ಕರಾವಳಿ

ಕಾರವಾರ-ಬೆಂಗಳೂರು ನಡುವಿನ ಜೀವನಾಡಿ ‘ಪಂಚಗಂಗಾ ಎಕ್ಸ್‌ಪ್ರೆಸ್‌’ ರೈಲು ಸಮಯದಲ್ಲಿ ಉತ್ತಮ ಸುಧಾರಣೆ

Pinterest LinkedIn Tumblr

ಕುಂದಾಪುರ: ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಸತತ ಪ್ರಯತ್ನದಿಂದ ಕಾರವಾರ ಬೆಂಗಳೂರು ನಡುವಿನ ಜೀವನಾಡಿ ರೈಲು ಪಂಚಗಂಗಾ ಎಕ್ಸ್‌ಪ್ರೆಸ್‌ ಸಮಯದಲ್ಲಿ ಸುಧಾರಣೆಯಾಗಿದ್ದು , ರೈಲು ಬೆಂಗಳೂರಿಗೆ ಒಂದು ಘಂಟೆ ಬೇಗ ತಲುಪಲಿದೆ.

ರಾತ್ರಿ ಎಂಟೂವರೆಗೆ ಕುಂದಾಪುರ ಬಿಟ್ಟ ರೈಲು ಯಶವಂತಪುರ ಮೂಲಕ ಮೆಜೆಸ್ಟಿಕ್ ನಿಲ್ದಾಣಕ್ಕೆ ಬೆಳಿಗ್ಗೆ ಎಂಟು ಘಂಟೆಗೆ ತಲುಪುತಿತ್ತು . ಇದರಿಂದ ಬೆಂಗಳೂರು ಟ್ರಾಪಿಕ್ ನಲ್ಲಿ ಸಿಲುಕಬೇಕಾದ ಪರಿಸ್ಥಿತಿಯನ್ನು ಗಮನಸಿ, ಆಫೀಸು ಕಾಲೇಜು ಇತ್ಯಾದಿ ಕೆಲಸಕ್ಕೆ ಹೋಗುವ ವರ್ಗದ ಹಿತಕ್ಕಾಗಿ ರೈಲಿನ ವೇಗ ಹೆಚ್ಚಳಕ್ಕಾಗಿ ಕಳೆದ ಎರಡು ವರ್ಷಗಳಿಂದ ಕುಂದಾಪುರ ರೈಲ್ವೇ ಸಮಿತಿ ಸತತವಾಗಿ ಶ್ರಮವಹಿಸಿತ್ತು .

ಈ ಎಲ್ಲಾ ಬೇಡಿಕೆಗಳನ್ನು ಗಮನಿಸಿದ ಭಾರತೀಯ ರೈಲ್ವೆ ಕಾರವಾರ ಕುಂದಾಪುರ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಸಮಯದಲ್ಲಿ ಉತ್ತಮ ಸುಧಾರಣೆ ತಂದು ಬೆಳಿಗ್ಗೆ ಆರೂ ನಲವತ್ತಕ್ಕೆ ಯಶವಂತಪುರ ಹಾಗು ಏಳೂ ಕಾಲಿಗೆ ಮೆಜೆಸ್ಟಿಕ್ ತಲುಪುವಂತೆ ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

ಸಂಜೆ ಕೂಡಾ ಹಿಂದಿನ ಆರೂ ನಲವತ್ತರ ಬದಲು ಆರೂ ಐವತ್ತಕ್ಕೆ ಮೆಜೆಸ್ಟಿಕ್ ಬಿಡುವ ರೈಲು ,ಯಶವಂತಪುರ ನಿಲ್ದಾಣದಿಂದ ಸಂಜೆ ಏಳಕ್ಕೆ ಹೊರಟು ಕುಂದಾಪುರ ನಿಲ್ದಾಣ ಬೆಳಿಗ್ಗೆ ಐದಕ್ಕೆ ತಲುಪಲಿದೆ. ಈ ಬದಲಾವಣೆಗಳು ಜೂನ್ ನಿಂದ ಅರಂಭವಾಗಲಿವೆ .

ಪಸ್ಟ್ ಕ್ಲಾಸ್ ಏಸಿ, ಸೇರಿದಂತೆ ಕರಾವಳಿಯ ಎಲ್ಲಾವರ್ಗದ ಪ್ರಯಾಣಿಕರ ಜಿವನಾಡಿಯಾಗಿ ಓಡುವ ಪಂಚಗಂಗಾ ಎಕ್ಸ್‌ಪ್ರೆಸ್ ಇದೀಗ ಬೆಂಗಳೂರು ನಗರವನ್ನು ಬೆಳಿಗ್ಗೆ ಬೇಗನೆ ತಲುಪುವ ಮೂಲಕ ಮತ್ತಷ್ಟು ಜನಸ್ನೆಹಿಯಾಗಿದೆ.

ಬೆಂಗಳೂರು ಕಾರವಾರ ನಡುವಿನ ಕರಾವಳಿಯ ಪ್ರಯಾಣಿಕರ ಏಕೈಕ ರೈಲಾದ ಪಂಚಗಂಗಾ ಎಕ್ಸ್‌ಪ್ರೆಸ್ ಸಮಯ ಸುಧಾರಣೆಯ ಬಗ್ಗೆ ಕುಂದಾಪುರ ರೈಲು ಪ್ರಯಾಣಿಕರ ಸಮಿತಿಯ ಗಣೇಶ್ ಪುತ್ರನ್ ಸಂತಸ ವ್ಯಕ್ತಪಡಿಸಿದ್ದಾರೆ.

Comments are closed.