ಕರಾವಳಿ

ಇಲಿ ಪಾಷಣ ಸೇವಿಸಿ ಉಪ್ಪಿನಕುದ್ರು ಯುವತಿ ಆತ್ಮಹತ್ಯೆ; ಲವ್ ಜಿಹಾದ್ ಆರೋಪ ಮಾಡಿದ ಹಿಂದೂ ಸಂಘಟನೆ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕಳೆದ ಎರಡು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ (ಮೇ.25) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಆರೋಪಿ ಪತಿ- ಪತ್ನಿ ಮಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಕುಟುಂಬಿಕರು ಆರೋಪಿಸಿದ್ದು ಇದು ಲವ್ ಜಿಹಾದ್ ಷಡ್ಯಂತ್ರ ಎಂದು ಹಿಂದೂ ಸಂಘಟನೆಗಳು ಆರೋಪಿಸಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತಲ್ಲೂರು‌ ಗ್ರಾಮಪಂಚಾಯತ್ ವ್ಯಾಪ್ತಿಯ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ (25) ಮೃತ ಯುವತಿ. ಕೋಟೇಶ್ವರದ ನಿವಾಸಿ ಅಜೀಝ್ (32), ಆತನ ಪತ್ನಿ ಸಲ್ಮಾ ಅಜೀಝ್ ಎನ್ನುವರು ತನ್ನ ಸಹೋದರಿ ಆತ್ಮಹತ್ಯೆಗೆ ಕಾರಣ ಎಂದು ಶಿಲ್ಪಾ ಸಹೋದರ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಸಾರಾಂಶ..
ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸದ ಬಳಿಕ ಶಿಲ್ಪಾ‌ ಕಳೆದ ಮೂರು ವರ್ಷದಿಂದ ತಲ್ಲೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಟ್ಯುಟೋರಿಯಲ್ ನಲ್ಲಿ ಓದುತ್ತಿರುವಾಗಲೇ ಆರೋಪಿ ಅಜೀಝ್ ಪರಿಚಯವಾಗಿದ್ದು ಆತನೊಂದಿಗೆ ಸ್ನೇಹ- ಪ್ರೇಮಾಂಕುರವಾಗಿತ್ತು. ಆತ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಶಿಲ್ಪಾ ಆರೋಪಿ‌ ಮನೆಗೂ ಹೋಗಿಬರುತ್ತಿದ್ದು ಈ ವಿಚಾರ ಆತನ ಪತ್ನಿಗೆ ತಿಳಿದಿದ್ದು ಆಕೆಯ‌ ಪ್ರೇರೇಪಣೆಯೂ ಇತ್ತು. ಈತನ್ಮದ್ಯೆ ಇಬ್ಬರ ನಡುವೆ ಜಗಳವೂ ಆಗುತ್ತಿದ್ದು ಆರೋಪಿ ಅಜೀಝ್ ಇತ್ತೀಚೆಗೆ ಆಕೆ ಕೆಲಸ ಮಾಡುತ್ತಿದ್ದ ಬಟ್ಟೆಯಂಗಡಿಗೆ ಬಂದು ನಿಂದಿಸಿದ್ದ. ಪ್ರೀತಿಸಿ‌ ಮದುವೆಯಾಗುವ ಭರವಸೆ ನೀಡಿ ಕೊನೆಗೆ ಮದುವೆಯಾಗುವುದಿಲ್ಲ ಎಂದು‌ಮೋಸ ಮಾಡಿದ್ದಲ್ಲದೆ ಆರೋಪಿಗಳಾದ ಗಂಡ-ಹೆಂಡತಿ ಶಿಲ್ಪಾಳಿಗೆ ಬೈದು ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾರೆ. ಇದರಿಂದ ನೊಂದ ಆಕೆ ಮೇ.23 ರಾತ್ರಿ‌ ಇಲಿ‌ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಅಕೆಯನ್ನು ಮಣಿಪಾಲ‌‌ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಾತನಾಡುವ ಸ್ಥಿತಿಯಲ್ಲಿದ್ದಾಗ ಆರೋಪಿಗಳಾದ ಅಜೀಝ್ ಹಾಗೂ ಸಲ್ಮಾ ಮಾನಸಿಕ ಹಿಂಸೆ ನೀಡಿ, ಮರ್ಯಾದೆ ತೆಗೆದಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಳು ಎಂದು ಆಕೆ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ತಲ್ಲೂರು ಗ್ರಾಮಪಂಚಾಯತ್ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ರಾಧಾಕೃಷ್ಣ ಶೇರಿಗಾರ್, ಉದಯ್ ಕುಮಾರ್ ತಲ್ಲೂರು, ಮಾಜಿ ತಾ.ಪಂ ಸದಸ್ಯ ಕರಣ್ ಪೂಜಾರಿ, ಪ್ರಮುಖರಾದ ವಾಸು ದೇವಾಡಿಗ ಗಂಗೊಳ್ಳಿ, ಸದಾನಂದ ಉಪ್ಪಿನಕುದ್ರು, ಸುಧಾಕರ ಶೆಟ್ಟಿ ನೆಲ್ಯಾಡಿ, ಪಕ್ಷ ಹಾಗೂ ಸಂಘಟನೆ ಪದಾಧಿಕಾರಿಗಳು ಇದ್ದರು.

ಲವ್ ಜಿಹಾದ್ ಆರೋಪ ಮಾಡಿದ ಸಂಘಟನೆ…
ಇನ್ನು ಗ್ರಾಮೀಣ ಭಾಗದ ಶಿಲ್ಪಾಳನ್ನು ಷಡ್ಯಂತ್ರದ ಮೂಲಕ ಲವ್ ಜಿಹಾದ್ ಮಾಡಲಾಗಿದೆ. ಆಕೆಯನ್ನು ಆರೋಪಿ‌ ಬಳಸಿಕೊಂಡಿದ್ದಾನೆ. ಆಕೆಗೆ ಮತಾಂತರದ ಒಲವು ಮೂಡಿಸುವ ಸಂಚು ಕೂಡ ಮಾಡಿದ್ದು ಆಕೆ ಸಾಮಾಜಿಕ ಜಾಲತಾಣದಲ್ಲಿ ಮತಾಂತರದ ಕುರಿತು ಮಾಹಿತಿ ಇರುವ ವೀಡಿಯೋ ವೀಕ್ಷಿಸಿದ ಪುರಾವೆಗಳಿದೆ. ಆರೋಪಿ ಕೋಟೇಶ್ವರ ಭಾಗದಲ್ಲಿ ಈ ಹಿಂದೆ ಬಹಳಷ್ಟು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿಯಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ಲವ್ ಜಿಹಾದ್ ಆಯಾಮದಲ್ಲಿ ತನಿಖೆ ನಡೆಸಿ ಸ್ಪಷ್ಟತೆ ನೀಡಬೇಕು.‌ ಸರಕಾರ ಯುವತಿ ಬಡ ಕುಡುಂಬಕ್ಕೆ ಪರಿಹಾರ ನೀಡಬೇಕು ಎಂದು ಬಜರಂಗದಳದ ಜಿಲ್ಲಾ ಸಂಯೋಜಕ ಸುರೇಂದ್ರ ಕೋಟೇಶ್ವರ ಆಗ್ರಹಿಸಿದ್ದಾರೆ.

ಸಮಗ್ರ ತನಿಖೆಗೆ ಬಿಜೆಪಿ ಆಗ್ರಹ..
ಶಿಲ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೋಟೇಶ್ವರ ಪ್ಲಾಟ್ ಒಂದರಲ್ಲಿ ವಾಸವಿರುವ ಮೂಡುಗೋಪಾಡಿ‌ ಮೂಲದ ಅಜೀಝ್ ವಿವಾಹಿತನಾಗಿದ್ದು ಕಳೆದ ನಾಲ್ಕು ವರ್ಷದಿಂದ ಆಕೆ ಬಾಳಿನಲ್ಲಿ ಚೆಲ್ಲಾಟವಾಡಿದ್ದಾನೆ. ಅಲ್ಲದೆ ಆಕೆಯೊಂದಿಗಿನ ಫೋಟೋ ವಿಡಿಯೋ ಇರುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಆಕೆಯನ್ನು ಹಿಂಸಿಸಿದ್ದಾನೆ. ಮೇಲ್ನೋಟಕ್ಕೆ ಆಕೆ ಲವ್ ಜಿಹಾದ್ ಸುಳಿಯಲ್ಲಿ ಸಿಲುಕಿರುವುದು ಕಂಡುಬರುತ್ತಿದೆ. ಪೊಲೀಸ್ ಇಲಾಙೆ ಆತನನ್ನು ಬಂಧಿಸಬೇಕು ಹಾಗೂ ಯುವತಿ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ನೀಡುವ ಕೆಲಸವಾಗಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.
– ಶಂಕರ ಅಂಕದಕಟ್ಟೆ (ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ)

 

Comments are closed.