ಮಂಗಳೂರು, ಮೇ 07 : ಕೋವಿಡ್ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೆನ್ಲಾಕ್ ಆಸ್ಪತ್ರೆಯ ವೈದ್ಯರಿಗೆ ಇತರೆ ಸಿಬ್ಬಂದಿಗಳಿಗೆ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ವತಿಯಿಂದ ಗೌರವ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಇಡೀ ದೇಶ ಕೋವಿಡ್ ಮಹಾಮಾರಿಯ ವಿರುದ್ಧ ಸಂಘಟಿತವಾಗಿ ಹೋರಾಡುತ್ತಿದೆ. ವೈದ್ಯರು, ದಾದಿಯರು,ಡಿ ಗ್ರೂಪ್ ನೌಕರರು, ಪೌರ ಕಾರ್ಮಿಕರು, ಪ್ಯಾರಾ ಮೆಡಿಕಲ್, ಆಶಾ ಕಾರ್ಯಕರ್ತೆಯರು, ವಿಜ್ಞಾನಿಗಳು, ಪೋಲಿಸ್ ಇಲಾಖೆ ಮತ್ತು ಇನ್ನಿತರ ಸರಕಾರಿ ಇಲಾಖೆಯ ವಿಭಾಗಗಳಲ್ಲಿ ಕೋವಿಡ್ ಮಣಿಸುವ ನಿಟ್ಟಿನಲ್ಲಿ ಭಗೀರಥ ಪ್ರಯತ್ನ ನಡೆಯುತ್ತಿದೆ.
ಈ ನಿಟ್ಟಿನಲ್ಲಿ ಇಂದು ವೆನ್ಲಾಕ್ ಆಸ್ಪತ್ರೆಯ ವೈದ್ಯರಿಗೆ, ದಾದಿಯರಿಗೆ, ಪ್ಯಾರ ಮೆಡಿಕಲ್ ಸೇರಿದಂತೆ ಇನ್ನಿತರ ವರ್ಗದ ನೌಕರರಿಗೆ ಬಿಜೆಪಿ ಮಂಗಳೂರು ನಗರ ದಕ್ಷಿಣ ವತಿಯಿಂದ ಗೌರವಸಲ್ಲಿಸಲಾಯಿತು ಎಂದರು.
ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ತಮ್ಮ ಮನೆ ಮಂದಿಯನ್ನೆಲ್ಲ ಬಿಟ್ಟು ಕೋವಿಡ್ ಸೋಂಕಿತರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೋವಿಡ್ ವಿರುದ್ಧ ಸೆಣಸಾಡುತಿದ್ದಾರೆ. ಅವರ ಅವಿರತ ಶ್ರಮ, ತ್ಯಾಗ ಮನೋಭಾವವು ಪ್ರೇರಣಾದಾಯಕವಾಗಿದೆ.
ಕೋವಿಡ್ ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಕೋವಿಡ್ ವಿರುದ್ಧ ಹೋರಾಡುವ ಪ್ರತಿಯೊಬ್ಬರನ್ನೂ ಕೂಡ ಗೌರವಿಸಬೇಕೆಂದು ಜನತೆಯ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಕಾಮತ್ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಮುಖಂಡರಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಅತ್ತಾವರ, ಅಶ್ವಿತ್ ಕೊಟ್ಟಾರಿ,ವಸಂತ್ ಜೆ ಪೂಜಾರಿ, ವೆನ್ಲಾಕ್ ಆಸ್ಪತ್ರೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.