ಕರಾವಳಿ

ಅಬ್ದುಲ್ಲ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಾಳೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ

Pinterest LinkedIn Tumblr

ಮಂಗಳೂರು : ಗುರುಪುರ ಕೈಕಂಬ ಪರಿಸರದಲ್ಲಿ ಇತ್ತೀಚೆಗೆ ಅಬ್ದುಲ್ಲ ಅಜೀಜ್ ಎಂಬವರ ಮೇಲೆ ತಲವಾರು ದಾಳಿ ನಡೆಸಿ ಪರಾರಿಯಾಗಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ನ.23ರಂದು ಬಜ್ಪೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಗುರುಪುರ ಕೈಕಂಬ ಮುಸ್ಲಿಂ ಒಕ್ಕೂಟ ತಿಳಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಮುಸ್ಲಿಂ ಜಮಾತ್‌ನ ಕೋ- ಆರ್ಡಿನೇಟರ್ ಅಶ್ರಫ್ ಕಿನಾರ ಅವರು, ವೆನ್ಜ್ ಅಬ್ದುಲ್ಲ ಗುರುಪುರ ಕೈಕಂಬ ಪರಿಸರದಲ್ಲಿ ಸಾಮಾಜಿಕ ಶೈಕ್ಷಣಿಕ ಬಡವರ ಕಲ್ಯಾಣ ಕಾರ್ಯಗಳಿಗಾಗಿ ನಿರಂತರವಾಗಿ ದುಡಿಯುತ್ತಿದ್ದರು. ವಿವಿಧ ಮುಸ್ಲಿಂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಅವರಿಗೆ ನ.15ರಂದು ರಾತ್ರಿ ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಲಾಗಿತ್ತು. ಆದರೆ ನೈಜ ಆರೋಪಿಗಳನ್ನು ಪೊಲೀಸರು ಇದುವರೆಗೆ ಬಂಧಿಸುವ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು.

ಕಳೆದ ಎರಡು ವರ್ಷಗಳಿಂದ ಕೈಕಂಬ ಪರಿಸರದಲ್ಲಿ ಕೆಲವು ಸಂಸ್ಥೆಗಳಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾರಣಕ್ಕಾಗಿ ಅಬ್ದುಲ್ಲ ಆವರ ಹತ್ಯೆಗೆ ಈ ಮುಂಚೆಯೂ ಪ್ರಯತ್ನ ನಡೆದಿತ್ತು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿತ್ತು. ಆದರೆ ಈ ಬಗ್ಗೆ ಇದುವರೆಗೆ ಪೊಲೀಸರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಅಶ್ರಫ್ ಕಿನಾರ ಆರೋಪಿಸಿದರು.

ಕಳೆದ ಒಂದು ವರ್ಷದ ಹಿಂದೆ ಮಸೀದಿಯೊಂದರಲ್ಲಿ ನಡೆದ ವಾದ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರ ಮೇಲೆ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಅಬ್ದುಲ್ಲ ಅವರು ಬೆಂಗಳೂರಿನಲ್ಲಿದ್ದರು. ಪ್ರಕರಣ ನಡೆದು ಒಂದು ವರ್ಷ ಕಳೆದ ನಂತರ ಕಳೆದ ತಿಂಗಳು ಅಬ್ದುಲ್ಲ ಅವರ ಹೆಸರನ್ನು ಪ್ರಕರಣದಲ್ಲಿ ಸೇರಿಸಲಾಗಿದೆ. ಇದರಿಂದಾಗಿ ಅಬ್ದುಲ್ಲ ಅವರ ವಿರುದ್ಧ ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿರುವುದು ಇದರಿಂದ ಸಾಬೀತಾಗಿದೆ ಎಂದು ಅವರು ತಿಳಿಸಿದರು.

ಸಮಾಜ ಘಾತುಕ ಶಕ್ತಿಗಳ ಹುಟ್ಟಡಗಿಸುವುದು ಪೊಲೀಸ್ ಇಲಾಖೆಯ ಕರ್ತವ್ಯ. ಈ ನಿಟ್ಟಿನಲ್ಲಿ ಅಬ್ದುಲ್ಲ ಅವರ ಹತ್ಯೆ ಯತ್ನದ ನೈಜ ಆರೋಪಿ ಗಳನ್ನು ಕೂಡಲೇ ಬಂಧಿಸಿ ಸೂಕ್ತ ನ್ಯಾಯ ಒದಗಿಸಬೇಕು ಎಂದು ಅಶ್ರಫ್ ಕಿನಾರ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವೆನ್ಜ್ ಅಬ್ದುಲ್ಲ ಅವರ ಸಹೋದರರಾದ ಬದ್ರುದ್ದೀನ್, ನಿಯಾಝ್, ಸಂಬಂಧಿ ಮುಕ್ದೋಮ್, ರಿಯಾಝ್ ಬಿಕರ್ನಕಟ್ಟೆ ಉಪಸ್ಥಿತರಿದ್ದರು.

Comments are closed.