ಕರಾವಳಿ

ಕೇರಳ ಸರ್ಕಾರವನ್ನು ತಲ್ಲಣಗೊಳಿಸಿದ ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿ ಕೃಷ್ಣೈಕ್ಯ

Pinterest LinkedIn Tumblr

ಮಂಗಳೂರು,ಸೆಪ್ಟಂಬರ್.06 : ಕಾಸರಗೋಡು ಜಿಲ್ಲೆಯ ಎಡನೀರು ಸಮೀಪದ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ (79) ಯವರು ಶನಿವಾರ ರಾತ್ರಿ ಕೃಷ್ಣೈಕ್ಯರಾದರು.

ನಾಲ್ಕು ದಿನಗಳ ಹಿಂದೆ ಸೆ.2ರಂದು ಚಾತುರ್ಮಾಸ್ಯವನ್ನು ಪೂರೈಸಿದ್ದ ಶ್ರೀಗಳು ಕಳೆದ ಕೆಲವು ದಿನಗಳಿಂದ ಅಲ್ಪ ಅಸೌಖ್ಯವು ಅವರನ್ನು ಬಾಧಿಸಿತ್ತು. ಶನಿವಾರ ರಾತ್ರಿ ಪೂಜೆ ಮುಗಿಸಿ ಫಲಾಹಾರ ಸ್ವೀಕರಿಸಿದ್ದ ಶ್ರೀಗಳು ಸರಿ ಸುಮಾರು 12.45 ರ ವೇಳೆ ಗೆ ಅಸ್ತಂಗತರಾಗಿದ್ದಾರೆ.

ಕೇರಳದ ಏಕೈಕ ಶ್ರೀಶಂಕರ ಪೀಠಾಧಿಪತಿಯಾಗಿದ್ದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಅವರು ತೋಟಕಾಚಾರ್ಯ ಪರಂಪರೆಯ ಯತಿ ಶ್ರೇಷ್ಠರಾಗಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳ ಪುನರುತ್ಥಾನದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.

ಯಕ್ಷಗಾನ, ಸಂಗೀತ ಕಲೆಗಳಲ್ಲಿ ಆಸಕ್ತಿ ಹೊಂದಿದ್ದ ಶ್ರೀಗಳು ಸ್ವತಃ ಭಾಗವತರಾಗಿದ್ದರು. ತಮ್ಮ 19ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದ ಅವರು ತಮ್ಮ ಪೂರ್ವಾಶ್ರಮದ ತಮಧೆಯ ಸಹೋದರ ಶ್ರೀಈಶ್ವರಾನಂದ ಭಾರತೀ ಶ್ರೀಗಳಿಂದ ಸನ್ಯಾಸತ್ವ ಸ್ವೀಕರಿಸಿದ್ದರು.

ಧಾರ್ಮಿಕವಾಗಿ ಸಾಂಸ್ಕೃತಿಕವಾಗಿಯೂ ಸಕ್ರಿಯರಾಗಿದ್ದ ಶ್ರೀಗಳು ಗಡಿನಾಡಿನ ಸಂಸ್ಥಾನದಲ್ಲಿ ಯಕ್ಷಗಾನ, ಸಂಗೀತದ ಕೇಂದ್ರವನ್ನಾಗಿಸಿದ್ದರು. ಯಕ್ಷಗಾನ ಕಲೆಯ ಮೇಲೆ ಅತೀವ ಪ್ರೇಮ ಹೊಂದಿದ್ದ ಸ್ವಾಮೀಜಿ ಮೇಳವನ್ನು ಮುನ್ನಡೆಸುತ್ತಾ ಸ್ವತಃ ಭಾಗವತಿಕೆಯನ್ನೂ ನಡೆಸುತ್ತಿದ್ದರು.

ಮಠದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಶ್ರೀಗಳು ಹರಿಕಥೆಯನ್ನೂ ಮಾಡುತ್ತಿದ್ದರು. ಕರಾವಳಿಯ ಪ್ರಸಿದ್ದ ಯಕ್ಷಗಾನದ ಮೇಲೆ ವಿಶೇಷ ಒಲವಿದ್ದ ಶ್ರೀಗಳು, ಪ್ರತೀ ವರ್ಷ ಯಕ್ಷಗಾನ ಸಪ್ತಾಹ, ತಾಳಮದ್ದಳೆ ಕೂಟಗಳನ್ನು ನಡೆಸುತ್ತಿದ್ದರು. ಅಲ್ಲದೆ ಅನೇಕ ಕಡೆ ತಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ್ದರು.

ವಿಶೇಷವೆಂಬಂತೆ ಸಂವಿಧಾನದ ಮೂಲ ಆಶಯಗಳಿಗೆ ಸಂಬಂಧಿಸಿದ ಮಹತ್ತರ ಸಂವಿಧಾನ ನೂತನ ತಿದ್ದುಪಡಿಗೆ ಕಾರಣವಾದ1970ರ ಮಾ.21ರ ಶ್ರೀಕೇಶವಾಶನಂದ ಭಾರತಿ ಆಯಕ್ಟ್ ಜಾರಿಗೆ ಬರುವಲ್ಲಿ ದೇಶದಲ್ಲೇ ಗಮನಸೆಳೆದವರು. ಭಾರತದ ಇತಿಹಾಸದಲ್ಲಿ ಶ್ರೀಕೇಶವಾನಂದ ಭಾರತೀ ವರ್ಸಸ್ ಕೇರಳ ಸರ್ಕಾರ ದಾವೆ ಸಂವಿಧಾನ ತಿದ್ದುಪಡಿ ಮೇಲಿನ ಇತಿಮಿತಿಗಳ ನಿಯಂತ್ರಣದ ಬಗ್ಗೆ ಉಲ್ಲೇಖಿಸಿರುವುದಾಗಿದೆ.

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇಶವಾನಂದ ಸ್ವಾಮೀಜಿಯವರ ಹೆಸರು ಚಿರಸ್ಥಾಯಿಯಾಗಿದೆ. ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ ಪ್ರಕರಣ ಭಾರಿ ಪ್ರಸಿದ್ಧಿ ಪಡೆದಿತ್ತು. ದೇಶದಲ್ಲಿ ಸಂಚಲನ ಉಂಟು ಮಾಡಿದ್ದ ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅತೀ ಅಪರೂಪ ಎಂಬಂತೆ 12 ಮಂದಿ ನ್ಯಾಯಾಧೀಶರ ಪೀಠ ರಚಿಸಿ ಕೈಗೊಂಡಿತ್ತು.

ಭೂ ಮಸೂದೆ ಕಾಯಿದೆ ಜಾರಿಗೆ ಬಂದ ವೇಳೆ ಅಂದಿನ ಕೇರಳ ಸರಕಾರ ಮಠದ ಭೂಮಿ ವಶಪಡಿಸಲು ಯತ್ನಿಸಿತ್ತು. ಆದರೆ ಎಡನೀರು ಶ್ರೀಗಳು ಸುಪ್ರೀಂ ಕೋರ್ಟ್‌ನಲ್ಲಿ ಮಠದ ಮೂಲ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದಾವೆ ಹೂಡಿದಾಗ, ಆಗಿನ 12 ಮಂದಿ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನಿಕ ಪೀಠ ಅವರ ವಾದ ಎತ್ತಿ ಹಿಡಿದು ಆದೇಶ ನೀಡಿತ್ತು. ಇದು ಕೇಶವನಾಂದ ಭಾರತಿಶ್ರೀ ಹಾಗೂ ಕೇರಳ ಸರಕಾರ ಆಯಕ್ಟ್ ಎಂದು ಖ್ಯಾತವಾಗಿದೆ.

ಮಠಾಧೀಶರಾಗುವ ಮೊದಲು ಸ್ವಾಮಿ ತಮ್ಮ ಶಾಲಾ ದಿನಗಳಲ್ಲಿ ಯಕ್ಷಗಾನವನ್ನು ಕಲಿತಿದ್ದವರು. ಶ್ರೀಗಳು ಮಠಾಧೀಶರಾದ ಬಳಿಕ ಯಕ್ಷಗಾನ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಸ್ವತಃ ಭಾಗವತರಾಗಿ ಅನೇಕಾನೇಕ ಪ್ರಸಂಗಗಳನ್ನು ಸ್ವತಃ ನಿರ್ದೇಶಿಸುತ್ತಿದ್ದರು.

ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಕಲಿತ ಸ್ವಾಮಿ ಸಂಗೀತ ಕಚೇರಿಗಳನ್ನು ನಡೆಸುತ್ತಿದ್ದರು. ಕನ್ನಡ, ತುಳು, ಮಲಯಾಳ, ಹಿಂದಿ, ಮರಾಠಿ ಮತ್ತು ಸಂಸ್ಕೃತದಲ್ಲಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಎಲ್ಲಾ ಭಕ್ತಿಗೀತೆಗಳನ್ನು ಅವರೇ ಸ್ವತಃ ಬರೆದು ಸಂಯೋಜಿಸಿರುವುದು ವಿಶೇಷತೆಯಾಗಿದೆ. ಮಲಯಾಳಂ ಮತ್ತು ಕನ್ನಡದಲ್ಲಿ ಭಕ್ತಿಗೀತೆಗಳ ಸಿಡಿ.ಗಳನ್ನೂ ಸ್ವಾಮೀಜು ಬಿಡುಗಡೆ ಮಾಡಿದ್ದಾರೆ. ಅವರು ಸ್ವತಃ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ.

Comments are closed.