ಕರಾವಳಿ

‘ರೇಡಿಯೋ ಸಾರಂಗ್’ ಸಮುದಾಯ ಬಾನುಲಿಯಲ್ಲಿ ನೆಲ-ಜಲ ಜಾಗೃತಿಯ ಯಕ್ಷಗಾನ ‘ಭೂ – ಜಲ ಸಂರಕ್ಷಣ’

Pinterest LinkedIn Tumblr

ಮಂಗಳೂರು: ಕರ್ನಾಟಕ ಸರಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಶ್ರಯದಲ್ಲಿ ‘ಶುದ್ಧಜಲ ಸ್ವಚ್ಛ ನೆಲ; ಆರೋಗ್ಯವಾಗಿರಲಿ ಜೀವಸಂಕುಲ’ ಎಂಬ ಘೋಷವಾಕ್ಯದೊಂದಿಗೆ ನಡೆಯುವ ಜಾಗೃತಿ ಕಾರ್ಯಕ್ರಮಗಳಲ್ಲಿ ಇದೀಗ ಯಕ್ಷಗಾನ ಮಾಧ್ಯಮವನ್ನೂ ಪ್ರಯೋಗಾತ್ಮಕವಾಗಿ ಬಳಸಿಕೊಳ್ಳಲಾಗುತ್ತಿದೆ.

ನಗರದ ಸಂತ ಅಲೋಶಿಯಸ್ ಕಾಲೇಜಿನ ಸಮುದಾಯ ಬಾನುಲಿ ‘ರೇಡಿಯೋ ಸಾರಂಗ್’ 107.8 ಎಫ್.ಎಂ. ಸಿದ್ಧಪಡಿಸಿರುವ ‘ಭೂ – ಜಲ ಸಂರಕ್ಷಣ’ ಎಂಬ ಯಕ್ಷಗಾನ ಕಾರ್ಯಕ್ರಮ ಸರಕಾರದ ಆಶಯಗಳನ್ನು ಸಂದೇಶ ರೂಪದಲ್ಲಿ ಜನರಿಗೆ ತಲುಪಿಸುವ ಉದ್ದೇಶ ಹೊಂದಿದೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಗಾನ ಅರ್ಥದಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಕಥಾ ಸಂಯೋಜನೆಗೆ ಯುವ ಪ್ರಸಂಗಕರ್ತ, ಪ್ರಾಧ್ಯಾಪಕ ಡಾ. ದಿನಕರ ಎಸ್.ಪಚ್ಚನಾಡಿ ಪ್ರಸಂಗ ರಚನೆ ಮಾಡಿದ್ದಾರೆ.

ಯಕ್ಷಗಾನದ ವಿವಿಧ ಪಾತ್ರಗಳ ಮೂಲಕ ನೀರಿನ ಮಿತ ಬಳಕೆ, ಮಾಲಿನ್ಯ ತಡೆಗಟ್ಟುವಿಕೆ, ಜಲ ಮರು ಪೂರಣ, ಮಳೆ ನೀರಿನ ಸಂಗ್ರಹ, ಅಂತರ್ಜಲ ವೃದ್ಧಿ , ಸ್ವಚ್ಛತಾ ಕಾರ್ಯ, ತ್ಯಾಜ್ಯ ವಿಲೇವಾರಿ , ಸಂಸ್ಕರಣೆ,ಪರಿಸರ ರಕ್ಷಣೆ ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ‘ನೆಲ-ಜಲ ಸಂರಕ್ಷಣ’ ಎಬ ಈ ಪ್ರಸಂಗದಲ್ಲಿ ಜಿಲ್ಲೆಯ ಹೆಸರಾಂತ ಕಲಾವಿದರು ಭಾಗವಹಿಸಿದ್ದಾರೆ.

ಪಾತ್ರ ಸಂವಾದ :

ಪರಿಸರ ರಕ್ಷಕ ನಂದನ, ಭಕ್ಷಕ ದುರ್ಮದ, ಜಲದೇವ ವರುಣ ಮತ್ತು ನೆಲದವ್ವ ಭೂದೇವಿಯ ಭೂಮಿಕೆಗಳಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಡಾ. ದಿನಕರ ಎಸ್.ಪಚ್ಚನಾಡಿ ಪಾತ್ರ ಸಂವಾದ ನಡೆಸಿ ಯಕ್ಷಗಾನದ ಚೌಕಟ್ಟಿನೊಳಗೆ ‘ಶುದ್ಧ ಜಲ – ಸ್ವಚ್ಛ ನೆಲ’ ಜಾಗೃತಿ ಸಂದೇಶ ನೀಡಿದ್ದಾರೆ.

ಭಾಗವತ ಮತ್ತು ಸಂಗೀತ ನಿರ್ದೇಶಕ ತೋನ್ಸೆ ಪುಷ್ಕಳ ಕುಮಾರ್ ಅವರ ಹಾಡುಗಾರಿಕೆಗೆ ರೋಹಿತ್ ಉಚ್ಚಿಲ್ ಮತ್ತು ಮಯೂರ ನಾಯಗ ಚೆಂಡೆ – ಮದ್ದಳೆಗಳಲ್ಲಿ ಹಿಮ್ಮೇಳ ಒದಗಿಸಿದ್ದಾರೆ.

ಸಾರಂಗ್ ತಂಡದ ಅಭಿ಼ಷೇಕ್ ಶೆಟ್ಟಿ, ಎಡ್ವರ್ಡ್ ಲೋಬೋ, ಸೈಫುಲ್ಲಾ, ಬಿಂದಿಯಾ ಕುಲಾಲ್, ಶ್ವೇತಾ ನಿರ್ಮಾಣದಲ್ಲಿ ಸಹಕರಿಸಿದ್ದಾರೆ.

‌‌‌‌ ‘ರೇಡಿಯೋ ಸಾರಂಗ್ 1೦7.8 FM ಹಾಗೂ ಯೂಟ್ಯೂಬ್ ಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುವುದೆಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಹಾಗೂ ಸಮುದಾಯ ಬಾನುಲಿ ನಿರ್ದೇಶಕ ಫಾ.ಮೆಲ್ವಿನ್ ಪಿಂಟೊ ತಿಳಿಸಿದ್ದಾರೆ.

Comments are closed.