ಮಂಗಳೂರು : ಹಾಪ್ ಕಾಮ್ಸ್ ಮಳಿಗೆಯಲ್ಲಿ ದರಪಟ್ಟಿಯಲ್ಲಿ ಗೊಂದಲ ಉಂಟಾಗುವ ಕುರಿತು ಸಾರ್ವಜನಿಕ ದೂರಿನ ಮೇರೆಗೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಕರಂಗಲ್ಪಾಡಿ ಹಾಪ್ ಕಾಮ್ಸ್ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋವಿಡ್ 2 ನೇ ಅಲೆಯ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಲಾಕ್ ಡೌನ್ ಜಾರಿಗೊಳಿಸಿದೆ. ಈ ವಿಚಾರದಲ್ಲಿ ಸರಕಾರವು ಹಲವಾರು ಮಾರ್ಗಸೂಚಿಗಳನ್ನು ಸೂಚಿಸಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆಯ ವರೆಗೆ ಅವಕಾಶ ನೀಡಿದೆ.
ಇದನ್ನು ಹೊರತುಪಡಿಸಿ ಸರಕಾರದ ಅಧೀನದಲ್ಲಿರುವ ಹಾಪ್ ಕಾಮ್ಸ್ ಸಂಸ್ಥೆಯ ವತಿಯಿಂದ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ವರೆಗೆ ತರಕಾರಿ, ಹಣ್ಣುಹಂಪಲುಗಳನ್ನು ಸಾರ್ವಜನಿಕರಿಗೆ ಒದಗಿಸಲು ಅವಕಾಶಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಾನಗರದಲ್ಲಿರುವ ಎಲ್ಲಾ ಹಾಪ್ ಕಾಮ್ಸ್ ಮಳಿಗೆಗಳಲ್ಲೂ ದೈನಂದಿನ ದರಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಹಾಗೂ ಪ್ರತಿಯೊಬ್ಬ ಗ್ರಾಹಕರಿಗೂ ಕೂಡ ಕಡ್ಡಾಯವಾಗಿ ಬಿಲ್ ನೀಡಬೇಕು.
ಉರ್ವಸ್ಟೋರ್, ಉರ್ವ ಮಾರ್ಕೇಟ್, ಕದ್ರಿ ಶಿವಭಾಗ್, ಕರಂಗಲ್ಪಾಡಿ, ಮಣ್ಣಗುಡ್ಡ, ಪದವಿನಂಗಡಿ, ಸ್ಟೇಟ್ ಬ್ಯಾಂಕ್, ಬೋಂದೆಲ್, ಮಾರ್ನೆಮಿಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಹಾಪ್ ಕಾಮ್ಸ್ ಸಂಸ್ಥೆಗಳಿಗೂ ಇದು ಅನ್ವಯಿಸುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಹಾಪ್ ಕಾಮ್ಸ್ ಆಡಳಿತ ನಿರ್ದೇಶಕರಿಗೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಪೋರೇಟರ್ ಕದ್ರಿ ಮನೋಹರ್ ಶೆಟ್ಟಿ ಜೊತೆಗಿದ್ದರು.
Comments are closed.