ಉಡುಪಿ: 1200 ವರ್ಷಗಳ ಇತಿಹಾಸ ಇರುವ ಉಡುಪಿ ಜಿಲ್ಲೆಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾರೆ ಹಿಡಿದು ಬುಟ್ಟಿ ಹೊತ್ತು ದೇವಸ್ಥಾನದ ಕರಸೇವೆಯಲ್ಲಿ ಭಾಗಿಯಾದರು.
ಉಡುಪಿ ನಗರದಲ್ಲಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸುತ್ತು ಪಾಳಿಯ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದೆ. ಪ್ರತಿದಿನ ಹತ್ತಾರು ಮಂದಿ ಸಂಜೆಯ ವೇಳೆಗೆ ದೇಗುಲದ ನಿರ್ಮಾಣ ಕಾರ್ಯದಲ್ಲಿ ಕರಸೇವೆ ಮಾಡುತ್ತಿದ್ದಾರೆ. ಶುಕ್ರವಾರ ಸಂಜೆ ಶೋಭಾ ಕರಂದ್ಲಾಜೆ ದೇವಸ್ಥಾನಕ್ಕೆ ಭೇಟಿ ಕೊಟ್ಟು, ವಿಶೇಷ ಪೂಜೆ ಸಲ್ಲಿಸಿದರು.
ಬುಟ್ಟಿಯಲ್ಲಿ ಕಲ್ಲು, ಮಣ್ಣು ಸಾಗಿಸಿ ಪ್ರಾಂಗಣದ ಶುಚಿತ್ವ ಕಾರ್ಯದಲ್ಲಿ ತೊಡಗಿಸಿಕೊಂಡರು. ದೇಗುಲದ ಮುಂಭಾಗದಲ್ಲಿ ಹಾರೆ ಹಿಡಿದು ಸುಮಾರು ಅರ್ಧ ಗಂಟೆಗಳ ಕಾಲ ಕೆಲಸ ಮಾಡಿದರು.
ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಸುತ್ತು ಪೌಳಿ ಕೆಲಸ ಆಗುತ್ತಿದೆ. ನಾನು ದೇವಸ್ಥಾನದ ಜೀರ್ಣೋದ್ಧಾರದ ಕರಸೇವೆಯಲ್ಲಿ ಭಾಗಿಯಾಗಿದ್ದು, ಮನಸ್ಸಿಗೆ ಬಹಳ ಸಂತೋಷವಾಗಿದೆ. ಜೀರ್ಣೋದ್ಧಾರ ಆರಂಭವಾದ ಸಂದರ್ಭದಲ್ಲಿ ಒಂದು ಬಾರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೆ. ಇಂದು ದೇವಿಯ ಸೇವೆ ಮಾಡುವ ಅವಕಾಶ ಒದಗಿ ಬಂತು ಎಂದು ಇದೇ ವೇಳೆ ಶೋಭಾ ಕರಂದ್ಲಾಜೆ ಅವರು ಸಂತೋಷ ವ್ಯಕ್ತಪಡಿಸಿದರು.
Comments are closed.