
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2021ನೇ ಸಾಲಿನ ಗೌರವ ಪ್ರಶಸ್ತಿಗೆ ಅಯ್ಕೆಯಾದವರ ಹೆಸರನ್ನು ಪ್ರಕಟಿಸಿದೆ.
2021ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಪರಿಚಯ:
ಹರೇಕಳ ಹಾಜಬ್ಬ (ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರ) :
ದಕ್ಷಿಣ ಕನ್ನಡ ಜಿಲ್ಲೆಯ ಅಕ್ಷರ ಸಂತ ಎಂದೇ ಖ್ಯಾತರಾಗಿರುವ ಹರೇಕಳ ಹಾಜಬ್ಬ ಪದ್ಮಶ್ರೀ ಪುರಸ್ಕೃತರು. ಮಂಗಳೂರಿನ ಕೇಂದ್ರ ಪ್ರದೇಶ ಸ್ಟೇಟ್ ಬ್ಯಾಂಕ್ ಸರ್ಕಲಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದ ಹಾಜಬ್ಬ ತಾವೇ ಶಾಲೆಯೊಂದನ್ನು ತನ್ನೂರಿನಲ್ಲಿ ನಿರ್ಮಿಸಿದ್ದರು.
64 ವರ್ಷದ ಹಾಜಬ್ಬ ಶಾಲೆಯ ಮೆಟ್ಟಿಲು ಹತ್ತಿದವರಲ್ಲ, ಆದರೂ ಈಗ ತಮ್ಮೂರಿಗೆ ಶಾಲೆ ಕಟ್ಟಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಹಸನಾಗಿಸಿದ್ದಾರೆ. ಇದೇ ಕಾರಣಕ್ಕೆ ಅಕ್ಷರ ಸಂತ ಎನಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ 2020ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ನೀಡಿದೆ.
ಕೇಂದ್ರ ಸರ್ಕಾರದ ಗಮನವನ್ನೇ ಸೆಳೆದ ಈ ಅಕ್ಷರ ಸಂತ ಹಾಜಬ್ಬ ಬ್ಯಾರಿ ಸಮುದಾಯದ ಹೆಮ್ಮೆ. ಮಂಗಳೂರಿನ ಹರೆಕಳದಲ್ಲಿ ಹುಟ್ಟಿದ ಹಾಜಬ್ಬನವರದ್ದು ಬಡ ಕುಟುಂಬ. ಮನೆಯಲ್ಲಿ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಇದ್ದುದರಿಂದ ಶಾಲೆಗೆ ಹೋಗಿ ವಿದ್ಯೆ ಕಲಿಯಲು ಸಾಧ್ಯವಾಗಲಿಲ್ಲ. ಬಾಲ್ಯದಿಂದಲೇ ಬೀಡಿ ಸುತ್ತಿ ಜೀವನ ನಡೆಸುತ್ತಿದ್ದ ಅವರು ಆಮೇಲೆ ಮಂಗಳೂರಿಗೆ ಹೋಗಿ ಕಿತ್ತಳೆ, ಮೂಸಂಬಿ ಹಣ್ಣುಗಳನ್ನು ರಸ್ತೆ ಬದಿಯಲ್ಲಿ ಮಾರತೊಡಗಿದರು.
ಮಂಗಳೂರು ಸಾಕಷ್ಟು ಅಭಿವೃದ್ಧಿ ಹೊಂದಿದ ನಗರವಾದ್ದರಿಂದ ಅಲ್ಲಿ ಎಲ್ಲ ಭಾಷಿಕರೂ ಇದ್ದಾರೆ. ಹಾಜಬ್ಬ ಯಾವಾಗ ಮಂಗಳೂರಿಗೆ ಹೋಗಿ ಹಣ್ಣು ವ್ಯಾಪಾರ ಶುರು ಮಾಡಿದರೋ ಆಗ ಅವರಿಗೆ ನಿಜ ಪ್ರಪಂಚದ ದರ್ಶನವಾಯಿತು. ವಿದ್ಯೆ ಭಾಷೆಗಳು ಗೊತ್ತಿಲ್ಲದಿದ್ದರೆ ಸಮಾಜದಲ್ಲಿ ಎಷ್ಟು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ, ಹೇಗೆ ತಲೆ ತಗ್ಗಿಸಬೇಕಾಗುತ್ತದೆ ಎಂಬ ಅನುಭವವಾದ ಮೇಲೆ ತನ್ನಂತೆ ತನ್ನೂರಿನ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಎಂದು ನಿರ್ಧರಿಸಿದರು.
ತಮ್ಮೂರಲ್ಲಿ ಶಾಲೆಯೊಂದನ್ನು ಆರಂಭಿಸಬೇಕೆಂದು ಹಾಜಬ್ಬ ನಿರ್ಧರಿಸಿದರು. ಅದಕ್ಕಾಗಿ ಹಾಜಬ್ಬ ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ, ಬಿಇಓ ಕಚೇರಿಗೆ ಅಲೆದಾಡಿದರು. ಹಣ್ಣಿನ ವ್ಯಾಪಾರವನ್ನು ಬದಿಗಿಟ್ಟು ಶಾಲೆ ಕಟ್ಟಲು ಅನುಮತಿ ಪಡೆಯಲು ಓಡಾಡಿದ ಹಾಜಬ್ಬನಿಗೆ ಶಾಲಾರಂಭಕ್ಕೆ ಅನುಮತಿಯೂ ದೊರೆಯಲಿಲ್ಲ,
ದಿನನಿತ್ಯದ ಹೊಟ್ಟೆ ತುಂಬಿಸುತ್ತಿದ್ದ ಹಣ್ಣಿನ ವ್ಯಾಪಾರದ ಹಣವೂ ಸಿಗಲಿಲ್ಲ. ಆದರೂ ಹಾಜಬ್ಬ ಹತಾಶರಾಗಲಿಲ್ಲ. ತಮ್ಮ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಅನುಮತಿ ನೀಡಿದ್ದು, ಅದರಂತೆ 1999ರ ಜೂ.6ರಂದು ನ್ಯೂಪಡ್ಪು ಗ್ರಾಮದ ಮದರಸಾ ಕಟ್ಟಡದಲ್ಲಿ ತಾತ್ಕಾಲಿಕವಾಗಿ 28 ಮಕ್ಕಳೊಂದಿಗೆ ಪ್ರಾಥಮಿಕ ಶಾಲೆ ಆರಂಭಿಸಿದ್ದರು.
ತನ್ನೂರಿನ ವಿದ್ಯಾರ್ಥಿಗಳಿಗಾಗಿ ಸ್ವಂತ ಶಾಲಾ ಕಟ್ಟಡ ಕಟ್ಟಬೇಕೆಂದು ಹಠ ತೊಟ್ಟ ಹಾಜಬ್ಬ ಕಿತ್ತಳೆ ಮಾರಿ ಅದುವರೆಗೂ ಸಂಗ್ರಹಿಸಿದ್ದ 25 ಸಾವಿರ ರೂ. ಹಿಡಿದುಕೊಂಡು, ಗ್ರಾಮದಲ್ಲಿ ಬೇರೆಯವರು ಅತಿಕ್ರಮಣ ಮಾಡಿದ್ದ ಸರ್ಕಾರಿ ಜಾಗವನ್ನು ಶಾಲೆಗಾಗಿ ನೀಡುವಂತೆ ಅಧಿಕಾರಿಗಳ ಮುಂದೆ ಹಠ ಹಿಡಿದರು.
ಕೊನೆಗೆ, 2004ರಲ್ಲಿ ಪತ್ರಿಕೆಯೊಂದು ನೀಡಿದ ವರ್ಷದ ವ್ಯಕ್ತಿಯ 1 ಲಕ್ಷ ರೂ. ಬಹುಮಾನದ ಮೊತ್ತವನ್ನು ಶಾಲೆಯ ಕಟ್ಟಡಕ್ಕೆ ಹಾಕಿ ಪ್ರೌಢಶಾಲೆಯನ್ನೂ ಆರಂಭಿಸಲು ಅಲೆದಾಡಿದರು. ಆಗ ಶಾಸಕರಾಗಿದ್ದ ಯು.ಟಿ. ಖಾದರ್ ಆ ಊರಿಗೆ ಪ್ರೌಢಶಾಲೆ ಮಂಜೂರು ಮಾಡಿಸಿದರು. ಹಾಜಬ್ಬನವರ ಹಠದಿಂದ ಕೊನೆಗೂ ಹರೇಕಳಕ್ಕೆ ಪ್ರೌಢಶಾಲೆ ಮಂಜೂರಾಯಿತು. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ 2020ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ನೀಡಿದೆ.
ಹುಸೈನ್ ಕಾಟಿಪಳ್ಳ (ಬ್ಯಾರಿ ಕಲೆ ಮತ್ತು ಸಾಹಿತ್ಯ) :
ಮಂಗಳೂರಿನ ಪಾಂಡೇಶ್ವರ್ ನಿವಾಸಿ. ಕಳೆದ ಮೂರು ದಶಕಗಳಿಂದ ಹೆಚ್ಚು ಕಾಲ ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಮತ್ತು ಅನೇಕ ಸ್ಮರಣ ಸಂಚಿಕೆಗಳಲ್ಲಿ ಕತೆ, ಕವನ, ಲೇಖನಗಳು ಪ್ರಕಟವಾಗಿವೆ. ನಿಲಾವು ಎಂಬ ಬ್ಯಾರಿ ಮಾಸಪತ್ರಿಕೆಯ ಸಂಪಾದಕರಾಗಿಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.
ಹುಸೈನ್ ಕಾಟಿಪಳ್ಳರ ಗೀತೆಗಳು ಎಂಬ ಬ್ಯಾರಿ ಹಾಡುಗಳ ಪುಸ್ತಕ, ಬಿರ್ಂದ ಹಾಗೂ ಮೈಲಾಂಜಿ ಎಂಬ ಎರಡು ಬ್ಯಾರಿ ಕವನ ಸಂಕಲನಗಳು, “ಅಧ್ಯಕ್ಷರ ರಾಜಿನಾಮೆ” ಎಂಬಕನ್ನಡ ಕಥಾಸಂಕಲನ, “ಸಂತ್ರಪ್ತಿಯ ಜೀವನ ಪಯಣ” ಎಂಬ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ರವರ ಆತ್ಮಕಥನದ ನಿರೂಪಣೆಪ್ರಕಟವಾಗಿವೆ.
“ಸುವರ್ಣ ಮಹೋತ್ಸವಸಂಭ್ರಮ”, “ಸ್ವರ್ಣ ಮಂಜರಿ”, “ಸ್ಪಂದನ”, “ಸಂಪದ”, “ಪಯಣ ಭಾಗ 1” ಮತ್ತು “ಪಯಣ ಭಾಗ 2” ಮುಂತಾದ ಸ್ಮರಣ ಸಂಚಿಕೆಗಳ ಸಂಪಾದಕನಾಗಿ ಅತ್ಯುತ್ತಮ ರೀತಿಯಲ್ಲಿ ಸಂಚಿಕೆಗಳನ್ನು ಹೊರತಂದಿದ್ದಾರೆ. ದೋಸ್ತಿಲು ತುಳು ಚಲನಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಮಾಡಿದ್ದಾರೆ.
ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ ದ್ವಿತೀಯ ಬಿ.ಎ. / ಬಿ ಎಸ್ ಡಬ್ಲ್ಯೂವಿದ್ಯಾರ್ಥಿಗಳಿಗಾಗಿ ಪ್ರಕಟಿಸಿದ ನುಡಿಮಾಲೆಯಲ್ಲಿ ಬ್ಯಾರಿ ಕವನ ಪ್ರಕಟವಾಗಿದೆ. ತುಳು ಹಾಗೂ ಬ್ಯಾರಿ ಭಾಷೆಗಳಲ್ಲಿ “ಮಹಾಸಭೆ”ಎಂಬ ನಾಟಕ ರಚಿಸಿ ನಿರ್ದೇಶಿಸಿ, ಅಭಿನಯಿಸಿದ್ದಾರೆ.
6 ಕನ್ನಡ, 4 ತುಳು, 60 ಕ್ಕೂ ಹೆಚ್ಚು ಬ್ಯಾರಿ ಧ್ವನಿ ಸುರುಳಿಗಳಿಗೆ ಸಾಹಿತ್ಯ ರಚನೆ. 15 ಬ್ಯಾರಿ, 1 ತುಳು,ಹಾಡುಗಳ ವಿಡಿಯೋ ಆಲ್ಬಂಗಳಿಗೆ ಸಾಹಿತ್ಯ ರಚನೆ. “ಮುನ್ನುಡಿ” ಎಂಬ ಕನ್ನಡ, ಹಾಗೂ “ಅಬ್ಬಾ” ಎಂಬ ಬ್ಯಾರಿ ಚಲನ ಚಿತ್ರಗಳಲ್ಲಿ ಅತಿಥಿಕಲಾವಿದನಾಗಿ ನಟಿಸಿದ್ದಾರೆ. ಸಾವುಞ್ಞಾಕರೊ ಸಾಲೆ, ಅಂಗಲಾಪು, ಮಹಾಸಭೆ ಮುಂತಾದ ನಾಟಕಗಳಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ದಶಮಾನೋತ್ಸವ ಸಮಾರಂಭ, ಬ್ಯಾರಿ ಸಮ್ಮೇಳನಗಳು, ಕನ್ನಡ ಸಾಹಿತ್ಯ ಸಮ್ಮೇಳನಗಳು, ಅಬ್ಬಕ್ಕ ಉತ್ಸವ, ಕರಾವಳಿ ಉತ್ಸವ ಸೇರಿದಂತೆ ರಾಜ್ಯದ ವಿವಿಧ ಸಂಘಟನೆಗಳು ಏರ್ಪಡಿಸಿದ ನೂರಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕನ್ನಡ, ತುಳು ಹಾಗೂ ಬ್ಯಾರಿ ಭಾಷೆಗಳಲ್ಲಿ ಕವನ ಮಂಡಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ, ಸನ್ಮಾನದ ಮೂಲಕ ಗೌರವಿಸಿದೆ.ಪ್ರಶಸ್ತಿಯನ್ನು ಕೂಡ ನೀಡಿದೆ.
ಡಾ.ಇ.ಕೆ.ಎ. ಸಿದ್ದೀಕ್ ಅಡ್ಡೂರ್ ( ಬ್ಯಾರಿ ಸಂಸ್ಕೃತಿ ಮತ್ತು ಸಮಾಜಸೇವೆ):
ಕಳೆದ 20 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ನಗರದ ಹೊರವಲಯದ ಅಡ್ಡೂರು ಎಂಬಲ್ಲಿ ಇವರು ಸ್ವಂತ ಕ್ಲಿನಿಕನ್ನು ಹೊಂದಿದ್ದು ಕೊರೊನಾದಂತಹ ಸಂಕಷ್ಟದ ದಿನಗಳಲ್ಲಿ ಬಡವರಿಗೆ ಅತೀ ಕಡಿಮೆ ದರದಲ್ಲಿ, ಉಚಿತವಾಗಿ ಚಿಕಿತ್ಸೆ ನೀಡುತ್ತಾ ಹಗಲು ಇರುಳು ದುಡಿಯುತ್ತಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿದೆ
ಅಶ್ರಫ್ ಅಪೋಲೋ ಕಲ್ಲಡ್ಕ. (ಬ್ಯಾರಿ ಸಂಗೀತ):
ಕಳೆದ 21 ವರ್ಷಗಳಿಂದ ಕಲಾವಿದನಾಗಿ ಬ್ಯಾರಿ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಸುಮಾರು 60ಕ್ಕಿಂತ ಹೆಚ್ಚಿನ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರು ಬ್ಯಾರಿ, ಕನ್ನಡ, ತುಳು, ಹಿಂದಿ ಹೀಗೆ ಸುಮಾರು 4,500 ಕ್ಕಿಂತ ಹೆಚ್ಚಿನ ಹಾಡುಗಳನ್ನು ಹಾಡಿದ್ದಾರೆ.
65 ರಷ್ಟು ಆಡಿಯೋ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ. ವಿವಿಧ ಟಿ.ವಿ.ಚಾನೆಲ್ ಗಳಲ್ಲಿ ಹಲವಾರು ಸಂಗೀತ ರಸಮಂಜರಿ ಕಾರ್ಯಕ್ರಮ ನೀಡಿದ್ದಾರೆ. ಸುಮಾರು 300 ರಷ್ಟು ವೇದಿಕೆಯಲ್ಲಿ ಸಂಗೀತ ರಸಮಂಜರಿ ನೀಡಿದ್ದಾರೆ. 17 ಬ್ಯಾರಿ ಹಾಡುಗಳನ್ನು ಹೊಸ ರಾಗ ಸಂಯೋಜನೆಯಲ್ಲಿ ಹಾಡಿದ್ದಾರೆ.
‘ಸುರುಮ’ ಎಂಬ ಸಿಡಿಯಲ್ಲಿ ಇವರು ರಾಗ ಸಂಯೋಜನೆಯಲ್ಲಿ ಎಂಟು ಹಾಡುಗಳ ಸಾಹಿತ್ಯ, ಹಾಡುಗಾರಿಕೆ ಇದೆ. ‘ಪಿರ್ಸಪ್ಪಾಡ್’ ಎಂಬ ಬ್ಯಾರಿ ಕವನ ಸಂಕಲನ ಪುಸ್ತಕ, 26 ರಷ್ಟು ವೀಡಿಯೊ ಆಲ್ಬಂ ಸಿಡಿಗಳನ್ನು ತಂದ ಇವರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ಡಾ.ಕೆ.ಎ.ಮುನೀರ್ ಬಾವಾ.( ಸಂಘಟಕರು) :
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕಡಂಬಾರ್ ಎಂಬಲ್ಲಿನ ಕೆ.ಅಬ್ದುಲ್ಲಾ ಮತ್ತು ಖತೀಜಮ್ಮ ದಂಪತಿಯ ಪ್ರಥಮ ಮತ್ರನಾಗಿ 1976ರಲ್ಲಿ ಜನಿಸಿದ ಇವರು ಅತೀ ಕಿರಿಯ ವಯಸ್ಸಿನಲ್ಲಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡರು.
2013ರಲ್ಲಿ ಕರ್ನಾಟಕ ರಾಜ್ಯ ಸರಕಾರದ ಅಧೀನದಲ್ಲಿರುವ ದ.ಕ. ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದರು. ಜನಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಇವರು ಹಲವಾರು ಬಡ ಹೆಣ್ಣುಮಕ್ಕಳ ಮದುವೆಗೆ ಧನ ಸಹಾಯ, ಮತ್ತು ಅವರ ಮನೆಯ ರಿಪೇರಿ ಹಾಗೂ ವಿದ್ಯುಚ್ಛಕ್ತಿ ದುರಸ್ತಿ ಮುಂತಾದ ಕೆಲಸ ಕಾರ್ಯಗಳಿಗೆ ಧನಸಹಾಯವನ್ನು ಮಾಡಿದ್ದಾರೆ.
ಉದ್ಯಮ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಕೊಡುಗೆಯನ್ನು ಪರಿಗಣಿಸಿ ಮಲೇಷ್ಯಾದಲ್ಲಿ ಶ್ರೀಲಂಕಾ ಸರಕಾರದ ಕೌಲಾಲಂಪುರ ಯುನಿವರ್ಸಿಟಿಯು ಗೌರವ ಡಾಕ್ಟರೇಟ್ ನೀಡಿದೆ. ಕೀನ್ಯಾ ದೇಶದಲ್ಲಿ ನಡೆದ ಹತ್ತನೇ ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ ಕೂಡ ಇವರಿಗೆ ಸಿಕ್ಕಿದೆ.
ಮರಿಯಮ್ ಫೌಝಿಯ ಬಿ.ಯಸ್. ( ಮಹಿಳಾ ಸಾಧಕಿ):
ಸುಬ್ರಹ್ಮಣ್ಯ ಮತ್ತು ಉಪ್ಪಿನಂಗಡಿಗಳಲ್ಲಿರುವ ಕಾಲೇಜುಗಳನ್ನು ತಲುಪಲು ಕಡಬ ಪ್ರದೇಶದ ಮಕ್ಕಳಿಗೆ ಕನಿಷ್ಠ ೨೫ ಕಿ.ಮೀ ಗಳ ಬಸ್ ಪ್ರಯಾಣಕ್ಕೆ ಒಳಮಾರ್ಗದಿಂದ ೮-೧೦ ಕಿ.ಮೀ. ಗಳ ದುರ್ಗಮ ದಾರಿ ಕ್ರಮಿಸಬೇಕು. ಜೊತೆಗೆ ಹೆಣ್ಣು ಮಕ್ಕಳು ತೀರಾ ಶಿಕ್ಷಣದಿಂದ ಹಿಂದುಳಿದಿದ್ದನ್ನು ಕಂಡು, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿರುವ ಶೈಕ್ಷಣಿಕ ಹಿಂಜರಿಕೆ, ಮಾರ್ಗದರ್ಶನದ ಕೊರತೆಯನ್ನು ನೀಗಿಸಲು ಆರಂಭದಲ್ಲಿ ಇವರು ‘ಮರಳಿ ಬಾ ಶಾಲೆ’ಯನ್ನು ಸ್ಥಾಪಿಸಿ ಯಶಸ್ಸನ್ನು ಕಂಡಿದ್ದಾರೆ.
ಇದು ಕಲಾ ಮತ್ತು ವಾಣಿಜ್ಯ ಪದವಿಗಳನ್ನು ಆರಂಭಿಸಲು ಪ್ರೇರಣೆ ನೀಡಿತು. ಮಕ್ಕಳ ಕೊರತೆಯನ್ನು ನಿವಾರಿಸಲು ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆಯೂ ದೊರೆತಿದೆ. ಮಕ್ಕಳ ಪೋಷಕರ, ಶಿಕ್ಷಣಾಭಿಮಾನಿಗಳ ಸಹಕಾರ ಮತ್ತು ಬೆಂಬಲದೊಂದಿಗೆ ಕೇವಲ ಎರಡೇ ವರ್ಷಗಳಲ್ಲಿ ೨೦೦ಕ್ಕೂ ಹೆಚ್ಚು ಮಕ್ಕಳನ್ನೂ ಹದಿಮೂರು ಮಂದಿ ಉಪನ್ಯಾಸಕರನ್ನೂ ಹೊಂದಿದ್ದರು.
ಈ ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದೊಂದಿಗೆ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ನೀಡುತ್ತಿದೆ. ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಸುಲ್ಯೆಮಾನ್ ಮತ್ತು ಆಸಿಯಮ್ಮ ದಂಪತಿ ಪುತ್ರಿಯಾಗಿ ೧೫/೦೮/೧೯೮೯ ರಲ್ಲಿ ಜನಿಸಿದ ಮರಿಯಂ ಫೌಝಿಯಾ. ಬಿ ಎಸ್ ತಮ್ಮ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣವನ್ನು ಹುಟ್ಟೂರಲ್ಲೇ ಮುಗಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.
ಬ್ಯಾರಿ ಝುಲ್ಫಿ ( ಯುವ ಪ್ರತಿಭೆ):
ಬ್ಯಾರಿ ಭಾಷೆಯಲ್ಲಿ ‘ಬ್ಯಾರಿ ಬಾಸ್’ ಹೀಗೆ ಹಲವಾರು ವೀಡಿಯೊ ಆಡಿಯೋ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾರಿ ಭಾಷೆಯಲ್ಲಿ ನೂರಾರು ಹಾಸ್ಯ ಮನೋರಂಜನಾ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ
ಮುಹಮ್ಮದ್ ಬಶೀರ್ ಉಸ್ತಾದ್, ಉಡುಪಿ (ಬ್ಯಾರಿ ದಫ್):
ಕರ್ನಾಟಕದಲ್ಲಿ 30ಕ್ಕಿಂತ ಹೆಚ್ಚು ಸ್ಥಳಗಳಲ್ಲಿ ದಫ್ ತರಬೇತಿ ನೀಡಿದ್ದಾರೆ. ಸೌದಿ ಅರೇಬಿಯಾದಲ್ಲಿ 4 ಸ್ಥಳಗಳಲ್ಲಿ ತರಬೇತಿ ನೀಡಿದ್ದಾರೆ. ಹಲವು ಭಾಷೆಗಳಲ್ಲಿ ಹಾಡು ರಚಿಸಿ ಹಾಡಿರುವ ಈವರಿಗೆ ಸುಮಾರು 100ಕ್ಕಿಂತ ಹೆಚ್ಚು ಪ್ರಶಸ್ತಿಗಳು ಸಿಕ್ಕಿದೆ.
ಮುಹಮ್ಮದ್ ಫರಾಝ್ ಅಲಿ (ಬಾಲಪ್ರತಿಭೆ):
ಮಂಗಳೂರಿನ ನೀರುಮಾರ್ಗದ ಪ್ರೆಸಿಡೆನ್ಸಿ ಸ್ಕೂಲ್ ನ ಆರನೇ ತರಗತಿ ವಿದ್ಯಾರ್ಥಿಯಾಗಿರುವ ಈತನ ವಯಸ್ಸು 10.ರಾಷ್ಟ್ರೀಯ ಮಟ್ಟದ ಸ್ಪೀಡ್ ಸ್ಕೇಟರ್. ದಕ್ಷಿಣ ಭಾರತದ 7ರಾಜ್ಯಗಳನ್ನು ಒಳಗೊಂಡ ಬೆಳಗಾವಿಯಲ್ಲಿ ನಡೆದ CBSC ಸೌತ್ ಜೋನ್ ಸ್ಕೂಲ್ ಗೇಂಸ್ ನಲ್ಲಿ 1ಚಿನ್ನ,1ಕಂಚು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದ.
ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ಮೈಸೂರ್ ನಲ್ಲಿ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 1ಬೆಳ್ಳಿ 1ಕಂಚು ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ 2ಚಿನ್ನ 1ಬೆಳ್ಳಿ ಗೆದ್ದಿದ್ದ.ಪಂಜಾಬ್ ನ ಚಂಡಿಗಢದಲ್ಲಿ ನಡೆದ ರಾಷ್ಟ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ನಡೆಸುವ ಸ್ಪರ್ಧೆಯಲ್ಲಿ ಸತತವಾಗಿ 3ವರ್ಷದಿಂದ ರಾಷ್ಟ್ರಮಟ್ಟದ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದಾರೆ. ಸ್ಕೇಟಿಂಗ್ ನಲ್ಲಿ 2 ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ ಸಾಧನೆ ಮಾಡಿದ್ದಾರೆ.
Comments are closed.