ಚೆನ್ನೈ : ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕರಾಗಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಜೀವಕ್ಕೆ ಆಪತ್ತು ಇರುವ ಹಿನ್ನಲೆ ಅವರಿಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ.
ಕರ್ನಾಟಕದಲ್ಲಿ ದಿಟ್ಟ ಅಧಿಕಾರಿ ಎಂದು ಹೆಸರು ಮಾಡಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಪೊಲೀಸ್ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿದ ಬಳಿಕ ತಮಿಳುನಾಡು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.
ಕರ್ನಾಟಕದಲ್ಲಿ ದಿಟ್ಟ ಪೊಲೀಸ್ ಅಧಿಕಾರಿ ಎಂದು ಹೆಸರು ಪಡೆದು ಕರ್ನಾಟಕದ ಸಿಂಹ ಎಂದೇ ಖ್ಯಾತಿ ಪಡೆದಿರುವ ಅಣ್ಣಾಮಲೈ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಅವರ ಜೀವಕ್ಕೆ ಬೆದರಿಕೆ ಇರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಇದೀಗ ಅವರ ಜೀವಕ್ಕೆ ಬೆದರಿಕೆ ಇರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಕುರಿತು ಸಾಕಷ್ಟು ಕರೆಗಳು ಬಂದ ಬಳಿಕ ಅವರಿಗೆ ಹೆಚ್ಚಿನ ಭದ್ರತೆ ಅವಶ್ಯಕತೆ ಇದೆ ಎಂಬುದನ್ನು ಅರಿತ ತಮಿಳುನಾಡು ಪೊಲೀಸರು ಅವರಿಗೆ ವೈ ಪ್ಲಸ್ ಭದ್ರತೆ ನೀಡಿದ್ದಾರೆ.
ಕೆಲ ಮಾವೋವಾದಿ ಮತ್ತು ಪಿಎಫ್ಐ ಗುಂಪುಗಳಿಂದ ಬೆದರಿಕೆ ಬರುತ್ತಿರುವುದಾಗಿ ತಿಳಿದುಬಂದಿದೆ. ವೈ ಪ್ಲಸ್ ಭದ್ರತೆ ಹಿನ್ನೆಲೆಯಲ್ಲಿ ಸದ್ಯ ಅವರ ಭದ್ರತೆಗೆ 11 ಜನ ಕಮಾಂಡೋಗಳು ಮತ್ತು ಇಬ್ಬರು ಗನ್ ಮ್ಯಾನ್ ಇರಲಿದ್ದು, ಅವರ ನಿವಾಸಕ್ಕೆ ಒಬ್ಬರು ಭದ್ರತೆಯನ್ನು ನಿಯೋಜಿಸಲಾಗಿದೆ.
ಕರ್ನಾಟಕದ ಸಿಂಗಂ ಎಂದೇ ಗುರುತಿಸಿ ಕೊಂಡಿದ್ದ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ನೇರ ದಿಟ್ಟ ಆಡಳಿತದಿಂದ ಜನ ಮನ್ನಣೆ ಪಡೆದಿದ್ದರು. 10 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ ಅವರು ಮೇ 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರು.