ಕರ್ನಾಟಕ

ಅಯ್ಯಪ್ಪ‌ ಸ್ವಾಮಿಯ ಪರಮಭಕ್ತ, ಕನ್ನಡದ ಹಿರಿಯ ನಟ ಶಿವರಾಂ ವಿಧಿವಶ

Pinterest LinkedIn Tumblr

ಬೆಂಗಳೂರು: ತಲೆ ಭಾಗಕ್ಕೆ ಗಂಭೀರ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ 84 ವರ್ಷ ಪ್ರಾಯದ ಶಿವರಾಂ ಇಂದು (ಡಿ.4) ನಿಧನ ಹೊಂದಿದ್ದಾರೆ.

ಕೆಲವು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದರು. ನಂತರ ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬ್ರೇನ್ ಡ್ಯಾಮೇಜ್ ನಿಂದ ಕೋಮಾದಲ್ಲಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಸ್ಯಾಂಡಲ್‍ವುಡ್‍ನಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಅವರು ‘ಶಿವರಾಮಣ್ಣ’ ಎಂದೇ ಖ್ಯಾತರಾಗಿದ್ದ ಅವರು ಕಳೆದ 6 ದಶಕಗಳಿಂದ ಕನ್ನಡ ಸಿನಿಮಾ ರಂಗದ ನಂಟುಹೊಂದಿದ್ದಾರೆ. ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ಶಿವರಾಂ ನಾಯಕ ನಟರಾಗಿ, ಹಾಸ್ಯನಟ, ಪೋಷಕ ನಟ, ನಿರ್ಮಾಪಕರಾಗಿಯೂ ಹೆಸರು ಮಾಡಿದವರು. `ಶರಪಂಜರ’ ಶಿವರಾಂ ಎಂದೇ ಹೆಸರುವಾಸಿಯಾಗಿದ್ದರು `ಡ್ರೈವರ್ ಹನುಮಂತು’ ಸಿನಿಮಾದಲ್ಲಿ ನಾಯಕ ನಟರಾಗಿ ಹೆಚ್ಚು ಜನಪ್ರಿಯರಾಗಿದ್ದರು. ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಪ್ರಣಯರಾಜ ಶ್ರೀನಾಥ್ ಅವರ ಜೊತೆಯಲ್ಲಿ ನಟಿಸಿದ್ದರು.

ಶಿವರಾಂ ಅಯ್ಯಪ್ಪ ಸ್ವಾಮಿಯ ಪರಮಭಕ್ತರಾಗಿದ್ದು, ಇವರು ಗುರುಸ್ವಾಮಿಯೂ ಆಗಿದ್ದರು. 48 ವರ್ಷಗಳಿಂದ ಶಬರಿಮಲೆಗೆ ಹೋಗಿ ಬರುತ್ತಿದ್ದರು. ಈ ಬಾರಿಯೂ ಹೋಗಲು ತಯಾರಿ‌ ನಡೆಸಿದ್ದರು.

ಶಿವರಾಂ ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಸಹಿತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Comments are closed.