ಬೆಂಗಳೂರು: ಯುವತಿಯೊಬ್ಬಳನ್ನು ಕ್ಯಾಬ್ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಚಾಲಕನನ್ನು ಜೆ.ಬಿ. ನಗರ ಪೊಲೀಸರು ಬಂಧಿಸಿದ್ದಾರೆ.
ಆವಲಹಳ್ಳಿ ನಿವಾಸಿ ದೇವರಾಜುಲು (25) ಬಂಧಿತ ಆರೋಪಿಯಾಗಿದ್ದು, ಕ್ಯಾಬ್ನಲ್ಲಿ ಪ್ರಯಾಣಿಸುವಾಗ ನಿದ್ರೆಗೆ ಜಾರಿದ ಸಮಯದಲ್ಲಿ ಕಾಮುಕ ಚಾಲಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಯುವತಿ ದೂರು ನೀಡಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.
ಸಂತ್ರಸ್ತ ಯುವತಿ ಕಳೆದ ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಮುರುಗೇಶ್ ಪಾಳ್ಯದ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು. ಪ್ರತಿಷ್ಠಿತ ಹೋಟೆಲ್ವೊಂದರಲ್ಲಿ ಯುವತಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯುವತಿ ಮಂಗಳವಾರ ರಾತ್ರಿ ಎಚ್ಎಸ್ಆರ್ ಲೇಔಟ್ನಲ್ಲಿರುವ ಸ್ನೇಹಿತರ ಮನೆಗೆ ಹೋಗಿದ್ದಾರೆ. ತಡ ರಾತ್ರಿವರೆಗೆ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದರು. ಬಳಿಕ ಒಬ್ಬಳೇ ಮುರುಗೇಶ್ ಪಾಳ್ಯದಲ್ಲಿರುವ ತನ್ನ ಅಪಾರ್ಟ್ಮೆಂಟ್ಗೆ ತೆರಳಲು ಬುಧವಾರ ಬೆಳಗಿನ ಜಾವ 3.30ರ ಸುಮಾರಿಗೆ ಕ್ಯಾಬ್ ಬುಕ್ ಮಾಡಿದ್ದರು. ಹತ್ತು ನಿಮಿಷಕ್ಕೆ ಸ್ಥಳಕ್ಕೆ ಬಂದಿದ್ದ ಕ್ಯಾಬ್ ಚಾಲಕ ಯುವತಿಯನ್ನು ಹತ್ತಿಸಿಕೊಂಡಿದ್ದ. ಮದ್ಯದ ನಶೆಯಲ್ಲಿದ್ದ ಸಂತ್ರಸ್ತ ಯುವತಿ ಕಾರಿನ ಹಿಂಬದಿ ಸೀಟಿನಲ್ಲಿ ನಿದ್ರೆಗೆ ಜಾರಿದ್ದರು.
ಯುವತಿ ಮನೆ ಬಳಿ ಬಂದಾಗ ಕ್ಯಾಬ್ ಚಾಲಕ ಆಕೆಯನ್ನು ಎಬ್ಬಿಸಲು ಮುಂದಾಗಿದ್ದು ಆಕೆ ಎದ್ದಿರಲಿಲ್ಲ. ನಿದ್ರಾವಸ್ಥೆಯಲ್ಲಿದ್ದ ಆಕೆಯ ಜೊತೆ ಚಾಲಕ ಸೆಲ್ಫಿ ತೆಗೆದುಕೊಂಡಿದ್ದಾನೆ. ಬಳಿಕ ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.
ನನಗೆ ಪ್ರಜ್ಞೆ ಬಂದಾಗ ಚಾಲಕ ನನ್ನ ಮೇಲೆ ಮಲಗಿದ್ದ. ಆತಂಕಗೊಂಡು ಕೂಗುತ್ತಾ ಆತನನ್ನು ತಳ್ಳಿ ಕ್ಯಾಬ್ನಿಂದ ಹೊರಗೆ ಓಡಿ ಬಂದೆ. ಬರುವ ವೇಳೆ ಆತನ ಮೊಬೈಲ್ ಎತ್ತಿಕೊಂಡು ಬಂದಿದ್ದು ಅದರಲ್ಲಿ ಸೆಲ್ಪಿ ಇತ್ತು. ಬಳಿಕ ಪೊಲೀಸರಿಗೆ ಮಾಹಿತಿನೀಡಿ ದೂರು ದಾಖಲಿಸಿದೆ ಎಂದು ಸಂತ್ರಸ್ತೆ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ವಿಶೇಷ ತನಿಖಾ ತಂಡ ಆರೋಪಿಯನ್ನು ಆವಲಹಳ್ಳಿಯ ಆತನ ಮನೆಯಲ್ಲಿ ಬುಧವಾರ ಮಧ್ಯಾಹ್ನ ಬಂಧಿಸಲಾಗಿದೆ. ದೇವರಾಜುಲು ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಕಾರು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ.
ಸಂತ್ರಸ್ತೆ ಹಾಗೂ ಆರೋಪಿಯ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ವೈದ್ಯರ ವರದಿಗಾಗಿ ಕಾಯಲಾಗುತ್ತಿದೆ. ಯುವತಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಅತ್ಯಾಚಾರ ಆರೋಪದಡಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
Comments are closed.