ಕರಾವಳಿ

ಪಣಂಬೂರ್ ಬೀಚ್‌ನಲ್ಲಿ ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆ : ಜೀವ ಹಾನಿ ತಪ್ಪಿಸಲು ಸಮಿತಿ ರಚನೆ

Pinterest LinkedIn Tumblr

(ಕಡತ ಚಿತ್ರ)

ಮಂಗಳೂರು ಅಕ್ಟೋಬರ್ 24 : ಪಣಂಬೂರು ಕಡಲ ತೀರ ನಿರ್ವಹಣೆಯ ಕಾರ್ಯನಿರ್ವಾಹಕ ಸಮಿತಿ ರಚನೆ ಮಾಡುವ ಕುರಿತು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಅಧಿಕಾರಿ ಮತ್ತು ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ಪಣಂಬೂರು ಕಡಲ ತೀರದ ನಿರ್ವಹಣೆಗಾಗಿ ಸಮಿತಿಯನ್ನು ರಚಿಸುವ ಬಗ್ಗೆ ಈ ಕೆಳಗಿನಂತೆ ಆದೇಶವನ್ನು ನೀಡಲಾಗಿದೆ.

ಪಣಂಬೂರು ಕಡಲತೀರಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದರಿಂದ ಪಣಂಬೂರು ಕಡಲ ತೀರದಲ್ಲಿ ಯಾವುದೇ ಜೀವ ಹಾನಿಯಾಗದಂತೆ ನೋಡಿಕೊಳ್ಳಲು ಹಾಗೂ ಪ್ರವಾಸಿ ಚಟುವಟಿಕೆ ಗಳನ್ನು ಮುಂದುವರೆಸಿಕೊಂಡು ಹೋಗಲು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧೀನದಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಜಂಟೀ ಆಯುಕ್ತರ ಅಧ್ಯಕ್ಷತೆಯಲ್ಲಿ ಪಣಂಬೂರು ಕಡಲ ತೀರ ನಿರ್ವಹಣೆಯ ಕಾರ್ಯನಿರ್ವಾಹಕ ಸಮಿತಿ ರಚನೆ ಮಾಡಲು ಆದೇಶ ಹೊರಡಿಸಲಾಗಿದೆ.

ಪಣಂಬೂರು ಕಡಲತೀರ ನಿರ್ವಹಣೆಯ ಕಾರ್ಯನಿರ್ವಾಹಕ ಸಮಿತಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಜಂಟೀ ಆಯುಕ್ತರು ಅಧ್ಯಕ್ಷರಾಗಿದ್ದು, ಪರಿಸರ, ಜೀವಿಶಾಸ್ತ್ರ ಹಾಗೂ ಅರಣ್ಯ ಇಲಾಖೆಯ ಪ್ರಾದೇಶಿಕ ನಿರ್ದೇಶಕರು, ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕರು, ಕರಾವಳಿ ಕಾವಲು ಪೊಲೀಸ್ ಉಪಾಧೀಕ್ಷಕರು, ಮಂಗಳೂರು ತಾಲೂಕಿನ ತಹಶೀಲ್ದಾರ ಹಾಗೂ ತಾಲೂಕಾ ದಂಡಾಧಿಕಾರಿ, ನವ ಮಂಗಳೂರು ಬಂದರು ಮಂಡಳಿಯ ಉಪ ಸಂರಕ್ಷಣಾಧಿಕಾರಿ, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರು, ಬೈಕಂಪಾಡಿ ಜಿಲ್ಲಾ ಪರಿಸರ ಮತ್ತು ಮಾಲಿನ್ಯ ನಿಯಂತ್ರಣಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆಯ ಪರಿಸರ ಅಭಿಯಂತರರು, ಮ.ಮ.ನ.ಪಾ ವಾರ್ಡ್ ನಂಬರ್ 11 ಕಾರ್ಪೋರೇಟರ್ ಸುನೀತಾ, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯರಾಗಿರುತ್ತಾರೆ.

ಪಣಂಬೂರು ಕಡಲ ತೀರ ನಿರ್ವಹಣೆಯ ಕಾರ್ಯನಿರ್ವಾಹಕ ಸಮಿತಿಯು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧೀನದಲ್ಲಿ ನಡೆಯುವ ಕಾರ್ಯಗಳು ಇಂತಿವೆ:

ಪಣಂಬೂರು ಕಡಲತೀರವನ್ನು ಯಥಾಸ್ಥಿತಿಯಲ್ಲಿ ಜಾಹೀರಾತುದಾರರು ಮೇ|| ಜ್ಯೋತಿ ಇವರಿಂದ ವಿವರಗಳೊಂದಿಗೆ ಹಸ್ತಾಂತರಕ್ಕೆ ಪಡೆದುಕೊಳ್ಳುವುದು. ಕಡಲ ತೀರಕ್ಕೆ ಅಗತ್ಯ ಇರುವಷ್ಟು ಸಂಖ್ಯೆಯ ಲೈಫ್ ಗಾರ್ಡ್‍ಗಳನ್ನು ಸುರಕ್ಷತೆಗಾಗಿ ತಾತ್ಕಾಲಿಕವಾಗಿ ನೇಮಿಸಿಕೊಳ್ಳುವುದು ಮತ್ತು ಜೀವ ಹಾನಿಯಾಗದಂತೆ ನೋಡಿಕೊಳ್ಳುವುದು. ಅಗತ್ಯ ಇದ್ದಲ್ಲಿ ಶನಿವಾರ ಮತ್ತು ಭಾನುವಾರಗಳಂದು ಹೆಚ್ಚಿನ ಜೀವರಕ್ಷಕ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬಹುದು.

ಲೈಪ್‍ಗಾರ್ಡ್ ಸಿಬ್ಬಂದಿಗಳ ಗೌರವ ಸಂಭಾವನೆಯನ್ನು ಕಡಲ ತೀರದ ವಾಹನ ಪಾರ್ಕಿಂಗ್ ಸೌಲಭ್ಯ ಹಾಗೂ ಅಂಗಡಿ ಮಳಿಗೆಗಳ ಬಾಡಿಗೆ ಹಣದಿಂದ ಭರಿಸುವುದು. ಈ ಹಿಂದೆ ಬೀಚ್ ನಿರ್ವಹಣಾ ಸಂಸ್ಥೆಯು ನಿಗದಿಪಡಿಸಿದ ವಾಹನ ಪಾರ್ಕಿಂಗ್ ಶುಲ್ಕ ಹಾಗೂ ಅಂಗಡಿ ಮಳಿಗೆಗಳ ಬಾಡಿಗೆ ಮೊತ್ತದ ದರಗಳನ್ನೇ ಮುಂದಿನ ಆದೇಶ ಹೊರಡಿಸುವವರೆಗೆ ಮಾತ್ರ ನಿಗದಿಪಡಿಸಬೇಕಾಗಿರುತ್ತದೆ. ಕಡಲ ತೀರದಲ್ಲಿ ಪ್ರವಾಸಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಲಾಗುವುದು.

ಅಗತ್ಯವಿರುವ ಭದ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ದಿನನಿತ್ಯ ಪೋಲೀಸ್ ಇಲಾಖೆಯಿಂದ ಕೈಗೊಳ್ಳಬೇಕು. ಸಮಿತಿಯು ಇನ್ನಿತರ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವಾಗ ಸೂಕ್ತ ನಿರ್ಣಯಕೈಗೊಂಡು ನಡೆಸಬೇಕು. ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತರು ಈ ಕಡಲ ತೀರ ನಿರ್ವಹಣೆ ಸಮಿತಿಗೆ ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿದೆ.

Comments are closed.