ಕರಾವಳಿ

ಫೊಟೋಗ್ರಾಫರ್ ಕೊಲೆ ಯತ್ನ ಪ್ರಕರಣ : ಮೂವರ ಬಂಧನ

Pinterest LinkedIn Tumblr

ಮಂಗಳೂರು/ ಬಂಟ್ವಾಳ, ಅಕ್ಟೋಬರ್,29: ಫರಂಗಿಪೇಟೆಯಲ್ಲಿ ನಿನ್ನೆ ಫೊಟೋಗ್ರಾಫರ್ ಮೇಲೆ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಮ್ಮೆಮ್ಮಾರು ನಿವಾಸಿ ಮಹಮ್ಮದ್ ಅರ್ಷದ್(19), ಮಹಮ್ಮದ್ ಸೈಪುದ್ದೀನ್ (22). ಅಬ್ದುಲ್ ರೆಹಮಾನ್(22) ಹೆಸರಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಇನ್ನೋರ್ವ ಆರೋಪಿ ಸವಾದ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪುದು ಗ್ರಾಮದ ಫರಂಗಿಪೇಟೆಯ ಪೂಂಜಾ ಕಾಂಪ್ಲೆಕ್ಸ್ ನಲ್ಲಿ ತೃಷಾ ಸ್ಟುಡಿಯೋ ಹೊಂದಿದ್ದ ಸ್ಟುಡಿಯೋ ಮಾಲಕ ದಿನೇಶ್ ಶೆಟ್ಟಿಯವರು ಬಿಜೆಪಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.

ಬುಧವಾರ ರಾತ್ರಿ ಸುಮಾರು 7:15ರ ವೇಳೆಗೆ ತೃಷಾ ಸ್ಟುಡಿಯೋಗೆ 4 ಮಂದಿ ಯುವಕರ ತಂಡ ಫೋಟೋ ತೆಗೆಸುವ ನೆಪದಲ್ಲಿ ಬಂದು ದಿನೇಶ್ ಅವರ ತಲೆಗೆ, ಬಲ ಕೈಗೆ ಹಾಗೂ ಎಡ ಕಿಬ್ಬೊಟ್ಟೆಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡ ದಿನೇಶ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚೆಗೆ ಫರಂಗಿಪೇಟೆ ಸಮೀಪದ ಕುಂಪಣಮಜಲು ಎಂಬಲ್ಲಿ ಯುವತಿಯೊಬ್ಬಳ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಿನೇಶ್ ಅವರು ಯುವತಿಯ ಕಡೆಯವರಿಗೆ ಬೆಂಬಲ ನೀಡಿದ್ದ ದ್ವೇಷದಿಂದ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಲಕ್ಷ್ಮೀ ಪ್ರಸಾದ್ ಹಾಗೂ ಬಂಟ್ವಾಳ ಡಿವೈಸ್ಪಿ ವೆಲೆಂಟೈನ್ ಡಿ’ಸೋಜರವರ ಮಾರ್ಗದರ್ಶನ ದಲ್ಲಿ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್, ಗ್ರಾಮಾಂತರ ಪಿ.ಎಸ್.ಐ ಪ್ರಸನ್ನ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.

Comments are closed.