅಂಗಾಂಗ ದಾನ

Pinterest LinkedIn Tumblr

ಉಡುಪಿ: ಕೊಕ್ಕರ್ಣೆ ಬಳಿ ಜೂ. 8ರಂದು ರಾತ್ರಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನವೀನ್ (38) ಎಂಬವರ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅವರ ಅಂಗಗಳನ್ನು ದಾನ ಮಾಡಲಾಗಿದೆ. ಆರು ಮಂದಿ ರೋಗಿಗಳಿಗೆ ನವೀನ್ ಅಂಗಾಂಗಳನ್ನು ಒದಗಿಸಲಾಗಿದೆ.

ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ, ಎರಡು ಕಾರ್ನಿಯಾಗಳು, ಕಣ್ಣುಗುಡ್ಡೆಗಳನ್ನು ಆರು ಮಂದಿಗೆ ಅಳವಡಿಸಲು ಆಸ್ಪತ್ರೆ ನಿರ್ಧರಿಸಿದೆ.

ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ನವೀನ್ ಅವರನ್ನು ಮಣಿಪಾಲ ಕೆಎಂಸಿಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ನವೀನ್ ಪತ್ನಿ ಮಲ್ಲಿಕಾ ಮತ್ತು ಕುಟುಂಬ ಸದಸ್ಯರು ಅಂಗಾಂಗ ದಾನಕ್ಕೆ ಮುಂದಾದರು. ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಪ್ರಕಾರ ನವೀನ್ ಅವರನ್ನು ಶುಕ್ರವಾರ ಸಂಜೆ ಮತ್ತು ರಾತ್ರಿ ಎರಡು ಬಾರಿ ಆರು ಗಂಟೆಗಳ ಅಂತರದಲ್ಲಿ ಪರಿಶೀಲಿಸಲಾಗಿತ್ತು. ಬಳಿಕ ವೈದ್ಯರು ಮೆದುಳು ನಿಷ್ಕ್ರಿಯವಾಗಿರುವುದನ್ನು ಘೋಷಿಸಿದ್ದರು.

ಎರಡು ಕಾರ್ನಿಯಾ, ಒಂದು ಮೂತ್ರಪಿಂಡ ಹಾಗೂ ಚರ್ಮವನ್ನು ಆಸ್ಪತ್ರೆಯಲ್ಲಿದ್ದ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು. ಯಕೃತ್ ಮತ್ತು ಒಂದು ಕಿಡ್ನಿಯನ್ನು ಗ್ರೀನ್ ಕಾರಿಡಾರ್ ಮೂಲಕ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

 

Comments are closed.