ಕರಾವಳಿ

ಗಾಂಜಾ ಸಾಗಾಟ, ಮಾರುವ 72 ಮಂದಿ ಆರೋಪಿಗಳ ಪರೇಡ್ ನಡೆಸಿದ ಉಡುಪಿ ಪೊಲೀಸರು

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾದ್ಯಂತ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ಪರೇಡನ್ನು ಬುಧವಾರ ಉಡುಪಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ನೇತೃತ್ವದಲ್ಲಿ ಜಿಲ್ಲೆಯ ಚಂದು ಮೈದಾನದಲ್ಲಿ ನಡೆಸಲಾಯಿತು.

ಪರೇಡ್‌ನಲ್ಲಿ ಬೈಂದೂರು ಠಾಣಾ ವ್ಯಾಪ್ತಿಯಿಂದ ಇಬ್ಬರು, ಕುಂದಾಪುರ ಠಾಣಾ ವ್ಯಾಪ್ತಿಯಿಂದ 18 ಮಂದಿ, ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ 4 ಮಂದಿ, ಕೋಟ ಠಾಣಾ ವ್ಯಾಪ್ತಿಯಿಂದ ಇಬ್ಬರು, ಉಡುಪಿ ನಗರ ಠಾಣಾ ವ್ಯಾಪ್ತಿಯಿಂದ 12 ಮಂದಿ, ಮಲ್ಪೆ ಠಾಣಾ ವ್ಯಾಪ್ತಿಯಿಂದ ಐವರು, ಮಣಿಪಾಲ ಠಾಣಾ ವ್ಯಾಪ್ತಿಯಿಂದ 16 ಮಂದಿ, ಸೆನ್ ಠಾಣಾ ವ್ಯಾಪ್ತಿಯಿಂದ ಇಬ್ಬರು, ಕಾರ್ಕಳ ನಗರ ಠಾಣಾ ವ್ಯಾಪ್ತಿಯಿಂದ ಇಬ್ಬರು, ಪಡುಬಿದ್ರಿ ಠಾಣಾ ವ್ಯಾಪ್ತಿಯಿಂದ 5 ಮಂದಿ, ಕಾಪು ಠಾಣಾ ವ್ಯಾಪ್ತಿಯಿಂದ 3 ಮಂದಿ ಹಾಗೂ ಹಿರಿಯಡ್ಕ ಠಾಣಾ ವ್ಯಾಪ್ತಿಯಿಂದ ಓರ್ವ ಒಟ್ಟು 72 ಜನ ಆರೋಪಿಗಳು ಹಾಜರಿದ್ದರು.

ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ಸಮಾಜದ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ಇನ್ನು ಮುಂದಕ್ಕೆ ಇಂತಹ ಸಮಾಜದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸದೆ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಕರೆ ನೀಡಿದರು. ಅಲ್ಲದೇ ಇದೇ ವೇಳೆ ಇನ್ನು ಮುಂದಕ್ಕೆ ಇಂತಹ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋದಲ್ಲಿ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದರು ಹಾಗೂ ಮಾದಕ ದ್ರವ್ಯ ಸಾಗಾಟ, ಮಾರಾಟಗಾರರ ಮಾಹಿತಿಯನ್ನು ನೀಡಿದಲ್ಲಿ ಮಾಹಿತಿ ನೀಡಿದವರ ವಿವರವನ್ನು ಗುಪ್ತವಾಗಿ ಇಡುವ ಭರವಸೆಯಿತ್ತರು.

ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಡುಪಿ ಡಿವೈ‌ಎಸ್ಪಿ ಟಿ.ಆರ್. ಜೈಶಂಕರ್, ಸಶಸ್ತ್ರ ಮೀಸಲು ಪಡೆಯ ಡಿ.ವೈ.ಎಸ್.ಪಿ. ರಾಘವೇಂದ್ರ, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಹಾಗೂ ಜಿಲ್ಲೆಯ ಇತರ ಠಾಣೆಗಳ ಪೊಲೀಸ್ ಉಪನಿರೀಕ್ಷಕರು ಈ ಪರೇಡ್ನಲ್ಲಿ ಉಪಸ್ಥಿತರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.