ಕರಾವಳಿ

ಕಾಲೇಜುಗಳಲ್ಲಿ ಪ್ರಾಮಾಣಿತ ಕಾರ್ಯಚರಣೆ ವಿಧಾನದ(ಎಸ್.ಓ.ಪಿ) ಪಾಲನೆ ಕಡ್ಡಾಯ: ಜಿಲ್ಲಾಧಿಕಾರಿ 

Pinterest LinkedIn Tumblr

ಮಂಗಳೂರು, 25 : ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ತರಗತಿಗಳನ್ನು ನಡೆಸುವಾಗ ಕೋವಿಡ್ -19ರ ಹಿನ್ನೆಲೆಯಲ್ಲಿ ಸರಕಾರವು ಪ್ರಕಟಿಸಿರುವ ಪ್ರಾಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್.ಓ.ಪಿ) ಕಡ್ಡಾಯವಾಗಿ ಅನುಸರಿಸಲು ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ. ಸೂಚಿಸಿದರು.

ಅವರು ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪ್ರಾಂಶುಪಾಲರು, ಸಹಾಯಕ ಆಯುಕ್ತರು, ತಹಶೀಲ್ದಾರರು ಹಾಗೂ ಆರೋಗ್ಯಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಯುಜಿಸಿ ಪ್ರಕಟಿಸಿರುವ ಮಾರ್ಗಸೂಚಿಗಳನ್ವಯ ಕರ್ನಾಟಕ ಸರಕಾರವು ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಎಸ್.ಓ.ಪಿ ಹೊರಡಿಸಿದೆ. ಅದರಂತೆ ನವೆಂಬರ್ 17ರಿಂದ ಅಂತಿಮ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಭೌತಿಕ ತರಗತಿಗಳನ್ನು ಪ್ರಾರಂಭಿಸಬಹುದು. ಆದರೆ ಯಾವುದೇ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗುವುದನ್ನು ಕಡ್ಡಾಯ ಮಾಡಬಾರದು. ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೂರು ದಿನಗಳ ಮುಂಚೆ ಕೋವಿಡ್-19ರ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಕೊಂಡು ನೆಗೆಟಿವ್ ವರದಿ ಇದ್ದರೆ ಮಾತ್ರ ತರಗತಿಗಳಿಗೆ ಪ್ರವೇಶ ನೀಡಲು ಸೂಚಿಸಿದರು.

ತರಗತಿಗಳಿಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗಳಿಂದ ಅವರ ಹೆತ್ತವರು ಅಥವಾ ಪೋಷಕರು ಸಹಿ ಮಾಡಿದ ನಿಗದಿತ ನಮೂನೆಯ ಒಪ್ಪಿಗೆ ಪತ್ರ ಪಡೆಯಲು ಸೂಚಿಸಿದೆ. ಮಾರ್ಗಸೂಚಿಗಳನ್ವಯ ಕಡ್ಡಾಯವಾಗಿ ದೈಹಿಕ ಅಂತರವನ್ನು ಕಾಪಾಡಬೇಕು ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವಂತೆ ಸೂಚಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು ತರಗತಿಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್ ಶಿಲ್ಡ್ ಧರಿಸುವುದರಿಂದ ರೋಗ ಪ್ರಸರಣವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಅಂತಿಮ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಆಫ್‍ಲೈನ್ ಹಾಗೂ ಆನ್‍ಲೈನ್ ತರಗತಿಗಳನ್ನು ನಡೆಸಿ ಇತರ ವಿದ್ಯಾರ್ಥಿಗಳಿಗೆ ಆನ್‍ಲೈನ್ ಹಾಗೂ ಅಗತ್ಯವಿದ್ದಲ್ಲಿ ಸಂಪರ್ಕ ತರಗತಿಗಳನ್ನು ನಡೆಸಲು ಸೂಚಿಸಿದರು. ಇಂತಹ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಬಗ್ಗೆ ಇರುವ ಅನುಮಾನ ಅಥವಾ ಸಮಸ್ಯೆಗಳನ್ನು ನಿವಾರಿಸಲು ಭೌತಿಕ ಸಂಪರ್ಕ ತರಗತಿಗಳನ್ನು ನಡೆಸಬಹುದು. ಆದರೆ ಇವರಿಗೆ ಕೂಡಾ ಕೋವಿಡ್-19 ತಪಾಸಣೆ ನೆಗೆಟಿವ ವರದಿ ಮತ್ತು ಪಾಲಕರ ಒಪ್ಪಿಗೆ ಪತ್ರ ಕಡ್ಡಾಯವೆಂದು ಹೇಳಿದರು.

ಕಾಲೇಜು ಕಟ್ಟಡದ ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನರ್ ಮತ್ತು ಸ್ಯಾನಿಟೈಸರ್ ಮಾಡಬೇಕು. ಪ್ರತಿ ವಿದ್ಯಾರ್ಥಿಗಳ ತಂಡ ಅಥವಾ ತರಗತಿಗಳಿಗೆ ಮೇಲ್ವಿಚಾರಕರಾಗಿ ಉಪನ್ಯಾಸಕರನ್ನು ನೇಮಿಸಲು ತಿಳಿಸಿದರು. ಮಾರ್ಗಸೂಚಿಯಂತೆ ಕಾಲೇಜು ಕ್ಯಾಂಟೀನ್ ಮತ್ತು ಗ್ರಂಥಾಲಯಗಳನ್ನು ತೆರೆಯಬಾರದು, ಯಾವುದೇ ರೀತಿಯ ಆಹಾರ ಪೂರೈಕೆಗೆ ಕಾಲೇಜಿನಲ್ಲಿ ಅವಕಾಶವಿಲ್ಲ, ಸಂದರ್ಶಕರಿಗೆ ಪ್ರವೇಶ ನೀಡಬಾರದು ಎಂದು ತಿಳಿಸಿದರು. ಭೌತಿಕ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳಿಗೆ ರೋಗ ಲಕ್ಷಣ ಕಂಡು ಬಂದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಜಿಲ್ಲೆಯ ಕಾಲೇಜುಗಳಲ್ಲಿ ಪ್ರಾಮಾಣಿಕ ಕಾರ್ಯಾಚರಣಾ ವಿಧಾನವನ್ನು ಯಾವುದೇ ಲೋಪದೋಷಗಳಿಗೆ ಆಸ್ಪದವಿಲ್ಲದಂತೆ ಕಟ್ಟುನಿಟ್ಟಾಗಿ ಅನುಸರಿಸುವದನ್ನು ಖಾತರಿ ಪಡಿಸಿಕೊಳ್ಳಲು ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ, ತಹಶೀಲ್ದಾರರು ಇದರ ಅಧ್ಯಕ್ಷರಾಗಿರುತ್ತಾರೆ. ಸಮಿತಿ, ತಾಲೂಕು ಆರೋಗ್ಯಾಧಿಕಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಕೋವಿಡ್-19 ನೋಡಲ್ ಅಧಿಕಾರಿ, ಮತ್ತು ತಾಲೂಕಿನ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರನ್ನು ಒಳಗೊಂಡಿದೆ ಎಂದು ತಿಳಿಸಿದರು. ಸಮಿತಿ ಪದವಿ ಕಾಲೇಜಿಗಳಿಗೆ ಭೇಟಿ ನೀಡಿ ಮಾರ್ಗಸೂಚಿಗಳ ಅನುಷ್ಠಾನವನ್ನು ಪರಿವೀಕ್ಷಿಸಿ ವರದಿ ನೀಡುವಂತೆ ಸೂಚಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಮಚಂದ್ರ ಬಾಯರಿ ಮಾಹಿತಿ ನೀಡಿ ಜಿಲ್ಲೆಯಲ್ಲಿ ಇದುವರೆಗೆ 19,402 ಮಂದಿ ಕಾಲೇಜು ಉಪನ್ಯಾಸಕರು, ಕಛೇರಿ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳ ಕೋವಿಡ್ -19 ಪರೀಕ್ಷೆ ನಡೆದಿದೆ ಅದರಲ್ಲಿ 45 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರು ಸಮೀಪದ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ವಿದ್ಯಾರ್ಥಿಗಳ ಕೋವಿಡ್ 19ರ ಪರೀಕ್ಷೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು.

Comments are closed.