ಒಂದು ಕಡೆ ಆನೆ,ಚಿರತೆ, ಮಂಗ,ಕಾಡುಕೋಣ ದಂತಹ ಕಾಡು ಪ್ರಾಣಿಗಳ ಹಾವಳಿ ಇನ್ನೊಂದು ಕಡೆ ಅರಣ್ಯ ರಕ್ಷಣೆಯ ನೀತಿಯನ್ನು ಮುಂದಿಟ್ಟು ನಮಗೆ ಮೂಲ ಭೂತ ಸೌಕರ್ಯಗಳಾದ ಸೂಕ್ತವಾದ ರಸ್ತೆ,ಕಿರು ಸೇತುವೆಗಳನ್ನು ಒದಗಿಸದೆ,ದುರಸ್ತಿ ಮಾಡದೆ ಈ ಭಾಗದ ಅಭಿವೃದ್ಧಿಗೆ ತೊಡಕಾಗಿದೆ. ಇದರ ನಡುವೆ ಕಸ್ತೂರಿ ರಂಗನ್ ರಂತಹ ವರದಿಯನ್ನು ಸರಕಾರ ಯಾವಾಗ ಜಾರಿ ಮಾಡುತ್ತಾರೋ… ಎನ್ನುವ ತೂಗು ಗತ್ತಿಯ ಭಯದ ನೆರಳಿನಲ್ಲಿ ನಮ್ಮ ಬದುಕು ಸಾಗುತ್ತಿದೆ…ಎಂದು ಕೊಂಬಾರು,ಸಿರಿಬಾಗಿಲು ಗ್ರಾಮಸ್ಥರು ಖೇದ ವ್ಯಕ್ತಪಡಿಸಿದರು.
ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ,ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ರವಿವಾರ ರಾತ್ರಿ ಕೊಂಬಾರು ಚೆನ್ನಕೇಶವ ಅವರ ಮನೆಯ ವಠಾರದಲ್ಲಿ ಹಮ್ಮಿಕೊಂಡ ವಾಸ್ತವ್ಯ ಶಿಬಿರದ ಚಾವಡಿ ಚರ್ಚೆಯಲ್ಲಿ ಅವರು ತಮ್ಮ ಅಹವಾಲನ್ನು ತೋಡಿಕೊಂಡರು.
ಕೊಂಬಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾದ ಪ್ರಸನ್ನ ಕುಮಾರ್ ಅವರು ಹೇಳುವಂತೆ ” ನಮ್ಮ ಹಿರಿಯರು ಹೇಳುವ ಪ್ರಕಾರ 1903ರಲ್ಲಿ ಬ್ರಿಟಿಷ್ ಆಳ್ವಿಕೆಯ ಸ್ವಾತಂತ್ರ್ಯ ಪೂರ್ವ ದಲ್ಲಿ ಇಲ್ಲಿ ಎರಡು ಬಂಗ್ಲೆ ಗಳಿತ್ತು.ಆಗ ಬ್ರಿಟಿಷ್ ಅಧಿಕಾರಿಗಳು (ಅವರನ್ನು ದೊರೆಗಳು ಎನ್ನುತ್ತಿದ್ದರು) ಓಡಾಟ ನಡೆಸಲು ಕುದಾರೆ ಗಾಡಿ ಓಡುವ ರಸ್ತೆ ಗಳನ್ನು ಗುರುತಿಸಲಾಗಿತ್ತು.ಆ ರಸ್ತೆ ಗಳು ಇಂದಿಗೂ ನಕ್ಷೆ ಯಲ್ಲಿದೆ.
ಆದರೆ ಬಳಿಕ ಇಲ್ಲಿ ವಾಸ ಮಾಡುತ್ತಿರುವ ಜನರ ಅನುಕೂಲಕ್ಕೆ ಅಗತ್ಯವಾಗಿದ್ದ ರಸ್ತೆ ನಿರ್ಮಾಣಕ್ಕೆ ಸರಕಾರದ ನೀತಿಗಳು ತೊಡಕಾಗಿವೆ.1984 ರ ನಂತರ ಸುಪ್ರೀಂ ಕೋರ್ಟ್ ನ ತೀರ್ಪು ನಾವು ವಾಸಿಸುತ್ತಿರುವ ಪ್ರದೇಶದಲ್ಲಿ ಅರಣ್ಯ ರಕ್ಷಣೆಯ ಹೆಸರಿನಲ್ಲಿ ಅಭಿವೃದ್ಧಿ ಗೆ ತೊಡಕಾಗಿ ಪರಿಗಣಿಸಿದೆ.
ಇತ್ತೀಚಿನ ಕಸ್ತೂರಿ ರಂಗನ್ ವರದಿ ಜಾರಿ ಮಾಡಲಾಗುತ್ತದೆ ಎನ್ನುವ ಪ್ರಸ್ತಾಪ ನಮ್ಮನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿತ್ತು. ಆ ವರದಿ ಜಾರಿ ಮಾಡಬಾರದು ಎಂದು ನಾವು ಪಂಚಾಯತ್ ಗಳಲ್ಲಿ ನಿರ್ಣಯ ಮಾಡಿ ಸರಕಾರದ ವಿವಿಧ ಹಂತದ ಅಧಿಕಾರಿಗಳಿಗೆ,ಸಚಿವರಿಗೆ ಸಲ್ಲಿಸಿದ್ದೇವೆ. ನಾವು ಕಾಡಿನ ನಡುವೆ ಬದುಕು ಕಟ್ಟಿಕೊಂಡು ಇದ್ದೇವೆ.
ಅರಣ್ಯ ರಕ್ಷಣೆಯ ಕಾನೂನು ಬೇಡ ಎಂದು ನಾವು ಹೇಳುವುದಿಲ್ಲ.ಆದರೆ ನಾವು ವಾಸುತ್ತಿರುವ ಪ್ರದೇಶ ಎಲ್ಲಾ ಪ್ರದೇಶಗಳ ರೀತಿ,ರಸ್ತೆ, ಸೇತುವೆ,ಬಸ್ ಸೌಕರ್ಯ,ನಮ್ಮ ಮಕ್ಕಳಿಗೆ ಸೂಕ್ತ ಶಿಕ್ಷಣ ಪಡೆಯುವ ವ್ಯವಸ್ಥೆ ..ಸೂಕ್ತ ಆಸ್ಪತ್ರೆ ಮೊದಲಾದ ಬದುಕಿಗೆ ಬೇಕಾದ ಅಗತ್ಯ ಸೌಲಭ್ಯ ನೀಡುವುದಕ್ಕೆ ಸರಕಾರದ ನೀತಿ ಅಡ್ಡಿಯಾಗ ಬಾರದು.
ಈ ನೀತಿ ರೂಪಿಸುವ ಸಂದರ್ಭದಲ್ಲಿ ನಮ್ಮ ಇರುವಿಕೆಯನ್ನಯ ಗಮನಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು .ಇಲ್ಲದೆ ಹೋದರೆ ಇನ್ನೂ ಎಷ್ಟೋ ವರ್ಷ ಕಳೆದರೂ ಈ ಗ್ರಾಮದ ಅಭಿವೃದ್ಧಿ ಎನ್ನುವುದು ಮರಿಚಿಕೆಯಾದೀತು ….ಎಂದು ಕೊಂಬಾರು, ಸಿರಿ ಬಾಗಿಲು ಗ್ರಾಮಗಳ ಅಭಿವೃದ್ಧಿಗೆ ತೊಡಕಾಗಿರುವ ಸಮಸ್ಯೆ ಗಳನ್ನು ವಿವರಿಸಿದರು.
ಕೊಂಬಾರು ಗ್ರಾಮದ ಚೆನ್ನಪ್ಪ ಗೌಡರು ಹೇಳುವಂತೆ “ನನಗೆ ಈಗ 64ವರ್ಷ ಈ ಗ್ರಾಮದಲ್ಲಿ ಇದ್ದೆ ಶಾಲೆಗೆ ಹೋಗ ಬೇಕಾದರೆ ಮೈಲು ಗಟ್ಟಲೆ ನಡೆದು ಹೋಗಬೇಕಾ ಗಿತ್ತು..ಈಗಲೂ ಸಮರ್ಪಕ ವಾದ ಬಸ್ ವ್ಯವಸ್ಥೆ ಇಲ್ಲ.ಇಲ್ಲಿ ನ ಮಕ್ಕಳ ಉತ್ತಮ ಶಿಕ್ಷಣ ಪಡೆಯಬೇಕಾದರೆ ಈ ಊರಿನ ಹೊರಗೆ ನಮ್ಮ ಸಂಬಂಧಿ ಕರ ಮನೆ ಗೆ ಕಳುಹಿಸುತ್ತೇವೆ.
ನಮ್ಮ ಬೆಳೆಗಳಿಗೆ ಆನೆ,ಚಿರತೆ, ಕಡವೆ,ಕಾಡು ಹಂದಿ,ಮಂಗಳ ಹಾವಳಿ ಈಗಲೂ ಇದೆ.ನಾನು 1969ರಲ್ಲಿ ಎರಡೂವರೆ ರೂಪಾಯಿ ಸಂಬಳಕ್ಕೆ ಇಲ್ಲಿ ನ ರೈಲು ನಿಲ್ದಾಣ ದ ಕೆಲಸ ನಡೆಯುತ್ತಿದ್ದಾಗ ಕೆಲಸಕ್ಕೆ ಹೋಗುತ್ತಿದ್ದೆ.ಆಗ ಒಂದು ರೂಪಾಯಿ ಗೆ ನಾಲ್ಕು ತೆಂಗಿನ ಕಾಯಿ ದೊರೆಯುತ್ತಿತ್ತು.45ರೂಪಾಯಿಗೆ ಒಂದು ಮುಡಿ ಅಕ್ಕಿ ದೊರೆಯುತ್ತಿತ್ತು.ವಾಹನ ಸೌಕರ್ಯ ಇಲ್ಲದ ಕಾರಣ ನಡೆದ ಹೋಗುತ್ತಿದ್ದೆವು.
ಕನಿಷ್ಠ ಸಂಬಳ ದಲ್ಲಿ ಬದುಕಿದ್ದೇವೆ.ಆದರೆ ಈಗ ಎಲ್ಲಾ ಕಡೆ ರಸ್ತೆ, ಶಾಲೆ,ಆಸ್ಪತ್ರೆ, ಬಸ್ಸು ಸೌಕರ್ಯ ಇದೆ.ನಮಗೆ ಆ ವ್ಯವಸ್ಥೆ ಗಳಿಲ್ಲ.ಮಳೆಗಾಲದಲ್ಲಿ ನಮ್ಮ ಸಮಸ್ಯೆ ಹೇಳ ಲ್ಲಿ ಕ್ಕೆ ಸಾಧ್ಯ ವಿಲ್ಲ…ಎಂದು ತಮ್ಮ ಸಮಸ್ಯೆ ತೋಡಿಕೊಂಡರು.
ಶಿಬಿರದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಎರಡು ಗ್ರಾಮಗಳ ಗ್ರಾಮಸ್ಥರು 64, ಅರ್ಜಿಗಳನ್ನು ಅಧಿಕಾರಿಗಳಿಗೆ,ಜನಪ್ರತಿನಿಧಿಗಳಿಗೆ ನೀಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಕೊರೋನಾ ಕಾರಣದಿಂದ ಸಾರ್ವಜನಿಕರಿಗೆ ಅಪರೂಪವಾಗಿದ್ದ ಕಾರ್ಯ ಕ್ರಮಗಳು.ಇದೀಗ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದಂತೆ ಆರಂಭ ಗೊಂಡಿರುವುದು ಗ್ರಾಮಸ್ಥರ ಲ್ಲಿ ಹೊಸ ಹುರುಪು ಮೂಡಿಸಿತ್ತು.ಈ ಹಿನ್ನೆಲೆಯಲ್ಲಿ ಗ್ರಾಮ ವಾಸ್ತವ್ಯ ದ ಸಭಾವೇದಿಕೆಯ ಆವರಣವನ್ನು ಮಾವಿನ ಮರದ ಎಲೆಗಳ ತಳಿರು ತೋರಣಗಳಿಂದ ಶ್ರಂಗರಿಸಿದ್ದರು.ತಡರಾತ್ರಿ ವರೆಗೆ ಚೆನ್ನಕೇಶವ ಅವರ ಮನೆಯಂಗಳದಲ್ಲಿ ದೀವಟಿಗೆಯ ಬೆಳಕಿನಲ್ಲಿ ಚಾವಡಿ ಚರ್ಚೆ ಯಲ್ಲಿಯೂ ಗ್ರಾಮಸ್ಥರು ಮುತುವರ್ಜಿಯಿಂದ ಭಾಗವಹಿಸಿದ್ದರು.
ರಂಜಿಸಿದ ಗ್ರಾಮಸ್ಥರ ಸಾಂಸ್ಕೃತಿಕ ಕಾರ್ಯಕ್ರಮ:
ಕೊಂಬಾರು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ನಡೆದ ಪತ್ರಕರ್ತರ ಗ್ರಾ ವಾಸ್ತವ್ಯ ದಲ್ಲಿ ಕೊಂಬಾರು, ಸಿರಿಬಾಗಿಲು ಗ್ರಾಮದ ಗ್ರಾಮಸ್ಥರು ಹಾಡು, ನ್ರತ್ಯ,ಜಾನಪದ ಕುಣಿತಗಳ ಮೂಲಕ ನರೆದ ಎರಡು ಸಾವಿರಕ್ಕೂ ಅಧಿಕ ಜನಸ್ತೋಮ ವನ್ನು ರಂಜಿಸಿದರು.ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಬಂಟ್ವಾಳ ದ ಮೌನೇಶ್ ವಿಶ್ವ ಕರ್ಮ ಅವರ ನೇತ್ರತ್ವದ ಸಂಸಾರ ತಂಡ ಜಾಗ್ರತಿ ಹಾಡು, ನಾಟಕಗಳನ್ನು ಪ್ರದರ್ಶಿಸಿದರು.
ರಕ್ತದಾನ ಮತ್ತು ಆರೋಗ್ಯ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ :
ಮಂಗಳೂರಿನ ಎ.ಜೆ.ಆಸ್ಪತ್ರೆ ಯ ವೈದ್ಯರ ತಂಡ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಯ ಸಹಯೋಗ ದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 150 ಮಂದಿ ತಪಾಸಣೆ ನಡೆಸಲಾಗಿದೆ. ಇಂಡಿಯನ್ ರೆಡ್ ಕ್ರಾಸ್ ಸೊಸೈ ಟಿ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ 79ಮಂದಿ ರಕ್ತ ದಾನ ಮಾಡಿದ್ದಾರೆ.
ಕೊಂಬಾರು-ಸಿರಿಬಾಗಿಲು ಗ್ರಾಮ ದರ್ಶನ :
ಪತ್ರಕರ್ತರ ಗ್ರಾಮ ವಾಸ್ತವ್ಯ ದ ಭಾಗವಾಗಿ ಪತ್ರಕರ್ತರ ಗ್ರಾಮ ದರ್ಶನ ಕಾರ್ಯಕ್ರಮದ ಸಂದರ್ಭದಲ್ಲಿ ಕೊಂಬಾರು – ಸಿರಿಬಾಗಿಲು ಗ್ರಾಮಗಳ ನಿವಾಸಿಗಳಿರುವ ಪ್ರದೇಶಕ್ಕೆ ಭೇಟಿ ನೀಡಿದಾಗ ಗ್ರಾಮದ ಹಲವು ಸಮಸ್ಯೆ ಗಳ ವಾಸ್ತವ ಸಂಗತಿಗಳನ್ನು ನೋಡುವಂತಾಯಿತು.ಕೊಂಬಾರು-ಸಿರಿಬಾಗಿಲು ಸಂಪರ್ಕಿಸುವ ಕಟ್ಟತ್ತಾರು ಪ್ರದೇಶದಲ್ಲಿ ಕಾಡಿನ ಮುಗಿಲೆತ್ತರದ ಮರಗಳ ನಡುವೆ ಕಚ್ಚಾ ಮಣ್ಣಿನ ರಸ್ತೆಗಳಿವೆ.ಕೆಲವು ಭಾಗದಲ್ಲಿ ಡಾಮರು,ಕೆಲವು ಮೀಟರ್ ಕಾಂಕ್ರೀಟ್ ರಸ್ತೆ ಗಳಿದ್ದರೆ ಮಳೆಗಾಲದಲ್ಲಿ ರಸ್ತೆ ನಡುವೆ ಹೊಳೆಯ ನೀರು ಹರಿಯುವುದರಿಂದ ಇಲ್ಲಿನ ಪ್ರದೇಶಗಳು ದ್ವೀಪ ದಂತಾಗುತ್ತವೆ.
ಉಳಿದ ಸಂದರ್ಭದಲ್ಲಿ ಯೂ ನಟ್ ವರ್ಕ ಸಮಸ್ಯೆ ಯಿಂದ ಜನವಸತಿ ಪ್ರದೇಶ ಗಳನ್ನು ಸಂಪರ್ಕಿ ಸುವುದೇ ಒಂದು ಸಮಸ್ಯೆ. ನಮ್ಮ ಮೊಬೈಲ್ ಗಳು ನೆಟ್ ವರ್ಕ್ ಇಲ್ಲದೆ ಈ ಪ್ರದೇಶದಲ್ಲಿ ನಿರುಪಯುಕ್ತ ವಾಗಿರುವುದು ಗಮನಕ್ಕೆ ಬಂತು.ಇಲ್ಲಿ ಮೊಬೈಲ್ ಸಂಪರ್ಕಕ್ಕೆ ಸ್ವಲ್ಪ ಸಹಾಯವಾಗಿರುವುದು ಬಿಎಸ್ ಎನ್ ಎಲ್ .ಅದೂ ಎಲ್ಲಾ ಕಡೆ ಇಲ್ಲ.ಒಂದು ಕಡೆ ವಿದ್ಯಾರ್ಥಿ ಗಳು ಡೇರೆ ನಿರ್ಮಿಸಿದ್ದಾರೆ.
ಕೆಲವು ವಿದ್ಯಾರ್ಥಿ ಗಳು ಈ ನೆಟ್ ವರ್ಕ್ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಈ ಡೇರೆಗೆ ಬರುತ್ತಾರೆ. ಅದು ಸ್ವಲ್ಪ ಎತ್ತರ ಜಾಗ ಆಗಿರುವ ಕಾರಣ ಈ ಡೇರೆ ಗ್ರಾಮಸ್ಥರರೇ ನಿರ್ಮಿಸಿಕೊಂಡ ಮೊಬೈಲ್ ನೆಟ್ ವರ್ಕ್ ಕೇಂದ್ರ.
ಬಸ್ ಸಂಚಾರ ಇಲ್ಲದ ಕಡೆ ಗ್ರಾಮಸ್ಥರು ನಿರ್ಮಿಸಿದ ತಂಗುದಾಣ:
ಎಲ್ಲಾ ಗ್ರಾಮಗ ಳಂತೆ ಈ ಗ್ರಾಮಗಳಲ್ಲಿ ಎಲ್ಲಾ ಕಡೆ ಸರಕಾರಿ ಬಸ್ ಇಲ್ಲ.ಖಾಸಗಿ ಬಸ್ಸು ಇಲ್ಲ. ಆದರೆ ಕೊಂಬಾರು -ಸಿರಿಬಾಗಿಲು ನಡುವಿನ ಇಂತಹ ರಸ್ತೆ ಯೊಂದರಲ್ಲಿ ಪ್ರಯಾಣಿಕರ ತಂಗುದಾಣವನ್ನು ಗ್ರಾಮಸ್ಥರು ಬಿದಿರು ಮರಗಳನ್ನು ಸೇರಿಸಿ ನಿರ್ಮಿಸಿದ್ದಾರೆ.
ಕುತೂಹಲದಿಂದ ಈ ತಂಗುದಾಣ ಯಾರಿಗೆ ಎಂದು ಕೇಳಿದರೆ ಇಲ್ಲಿನ ಗ್ರಾಮಸ್ಥರು ಹೇಳುವಂತೆ ನಡೆದುಕೊಂಡು ಹೋಗುವ ಜನರ ವಿಶ್ರಾಂತಿ ಗೆ ಮತ್ತು ಇಲ್ಲಿ ಕೆಲವೊಮ್ಮೆ ಖಾಸಗಿಯವರ ಜೀಪುಗಳನ್ನು ಬಾಡಿಗೆಗೆ ಪಡೆದು ಸಂಚರಿಸಬೇಕಾದರೆ.ಅದಕ್ಕೊಂದು ತಂಗುದಾಣ ನಾವೆ ನಿರ್ಮಿಸಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ,ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಏನ್ ಕೆ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ಉಪಸ್ಥಿತರಿದ್ದರು. ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿದರು.