ಕರಾವಳಿ

“ತುಳು” ರಾಜ್ಯ ಭಾಷೆಯಾಗುವತ್ತ ತುಳುವರೆಲ್ಲರ ಸಂಘಟಿತ ಹೋರಾಟ ಅನಿವಾರ್ಯ: ಡಾ.ಆಕಾಶ್ ರಾಜ್ ಜೈನ್

Pinterest LinkedIn Tumblr

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಜೈ ತುಳುನಾಡ್ (ರಿ.) ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಾತೃ ಭಾಷಾ ದಿನದ ಅಂಗವಾಗಿ ನಗರದ ಉರ್ವಾಸ್ಟೋರ್ ಬಳಿಯಿರುವ ತುಳು ಭವನದಲ್ಲಿ “ತುಲು- ತುಲಿಪು” ಕಾರ್ಯಕ್ರಮ ಜರಗಿತು.

ಕಾರ್ಯಕ್ರಮವನ್ನು ಕಲಸೆಗೆ ಭತ್ತ ಸುರಿಯುವ ಮೂಲಕ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ ಕತ್ತಾಲ್‌ಸರ್‌ ಅವರು ಉದ್ಘಾಟಿಸಿ, ಮಾತೃ ಭಾಷೆಯ ಮಹತ್ವದ ಕುರಿತು ಅರಿವು ಮೂಡಿಸಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ.ಆಕಾಶ್ ರಾಜ್ ಜೈನ್ ತುಳು ಭಾಷೆ ರಾಜ್ಯದ ಅಧಿಕೃತ ಭಾಷೆ ಸ್ಥಾನಮಾನದ ಸಾಧಕ ಬಾಧಕಗಳ ಕುರಿತು ಮಾತನಾಡಿ “ತುಳು ರಾಜ್ಯ ಭಾಷೆಯಾಗುವತ್ತ ತುಳುವರೆಲ್ಲರೂ ಒಂದುಗೂಡಿ ಹೋರಾಟ ನಡೆಸಬೇಕಾದ ಅನಿವಾರ್ಯತೇ ಇದೆ” ಎಂದರು.

“ಪಾರ್ದನದ ಪೊರ್ಲು- ತಿರ್ಲ್” ಕಾರ್ಯಕ್ರಮದಲ್ಲಿ ಹಿರಿಯ ಪಾರ್ದನ ಕಲಾವಿದರಾದ ಅಪ್ಪಿ ಶೆಟ್ಟಿ ಹಾಗೂ ದೈವ ನರ್ತಕರೂ ಮತ್ತು ಸಿವಿಲ್ ಇಂಜಿನಿಯರ್ ಆದ ರವೀಶ್ ಪಡುಮಲೆ ಇವರು ಪಾರ್ದನ ಹಾಡಿ ಅದರ ಮಹತ್ವವನ್ನು ವಿವರಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀಮತಿ ತಾರಾ ಆಚಾರ್ಯ, ನಾಗೇಶ್ ಕುಲಾಲ್, ನರೇಂದ್ರ ಕೆರೆಕಾಡು, ‌ದಿನೇಶ್ ರೈ ಕಡಬ, ತುಳು ರಂಗಭೂಮಿ ಕಲಾವಿದರಾದ ಇಸ್ಮಾಯಿಲ್ ತಣ್ಣೀರುಬಾವಿ, ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಡೆದ ತುಳು ಕಬಿಕೂಟದಲ್ಲಿ ಪದವಿಪೂರ್ವ ಕಾಲೇಜಿ ಉಪನ್ಯಾಸಕರು ರಘು ಇಡ್ಕಿದು, ಉಡುಪಿ ಸಮೂಹ ಸಂಸ್ಥೆಯ ಉಪನ್ಯಾಸಕಿ ಅರ್ಪಿತಾ ಶೆಟ್ಟಿ , ಸಾಹಿತಿಗಳಾದ ಆರ್ಯನ್ ಸವಣಾಲ್ ಇವರು ತುಳು ಕಬಿಕೂಟದ ಗಣ್ಯ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಹಾಗೂ ಸಂಘಟನೆಯ ಸದಸ್ಯರಿಂದ ತುಳು ಕವಿಗೊಷ್ಟಿ ನಡೆಯಿತು.

ಜೈ ತುಳುನಾಡು ಸಂಘಟನೆಯ ಸಂಸ್ಥಾಪಕ ಸದಸ್ಯರಾದ ಹಾಗೂ ತುಳು ಪರ ಕೆಲಸದಲ್ಲಿ ನಿರಂತರ ತೊಡಗಿಸಿ ಕೊಂಡ ‌ಕಿರಣ್ ತುಳುವೆ ಇವರನ್ನು ಸನ್ಮಾನಿಸಲಾಯಿತು ಹಾಗೂ ತುಳು ಲಿಪಿ ಶಿಕ್ಷಕರಿಗೆ ಅಭಿನಂದಿಸಲಾಯಿತು.

ರಾಜೇಂದ್ರ ಪ್ರಸಾದ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಸದಸ್ಯರಾದ ಪೂರ್ಣಿಮ ಬಂಟ್ವಾಳ ಸ್ವಾಗತಿಸಿದರು. ದೀಕ್ಷಿತಾ ಮಧ್ಯ ವಂದಿಸಿದರು.

Comments are closed.