ಕರಾವಳಿ

ಕೋವಿಡ್ ಮಾರ್ಗಸೂಚಿ ಬಗ್ಗೆ ಜಿಲ್ಲಾಧಿಕಾರಿಗಳಿಂದ ರಸ್ತೆಗಿಳಿದು ವ್ಯಾಪಕ ಕಾರ್ಯಾಚರಣೆ: ಹಲವರಿಗೆ ರೂ.5000 ದಂಡ ಕಟ್ಟಲು ಸೂಚನೆ

Pinterest LinkedIn Tumblr

ಮಂಗಳೂರು, ಮಾರ್ಚ್ 24 :ಮಂಗಳೂರು ನಗರ ವ್ಯಾಪ್ತಿಯ ಬಂದರು ಪ್ರದೇಶ, ಸ್ಟೇಟ್ ಬ್ಯಾಂಕ್ ರಸ್ತೆ, ನೆಲ್ಲಿಕಾಯಿ ರಸ್ತೆ, ಅಜೀಜುದ್ದೀನ್ ರಸ್ತೆ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ.ವಿ ಅವರು ಭೇಟಿ ನೀಡಿ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸುವುದರ ಜೊತೆಗೆ ಉಲ್ಲಂಘಿಸಿದ ಕೆಲವು ಟ್ರೇಡರ್ಸ್‍ಗಳಿಗೆ ದಂಡ ವಿಧಿಸಲು ಸೂಚಿನೆ ನೀಡಿದರು.

ತಮ್ಮ ಕಚೇರಿ ಆವರಣದಲ್ಲಿ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಪ್ರವೇಶವಿಲ್ಲ, ಸರ್ಕಾರಿ ಸೇರಿದಂತೆ ಖಾಸಗಿ ಕಚೇರಿಗಳಿಗೂ ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಮಾಸ್ಕ್ ನೀಡಿ ಎಚ್ಚರಿಕೆ ನೀಡಿದರು. ಸ್ಟೇಟ್ ಬ್ಯಾಂಕ್ ವೃತ್ತದ ಬಳಿ ಕೆಲವು ಖಾಸಗಿ ಬಸ್‍ಗಳು ಹಾಗೂ ಬೈಕ್ ಸವಾರರನ್ನು ತಡೆದು ಮಾಸ್ಕ್ ಧರಿಸುವಂತೆ ಹೇಳಿದರು. ಮಾಸ್ಕ್ ಇಲ್ಲದೇ ಬಸ್‍ನಲ್ಲಿ ಪ್ರಯಾಣಿಸುವ ಜನರಿಗೆ ಬಸ್ ಒಳಗಡೆ ಪ್ರವೇಶಿಸಲು ಬಿಡಬೇಡಿ ಎಂದು ಚಾಲಕ ಹಾಗೂ ಕಂಡಕ್ಟರ್ ಗೆ ಸೂಚನೆ ನೀಡಿದರು.

ನಗರದ ಅಜೀಜುದ್ದೀನ್ ರಸ್ತೆಯ ಎಂ.ಅಷ್ರಫ್ ಅಂಡ್ ಕಂಪನಿ ಮಳಿಗೆಗೆ ಭೇಟಿ ನೀಡಿ ಮಾಸ್ಕ್ ಧರಿಸದೇ ಇದ್ದವರಿಗೆ ತರಾಟೆಗೆ ತೆಗೆದುಕೊಂಡರು ಹಾಗೂ ಕಂಪನಿ ಮಾಲೀಕನಿಗೆ 5,000 ರೂ. ದಂಡ ವಿಧಿಸಲು ಸೂಚನೆ ನೀಡಿದರು. ಜೊತೆಗೆ ಕಂಪನಿಯ ಒಳಗೆ ಮಾಸ್ಕ್ ಧರಿಸದೇ ಕೆಲಸ ಮಾಡುವುದು ಕಂಡು ಬಂದರೆ ಕಂಪನಿಯನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಅದೇ ರಸ್ತೆಯ ಯು.ಎಸ್.ಎ ಎಂಟರ್‍ಪ್ರೈಸಸ್ ಗೆ ಭೇಟಿ ನೀಡಿ ಅಲ್ಲಿನ ಮಾಲೀಕ ಹಾಗೂ ಸಿಬ್ಬಂದಿಗಳು ಮಾಸ್ಕ್ ಧರಿಸದೇ ಬೇಜವಬ್ದಾರಿಯಿಂದ ಕುಳಿತಿರುವುದನ್ನು ಕಂಡು ಅಂಗಡಿ ಮಾಲೀಕರಿಗೆ 5,000 ರೂ. ದಂಡ ವಿಧಿಸಲು ಸೂಚಿಸಿದ್ದು, ಗ್ರಾಹಕರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆಯಾ ಅಂಗಡಿ ಮಾಲೀಕರು ನಿಗಾ ವಹಿಸಬೇಕು ಇಲ್ಲದಲ್ಲಿ, ಮಾಲೀಕರಿಗೆ ದಂಡ ವಿಧಿಸಿ ಎಂದು ಎಚ್ಚರಿಸಿದರು.

ಬಂದರಿನ ಮೊಹಮ್ಮದ್ ರಸ್ತೆಯ ಕೆ. ಉಮರ್ ಫಾರೂಕಿ ಅಂಡ್ ಸನ್ಸ್ ನ ಅಂಗಡಿಗೆ ಏಕಾಏಕಿ ದಾಳಿ ನಡೆಸಿ ಮಾಸ್ಕ್ ಧರಿಸದೇ ಕೆಲಸ ಮಾಡುತ್ತಿದ್ದ ಮಾಲೀಕನಿಗೆ ಕೂಡ ದಂಡ ವಿಧಿಸಲು ತಿಳಿಸಿದ ಅವರು, ಮತ್ತೊಮ್ಮೆ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳು ಕಂಡುಬಂದರೆ ಹೆಚ್ಚಿನ ದಂಡ ವಿಧಿಸಲಾಗುವುದು ಹಾಗೂ ಅಂಗಡಿಯನ್ನು ಮುಲಾಜಿಲ್ಲದೇ ಮುಚ್ಚಿಸಲಾಗುವುದು ಎಂದರು.

ಬಂದರು ಪ್ರದೇಶದ ಜೆ.ಎಂ ರಸ್ತೆಯ ಬಳಿ ಮಾಸ್ಕ್ ಧರಿಸದೇ ಅಟೋ ಚಾಲನೆ ಮಾಡುತ್ತಿದ್ದ ಚಾಲಕನ ವಾಹನ ಸಂಖ್ಯೆಯನ್ನು ನಮೂದಿಸಿ ದಂಡ ವಿಧಿಸಲು ತಿಳಿಸಿದರು ಹಾಗೂ ಕೋವಿಡ್ ನಿಯಮ ಉಲ್ಲಂಘನೆ ಮಾಡುವ ಪ್ರಯಾಣಿಕರನ್ನು ಅಟೋದಲ್ಲಿ ಹತ್ತಿಸಬಾರದು ಎಂದು ಸೂಚನೆ ನೀಡಿದರು.

ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ಕುಟುಂಬದ ರಕ್ಷಣೆಯನ್ನು ಮಾಡುವ ಜವಬ್ದಾರಿ ಹೊಂದಿರಬೇಕು. ಹೆಚ್ಚಿನ ಪ್ರಮಾಣದಲ್ಲಿ ಜನರು ಕೋವಿಡ್ ನಿಯಮಗಳ ಉಲಂಘನೆ ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಕಂಡುಬಂದರೇ ದಿಡೀರ್ ದಾಳಿ ನಡೆಸಿ ದಂಡ ವಿಧಿಸುವುದರೊಂದಿಗೆ, ಆಯಾ ಅಂಗಡಿ, ವಾಹನಗಳ ಪರವಾನಿಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುವುದು ಎಂದರು.

ಲಾಕ್‍ಡೌನ್‍ನಿಂದಾಗಿ ಅನೇಕ ತೊಂದರೆಗಳು ಎದುರಾಗುತ್ತದೆ ಹಾಗೂ ಜನರ ಜೀವನವೇ ಕಷ್ಟಕರವಾಗುತ್ತದೆ. ಕಳೆದ ಬಾರಿಯ ಲಾಕ್‍ಡೌನ್‍ನಿಂದಾದ ಪರಿಣಾಮಗಳನ್ನು ಪ್ರತಿಯೊಬ್ಬರು ಅನುಭವಿಸಿದ್ದಾರೆ. ಲಾಕ್‍ಡೌನ್‍ಗೆ ದಾರಿ ಮಾಡಿಕೊಡದೆ ಜನರಿಗೆ ಜಾಗೃತಿ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಉಪ ವಿಭಾಗ ಅಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಚಂದ್ರ ಬಾಯಾರಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಪಾಲಿಕೆ ಆರೋಗ್ಯಾಧಿಕಾರಿ ಮಂಜೇಶ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಸುಜಯ್ ಭಂಡಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಿಕ್ಷಣಾಧಿಕಾರಿ ಜ್ಯೋತಿ, ಪಾಲಿಕೆಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.