ಕರಾವಳಿ

ಕ್ರೈಸ್ತ ಮುಖಂಡರಿಂದ ಪೊಲೀಸ್ ಕಮಿಷನರ್ ಸೌಹಾರ್ದ ಭೇಟಿ: ಹಲವು ವಿಚಾರಗಳ ಬಗ್ಗೆ ಚರ್ಚೆ

Pinterest LinkedIn Tumblr

ಮಂಗಳೂರು : ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೊಯ್ ಕ್ಯಾಸ್ತೆಲಿನೊ ಇವರ ನೇತೃತ್ವದಲ್ಲಿ ಕ್ರೈಸ್ತ ಮುಖಂಡರು ನಗರದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಇವರ ಸೌಹಾರ್ದ ಭೇಟಿ ಮಾಡಿದರು.

ಹೂಗುಚ್ಛ ಸ್ವೀಕರಿಸಿ ಮಾತನಾಡಿದ ಕಮಿಷನರ್, ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ, ಹಾಗೂ ಪ್ರಾಚೀನ ಕೇಂದ್ರಗಳ ಬಗ್ಗೆ ಅವುಗಳ ಕಲಾ ವಿನ್ಯಾಸದ ಬಗ್ಗೆ ಅರಿಯುವ ಇಚ್ಛೆಯಿದೆ. ತುಳುವಿನಲ್ಲಿ ಇರುವ ತಮ್ಮ ನಾಮಫಲಕ ತೋರಿಸಿ, ಬಹುಭಾಷೆಗಳ ಬೀಡಾದ, ಮಂಗಳೂರಿನಲ್ಲಿ ಕೆಲಸ ಮಾಡುವುದು ಅಪ್ಯಾಯಮಾನ ಎಂದರು.

ಕೊಂಕಣಿ ಬಗ್ಗೆಯೂ ಮಾಹಿತಿ ಪಡೆದರು. ಸಾಧ್ಯವಿದ್ದಲ್ಲಿ ಕಲಿಯುವ ಭರವಸೆ ನೀಡಿದರು.ಅದೇ ರೀತಿ ಕಾನೂನು ಸುವ್ಯವಸ್ಥೆ ಕಾಪಾಡಲು ಜನರೊಡನೆ ಬೆರೆತು, ಜನಮನ ಅರಿತು ಕೆಲಸ ಮಾಡಬೇಕು. ಇದರಿಂದ ಇಲಾಖೆ ಮತ್ತು ಸಾರ್ವಜನಿಕರ ಮಧ್ಯೆ ಉತ್ತಮ ಸಂಬಂಧ ರೂಪಿತವಾಗುವುದು. ಈ ಕೆಲಸದಲ್ಲಿ ತಮ್ಮ ಸಹಕಾರ ಅಗತ್ಯ ಎಂದರು.

ರೊಯ್ ಅವರು ಅವರ ಕೆಲಸ ಕಾರ್ಯಗಳನ್ನು, ಕಲೆ ಸಂಸ್ಕೃತಿಯ ಬಗ್ಗೆ ಅವರ ಒಲವನ್ನು ಶ್ಲಾಘಿಸಿ, ಕ್ರೈಸ್ತ ಸಮುದಾಯದ ಪರವಾಗಿ ಅಗತ್ಯ ಸಹಕಾರದ ಭರವಸೆ ನೀಡಿದರು.

ಕೊಂಕಣಿಯ ಪ್ರಮುಖ ಸಂಘಟನೆ ಮಾಂಡ್ ಸೊಭಾಣ್ ಇದರ ಅಧ್ಯಕ್ಷ ಲೂವಿಸ್ ಪಿಂಟೊ, ಕ್ರೈಸ್ತ ಉದ್ಯಮಿಗಳ ಒಕ್ಕೂಟ ರಚನಾ ಇದರ ಅಧ್ಯಕ್ಷ ಎಲಿಯಾಸ್ ಸಾಂಕ್ತಿಸ್, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿ 131 ಘಟಕಗಳನ್ನು ಹೊಂದಿರುವ ಕಥೊಲಿಕ್ ಸಭಾದ ಅಧ್ಯಕ್ಷ ಸ್ಟ್ಯಾನಿ ಲೋಬೊ ಮತ್ತು ಚಲನಚಿತ್ರ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಆಲ್ವಾರಿಸ್ ಇದ್ದರು.

Comments are closed.