ಕರಾವಳಿ

ಅತ್ಯುತ್ತಮ, ಪ್ರಾಮಾಣಿಕ ಹಿರಿಯ ಬಸ್ ಚಾಲಕರಿಗೆ ಗೌರವ ಬ್ಯಾಡ್ಜ್ ವಿತರಣೆ

Pinterest LinkedIn Tumblr

ಪ್ರಾಮಾಣಿಕ ಬಸ್ ಚಾಲಕರ ಸೇವೆಯನ್ನು ಗುರುತಿಸಿ ಗೌರವಿಸಿದರೆ ಇದು ಇನ್ನಷ್ಟು ಯುವ ಚಾಲಕರಿಗೆ ಉತ್ತಮ ಸೇವೆ ನೀಡಲು ಪ್ರೇರಣೆಯಾಗುತ್ತದೆ:ಪ್ರಿನ್ಸಿಪಾಲ್ ಫಾದರ್ ಪ್ರವೀಣ್ ಮಾರ್ಟಿಸ್

ಮಂಗಳೂರು: ಅತ್ಯುತ್ತಮ ಪ್ರಾಮಾಣಿಕ ಬಸ್ ಚಾಲಕರ ಸೇವೆಯನ್ನು ಗುರುತಿಸಿ ಗೌರವ ಸಲ್ಲಿಸುವುದು ಮಾದರಿ ಕೆಲಸವಾಗಿದ್ದು, ಇದು ಇನ್ನಷ್ಟು ಯುವ ಚಾಲಕರಿಗೆ ಉತ್ತಮ ಸೇವೆ ನೀಡಲು ಪ್ರೇರಣೆ ನೀಡಿದಂತೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಿನ್ಸಿಪಾಲ್ ಫಾದರ್ ಪ್ರವೀಣ್ ಮಾರ್ಟಿಸ್ ಹೇಳಿದರು.

ನಗರದ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದಕ ಜಿಲ್ಲಾ ಘಟಕ, ಸಂತ ಅಲೋಶಿಯಸ್ ಕಾಲೇಜು ಮತ್ತು ದಕ ಬಸ್ ಮಾಲೀಕರ ಸಂಘ ಹಾಗೂ ಕೆನರಾ ಬಸ್ ಮಾಲೀಕರ ಸಂಘದ ಸಹಯೋಗದಲ್ಲಿ ಖಾಸಗಿ ಬಸ್‍ನ ಅತ್ಯುತ್ತಮ ಹಿರಿಯ ಚಾಲಕರಿಗೆ ಗೌರವ ಬ್ಯಾಡ್ಜ್ ವಿತರಣೆ, ಅಪಘಾತ ಮತ್ತು ಕೊರೊನಾ ಜಾಗೃತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರಿನಲ್ಲಿ ಖಾಸಗಿ ಬಸ್ ಚಾಲಕರು ಬಹಳಷ್ಟು ಒತ್ತಡದ ನಡುವೆಯೂ ಉತ್ತಮ ಸೇವೆ ನೀಡುತ್ತಿದ್ದಾರೆ. ಅವರ ಸೇವೆಯಿಂದ ಮಾಲೀಕರಿಗೂ ಉತ್ತಮ ಹೆಸರು ಬಂದಿದೆ. ಮುಂದೆಯೂ ಚಾಲಕರು ಉತ್ತಮ ಸೇವೆ ನೀಡುವಂತಾಗಲಿ ಎಂದು ಅವರು ಹಾರೈಸಿದರು.

ಮಂಗಳೂರು ನಗರ ಪೊಲೀಸ್ ಟ್ರಾಫಿಕ್ ಉಪವಿಭಾಗದ ಎಸಿಪಿ ಎಂ.ಎ.ನಟರಾಜ್ ಮಾತನಾಡಿ, ಬೇರೆಲ್ಲಾ ಕ್ಷೇತ್ರದಲ್ಲಿ ಪ್ರತಿವರ್ಷ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ. ಖಾಸಗಿ ಬಸ್ ಚಾಲಕರ ಜೀವಮಾನದಲ್ಲೇ ಪ್ರಥಮ ಬಾರಿ ಗುರುತಿಸಿದ್ದು, ಅದರಲ್ಲೂ ಅಪಘಾತವನ್ನೇ ಮಾಡದ ಚಾಲಕರು ಇದ್ದಾರೆ ಎಂಬುದು ಹೆಮ್ಮೆಯ ವಿಚಾರ ಎಂದರು.

ಕೆಟ್ಟ ರಸ್ತೆಗಳು, ಇನ್ನೊಬ್ಬರ ತಪ್ಪಿನಿಂದಲೂ ಅಪಘಾತಗಳು ಸಂಭವಿಸುತ್ತವೆ. ದೇಶದಲ್ಲಿ ಪ್ರತಿವರ್ಷ 1.5 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದರೆ, ಮಂಗಳೂರಿನಲ್ಲೇ 100 ಮಂದಿ ಮೃತಪಟ್ಟು, 800-1000 ಮಂದಿ ಗಾಯಗೊಳ್ಳುತ್ತಾರೆ. ಇದರಿಂದ ಅಷ್ಟು ಕುಟುಂಬಗಳು ನಲುಗಿ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಸುಪ್ರೀಂ ಕೋರ್ಟ್ ಮಾರ್ಗಸೂಚಿ ನೀಡಿದ್ದು, ಈಗ ಅಪಘಾತ ನಡೆದ ಸ್ಥಳಕ್ಕೆ ಹಿರಿಯ ಅಕಾರಿಗಳು ಭೇಟಿ ನೀಡಿ, ರಸ್ತೆ ದುರಸ್ತಿ, ಸಂಚಾರ ಬದಲಾವಣೆಗೆ ನಿರ್ದೇಶನ ನೀಡುತ್ತಾರೆ. ಕಳೆದ ತಿಂಗಳು ತೊಕ್ಕೊಟ್ಟಿನಲ್ಲಿ ನವ ದಂಪತಿ ಮೃತಪಟ್ಟಿದ್ದ ಮರುದಿನ ಪೊಲೀಸ್ ಕಮೀಷನರ್ ತೆರಳಿ, ಸಂಚಾರ ಮಾರ್ಪಾಟು ಮಾಡಿದ್ದಾರೆ ಎಂದರು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದಕ ಜಿಲ್ಲಾ ಘಟಕದ ಚೇರ್ಮನ್ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ, ಬಸ್ ಚಾಲಕರು ಮುಂಜಾನೆ ಮನೆಯಿಂದ ಹೊರಟ ನಂತರ ಎಲ್ಲವನ್ನೂ ಮರೆತು, ಕೇವಲ ಡ್ರೈವಿಂಗ್‍ನಲ್ಲಿ ಮಗ್ನರಾಗಿರುತ್ತಾರೆ. ನಮ್ಮಲ್ಲಿ ಸಾಕಷ್ಟು ಮಂದಿ ಅತ್ಯುತ್ತಮ ಚಾಲಕರಿದ್ದಾರೆ. ನಾವು ಕೆಲವರನ್ನು ಮಾತ್ರ ಗುರುತಿಸಿದ್ದೇವೆ. ಇದು ಇನ್ನಷ್ಟು ಮಂದಿಗೆ ಉತ್ತಮ ಸೇವೆ ನೀಡಲು ಹುರುಪು ನೀಡಲಿದೆ ಎಂದರು.

ಅಪಘಾತಗಳ ಸಂತ್ರಸ್ತರು, ಅವರ ಕುಟುಂಬದ ನೋವು ಹೇಳಲು ಸಾಧ್ಯವಿಲ್ಲ. ಅಂಥವರನ್ನು ಸ್ಮರಿಸಿ, ಈ ಕಾರ್ಯಕ್ರಮ ನಡೆಸುತ್ತಿದ್ದೇವೆ. ಅಪಘಾತಕ್ಕೆ ಕೇವಲ ಚಾಲಕ ಕಾರಣವಲ್ಲ. ಅವರ ಒತ್ತಡ, ಜನರ ಧಾವಂತ, ಕೆಟ್ಟ ರಸ್ತೆಗಳು ಕಾರಣವಾಗುತ್ತವೆ. ಆದ್ದರಿಂದ ಸಂಚಾರ ಪೊಲೀಸ್, ಆರ್‍ಟಿಒ, ಸ್ಥಳೀಯ ಆಡಳಿತ, ರಸ್ತೆ ನಿರ್ವಹಣೆ ಮಾಡುವ ಇಲಾಖೆಗಳು ಸೇರಿ ಯೋಜನೆ ರೂಪಿಸಬೇಕು. ಚಾಲಕರಿಗೆ ಅಗತ್ಯ ಬಿದ್ದಾಗ ವೈದ್ಯಕೀಯ ಸೇವೆ, ರಕ್ತ ಪೂರೈಕೆ ಇತ್ಯಾದಿ ನೆರವು ನೀಡಲು ರೆಡ್ ಕ್ರಾಸ್ ಸಂಸ್ಥೆ ಸದಾ ಸಿದ್ಧವಿದೆ ಎಂದು ಅವರು ಹೇಳಿದರು.

ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ.ರಾಜವರ್ಮ ಬಲ್ಲಾಳ್ ಮಾತನಾಡಿ, ದೇಶದಲ್ಲೇ ದಕ, ಉಡುಪಿಯ ಖಾಸಗಿ ಬಸ್ ಸೇವೆ ಮುಂಚೂಣಿಯಲ್ಲಿದೆ. ಇದನ್ನು ಗುರುತಿಸಿ, ವಿಶಾಖಪಟ್ಟಣದ ಹಿರಿಯ ಅಕಾರಿ ಆಗಮಿಸಿ, ಅಧ್ಯಯನ ಮಾಡಿ, ಕೃತಜ್ಞತೆ ಸಲ್ಲಿಸಿ ಹೋಗಿದ್ದಾರೆ. ಅಪಘಾತ ನಿಯಂತ್ರಣ ಕಾರ್ಯಕ್ರಮ ವೇದಿಕೆಗಳಿಗೆ ಸೀಮಿತವಾಗಬಾರದು. ಚಾಲಕರ ಸಮಯ ಹೊಂದಾಣಿಕೆಯ ಒತ್ತಡದಿಂದ ಕೆಲವೊಮ್ಮೆ ಅಪಘಾತ ನಡೆಯುತ್ತವೆ ಎಂದರು.

ದ್ವಿಚಕ್ರ ವಾಹನ ಸವಾರರಿಗೆ ತರಬೇತಿ ಇಲ್ಲದೆ ಲೈಸೆನ್ಸ್ ಕೊಡುತ್ತಿರುವುದು ಕೂಡಾ ಅಪಘಾತಕ್ಕೆ ಕಾರಣವಾಗುತ್ತಿದೆ. ಇಲಾಖೆ ಲೈಸೆನ್ಸ್ ಕೊಡುವುದಕ್ಕಿಂತ ಮಾರಾಟ ಮಾಡುತ್ತಿದೆ ಎನ್ನಬಹುದು. ಈ ಬಗ್ಗೆ ಮೇಲಕಾರಿಗಳ ಗಮನ ಸೆಳೆಯಬೇಕು. ಹೆತ್ತವರು ಕೂಡಾ ತಮ್ಮ ಮಕ್ಕಳಿಗೆ ಹಣ ಕೊಟ್ಟು ಲೈಸೆನ್ಸ್ ಖರೀದಿ ಮಾಡಿ ಕೊಡುವ ಬದಲು, ಸರಿಯಾದ ತರಬೇತಿ ಕೊಡಬೇಕು. ಮುಂದಿನ ದಿನಗಳಲ್ಲಿ ಬಸ್ ನಿರ್ವಾಹಕರನ್ನೂ ಸನ್ಮಾನಿಸಬೇಕು ಎಂದು ಬಲ್ಲಾಳ್ ಹೇಳಿದರು.

ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‍ರಾಜ್ ಆಳ್ವ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ವಿಜಯ ಕೋಟ್ಯಾನ್ ಬಸ್ ಚಾಲಕರ ಪಟ್ಟಿ ವಾಚಿಸಿದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಪ್ರಚಾರ ಮತ್ತು ಸಾರ್ವಜನಿಕ ಸಂಪರ್ಕ ಸಮಿತಿ ಅಧ್ಯಕ್ಷ ಬಿ.ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಎಸ್.ಎ.ಪ್ರಭಾಕರ ಶರ್ಮಾ ವಂದಿಸಿದರು.

Comments are closed.