ಕರ್ನಾಟಕ

ಶೃಂಗೇರಿ ಅಪ್ರಾಪ್ತೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಮತ್ತೆ ಮೂವರು ವಶಕ್ಕೆ, ಪಿಎಸ್ಐ ಎತ್ತಂಗಡಿ..!

Pinterest LinkedIn Tumblr

ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ನಡೆ​ದಿ​ರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪದಡಿಯಲ್ಲಿ ಸಿಪಿಐ ಅಮಾನತು ಮಾಡಿದ ಬೆನ್ನಲ್ಲೆ ಶೃಂಗೇರಿ ಪೊಲೀಸ್‌ ಠಾಣೆ ಪಿಎಸ್ಐ ಕೀರ್ತಿಕುಮಾರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

ಕೀರ್ತಿಕುಮಾರ್‌ ಅವರನ್ನು ಕರಾವಳಿ ಕಾವಲು ಪಡೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಶುಕ್ರವಾರವಷ್ಟೇ ವೃತ್ತ ನಿರೀಕ್ಷಕ ಸಿದ್ದರಾಮಯ್ಯ ಅವರನ್ನು ಸಸ್ಪೆಂಡ್‌ ಮಾಡಲಾಗಿತ್ತು. ಅವರ ಸ್ಥಾನಕ್ಕೆ ಮತ್ತೋರ್ವ ಸಿಪಿಐ ಅವರನ್ನು ನಿಯೋಜಿಸಲಾಗಿದೆ.

ಕಳೆದ ವಾರ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲು ಹಾಗೂ ಆರೋಪಿಗಳ ಬಂಧನದ ವಿಷಯದಲ್ಲಿ ಮೃದುಧೋರಣೆ ತಾಳಿರುವ ಹಿನ್ನೆಲೆ ವೃತ್ತ ನಿರೀಕ್ಷಕರು ಹಾಗೂ ಸಬ್‌ಇನ್ಸ್‌ಪೆಕ್ಟರ್ ಅವರನ್ನು ತನಿಖೆಯಿಂದ ಕೈ ಬಿಟ್ಟು ಹೊಸ ತಂಡದೊಂದಿಗೆ ಹೆಚ್ಚುವರಿ ಎಸ್ಪಿ ಶ್ರುತಿ ಅವರು ತನಿಖೆ ಕೈಗೊಂಡಿದ್ದಾರೆ.

ಈಗಾಗಲೇ 8 ಮಂದಿ ಬಂಧನವಾಗಿದ್ದು 9 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದು ಮತ್ತೆ ಮೂವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪರಾರಿಯಾದ ಆರೋಪಿಗಳ ಪತ್ತೆಗೆ ಬಲೆಬೀಸಲಾಗಿದೆ.

Comments are closed.