ಕುಂದಾಪುರ: ಯುವತಿಯೊಬ್ಬಳಿಗೆ ಪ್ರೇಮದ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡುವುದಾಗಿ ನಂಬಿಸಿ, ಪತ್ರಿಕೆ ಹಾಗೂ ಪೊಲೀಸರಿಗೆ ಕೊಡುವ ನೆಪದಲ್ಲಿ ಹಣ ಪಡೆದು ವಂಚಿಸಿದ್ದಾನೆ ಎಂದು ಯುವತಿಯೊಬ್ಬಳು ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಘಟನೆಯ ಹಿನ್ನೆಲೆ: ಶಂಕರನಾರಾಯಣ ಠಾಣಾ ವ್ಯಾಪ್ತಿಯ ನೆಂಚಾರು ಎಂಬಲ್ಲಿಯ ಯುವತಿ ಹಾಗೂ ಹಾಲಾಡಿಯ ಯೋಗೀಶ ನಾಯ್ಕ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಬಳಿಕ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ನಡೆದ ಕಾರಣ ಯುವತಿ ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದಳು. ಠಾಣೆಯಲ್ಲಿ ಪಂಚಾಯತಿ ನಡೆದು ಇಬ್ಬರೂ ಪ್ರತ್ಯೇಕವಾಗಿದ್ದರು ಎನ್ನಲಾಗಿದೆ. ಬಳಿಕ ಯುವತಿ ಕುಂದಾಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿದ್ದು, ಕಟ್ ಬೆಲ್ತೂರು ನಿವಾಸಿ ಶೇಖರ್ ಬಳೆಗಾರ್ ಎಂಬಾತ ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ಬಂದಿದ್ದ. ಈ ಸಂದರ್ಭ ಯುವತಿ ಹಾಗೂ ಶೇಖರ ಬಳೆಗಾರ್ ಪರಿಚಯವಾಗಿದ್ದು, ಯುವತಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಬಳಿಕ ತನಗೆ ಅಧಿಕಾರಿಗಳು ಹಾಗೂ ಪತ್ರಿಕೆಯವರ ಸಂಪರ್ಕ ಇದೆ ಎಂದು ನಂಬಿಸಿ, ಅವರಿಗೆ ಹಣ ಕೊಡಬೇಕಾಗುತ್ತದೆ ಎಂದು ಹೇಳಿದ್ದು, ಮೂರು ಬಾರಿ ಒಟ್ಟು 95 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದು ಇನ್ನೂ 1 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಷ್ಟು ಹಣ ಇಲ್ಲ ಎಂದಾಗ ಪತ್ರಿಕೆಯಲ್ಲಿ ನಿನ್ನ ಬಗ್ಗೆ ಬರೆಯಿಸಿ ಮಾರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್ ಮೇಲ್ ಮಾಡಿರುವುದಾಗಿ ಯುವತಿ ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದಳು.

ದೂರಿನ ಹಿನ್ನೆಲೆ ಪೊಲೀಸರು ಆರೋಪಿ ಶೇಖರ ಬಳೆಗಾರನನ್ನು ಶನಿವಾರ ಸಂಜೆ ಬಂಧಿಸಿದ್ದು, ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗೆ ಜಾಮೀನು ಮಂಜೂರಾಗಿದೆ.
ಘಟನೆ ಸಂಬಂದ ಶಂಕರನಾರಾಯಣ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.