ಉಡುಪಿ: ಕಳೆದ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾಗಿದ್ದ ಬಿ.ಜಿ. ಮೋಹನ್ ದಾಸ್ (70) ಸೋಮವಾರ ಇಹಲೋಕ ತ್ಯಜಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಖಾಸಗಿ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದು ಪತ್ನಿ ಯಶೋದಾ, ಪುತ್ರ ಅಖಿಲ್ ಹಾಗೂ ಪುತ್ರಿ ಯಶಸ್ವಿ ಹಾಗೂ ಅಪಾರ ಬಂಧು-ಬಾಂದವರನ್ನು ಅಗಲಿದ್ದಾರೆ.

ಬಿ.ಜಿ. ಮೋಹನ್ ದಾಸ್ ಬಿಜೂರು ಗೋವಿಂದಪ್ಪ ಮೋಹನ್ ದಾಸ್ ರವರು ತಮ್ಮ ಗೆಳೆಯರಿಗೆಲ್ಲಾ “ಬೀಜಿ”ಎಂದೇ ಪರಿಚಿತರಾಗಿದ್ದರು. ಎಂಭತ್ತರ ದಶಕದಲ್ಲಿ ಕೊಲ್ಲಿ ರಾಷ್ಟ್ರಕ್ಕೆ ವಲಸೆ ಹೋದ ಮಣಿಪಾಲದ ಬೀಜಿಯವರು ಫಾರ್ಮಸಿಯ ವಿವಿಧ ಸಂಸ್ಥೆಗಳಲ್ಲಿ ಕಳೆದ ಮೂವತೈದು ವರ್ಷಗಳಿಂದ ಅವಿರತವಾಗಿ ದುಡಿದಿದ್ದು ತಮ್ಮ ಬಿಡುವಿನ ವೇಳೆಯಲ್ಲಿ ಅಧಿಕ ಸಮಯವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು. ಇಂಗ್ಲಿಷ್ ಭಾಷೆಯ ಪ್ರಾವೀಣ್ಯವನ್ನು ಮೆರೆದಿದ್ದರೆ ಬೇರೆಲ್ಲೂ ಹೋಗಿ ತಲುಪಬಹುದಾಗಿದ್ದ ಬೀಜಿಯವರ ಕನ್ನಡ ಕಳಕಳಿ ಗಲ್ಪ್ ನಾಡಿನಲ್ಲಿ ಕನ್ನಡ ಅರಳಲು ಸಹಕಾರಿಯಾಗಿತ್ತು.

ಮಣಿಪಾಲದಿಂದ ಫಾರ್ಮಸಿ ವಿಭಾಗದಲ್ಲಿ ಸ್ನಾತಕೋತರ ಪದವಿ ಪಡೆದಿರುವ ಬೀಜಿಯವರು ಗಲ್ಫ್ನಾಡಿಗೆ ವಲಸೆ ಬರುವ ಮುನ್ನ ಮಣಿಪಾಲದಲ್ಲಿ ಫಾರ್ಮಸಿ ವಿಭಾಗದ ಸಹಾಯಕ ಪ್ರೊಪೆಸರ್ ಆಗಿಯೂ ಸೇವೆ ಸಲ್ಲಿಸಿದ್ದು 1985ರಲ್ಲಿ ದುಬೈ ಕರ್ನಾಟಕ ಸಂಘದ ಸಂಸ್ಥಾಪಕರ ಬಳಗ ಸೇರಿ ಮುಂದೆ 1988 ರಲ್ಲಿ ಸಂಘದ ಸಂವಿಧಾನ ರೂಪಿಸಿದ ರೂವಾರಿಗಳಲ್ಲೊಬ್ಬರಾಗಿದ್ದರು. 1989 ರಲ್ಲಿ ದುಬೈ ಕರ್ನಾಟಕ ಸಂಘದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸಾಂವಿಧಾನಿಕವಾಗಿ ಚುನಾಯಿತರಾದ ಅಧ್ಯಕ್ಷರಾದರು.1992-94 ರವರೆಗೆ ಕಾರ್ಯದರ್ಶಿಯಾಗಿಯೂ 1996-98ರ ವರೆಗೆ ಉಪಾಧ್ಯಕ್ಷರಾಗಿ ದುಬೈ ಕರ್ನಾಟಕ ಸಂಘದಲ್ಲಿ ಸೇವೆ ಸಲ್ಲಿಸಿರುವ ಯು.ಎ. ಇ ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

(ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂದರ್ಭ ಬೀ.ಜಿ)
ಗಲ್ಪ್ ರಾಷ್ಟ್ರಗಳಲ್ಲಾಗುವ ಕನ್ನಡ ಚಟುವಟಿಕೆಗಳನ್ನು ಪ್ರತಿಬಿಂಬಿಸಿ ಕರ್ನಾಟಕ ಮತ್ತು ಕೊಲ್ಲಿ ರಾಷ್ಟ್ರಗಳ ನಡುವಣ ಸೇತುವೆಯಾದ ಉದಯವಾಣಿ ದಿನಪತ್ರಿಕೆಯ ‘ಗಲ್ಪ್ ವಾರ್ತಾ ಸಂಚಯ’ಅಂಕಣ ವನ್ನು ಪ್ರಾರಂಭಿಸುವಲ್ಲಿ ಪ್ರೇರಣೆಯಾದರು. ಗಲ್ಪ್ ಕನ್ನಡಿಗರ ಅಭಿಮಾನಕ್ಕೆ ಸಾಂಸ್ಕೃತಿಕ ಶ್ರ್ರೀಮಂತಿಕೆಗೆ ಕನ್ನಡಿಯಾದ ಈ ಅಂಕಣವು ಬೀಜಿಯವರು ಕನ್ನಡ ಬಾಂಧವರಿಗಿತ್ತ ಒಂದು ಅತ್ಯಮೂಲ್ಯ ಕೊಡುಗೆ ಎನ್ನುವಂತಿತ್ತು. ಬೀಜಿಯವರ ಸಾರ್ಥಕ ಸೇವೆಯನ್ನು ಪರಿಗಣಿಸಿ ಶಾರ್ಜಾ ಕರ್ನಾಟಕ ಸಂಘ 2007 ರ ಪ್ರತಿಷ್ಟಿತ- ’ಮಯೂರ ಪ್ರಶಸ್ತಿ’ ಯನ್ನು , 2002 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯವು ತನ್ನ ಅತ್ಯುನ್ನತ ಪ್ರಶಸ್ತಿಯಾದ ‘ಅತ್ಯುತ್ತಮ ಪೂರ್ವ ವಿದ್ಯಾರ್ಥಿ’ ಪ್ರಶಸ್ತಿ, ನ.14 2008 ರಂದು ಬಹರೈನ್ ಕನ್ನಡ ಸಂಘದ ಅದ್ದೂರಿಯ ಕಾರ್ಯಕ್ರಮ “ಕನ್ನಡ ವೈಭವ” ದಲ್ಲಿ ಮುಖ್ಯ ಅತಿಥಿ ಕರ್ನಾಟಕ ಮುಖ್ಯ ಮಂತ್ರಿ ಬಿ.ಎಸ್. ಯಡಿಯುರಪ್ಪನವರಿಂದ ಕನ್ನಡ ಸೇವೆಗಾಗಿ ನಮ್ಮ ’ಬೀಜಿ’ಯವರು ಸನ್ಮಾನಿತರಾಗಿದ್ದರು. ಯು.ಎ.ಯಿಯ ಪ್ರತಿಷ್ಟ ಕನ್ನಡ ಸಂಸ್ಥೆ ಅಬುದಾಭಿ ಕರ್ನಾಟಕ ಸಂಘ ಆಯೋಜಿಸಿದ ರಾಜ್ಯೋತ್ಸವ 2009 ರಲ್ಲಿಯೂ ಸನ್ಮಾನಿತರಾದರು. ’ಧ್ವನಿ ಪತಿಷ್ಠಾನ ತನ್ನ ಬೆಳ್ಳಿಹಬ್ಬದ ಪ್ರಯುಕ್ತ ವಿಜ್ರಂಭ್ರಂಣೆಯಿಂದ ಆಯೋಜಿಸಿದ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಹೊಸ ಹವ್ಯಾಸ ’ ಕನ್ನಡ ಪತ್ರಿಕೋದ್ಯಮ’ ಸಾಧನೆಯನ್ನು ಗುರುತಿಸಿ ಸನ್ಮಾನ, ಯು.ಎ.ಯಿಯ ಪ್ರತಿಷ್ಟ ಕನ್ನಡ ಸಂಸ್ಥೆ ಅಬುದಾಭಿ ಕರ್ನಾಟಕ ಸಂಘ ಆಯೋಜಿಸಿದ ಪ್ರಥಮ ’ ದ. ರಾ. ಬೇಂದ್ರೆ ಪ್ರಶಸ್ತಿ ’ ಯ ಪ್ರಥಮ ವಿಜೇತರಾಗಿ ಸನ್ಮಾನಿತರಾದರು.ದೇವಾಡಿಗ ಸಮುದಾಯಕ್ಕೂ ಹತ್ತು ಹಲವು ರೀತಿಯಲ್ಲಿ ಸಹಾಯ ನೀಡಿರುವ ಬೀಜಿಯವರು ದೇವಾಡಿಗ ಸಂಘ ಯು.ಎ.ಇ ಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಂತರ್ಜಾಲ ತಾಣ ದೇವಾಡಿಗ.ಕಾಂ ಕಾರ್ಯನಿರ್ವಾಹಣೆಯಲ್ಲೂ ತಮ್ಮ ಶ್ರಮದಾನ ನೀಡುತ್ತಿದ್ದಾರೆ. ಇನ್ನೊಂದು ತಾಣವಾದ ಕೊಲ್ಲೂರು.ಕಾಮ್ ನಿರ್ಮಿಸಿದ್ದರು.ಮುಂಬೈ ದೇವಾಡಿಗ ಸಂಘ ’ ದೇವಾಡಿಗ ಭೂಷಣ’ ಎಂದು ಸನ್ಮಾನ ಮಾಡಿದೆ. ಕಾಂತಾವರ ಕನ್ನಡ ಸಂಘ ಅವರ ಸಾಧನೆಗಳನ್ನು ‘ಗಲ್ಫ್ ಕನ್ನಡಿಗ – ಬಿ.ಜಿ.ಮೋಹನ್ ದಾಸ್ ’–ಎಂಬ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ.

ಊರಿಗೆ ವಾಪಾಸ್ ಬಂದು (2014) ಮಣಿಪಾಲದಲ್ಲಿ ನೆಲಸಿರುವ ಬೀಜಿ ಯವರು ಮಣಿಪಾಲ ಲಯನ್ಸ್ ಸೇರಿ ಅದರ ಅದ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.ಆಂಗ್ಲ ಭಾಷೆಯ ಮೇಲೆ ಅಪ್ರತಿಮ ಹಿಡಿತವಿರುವ ಬೀಜಿಯವರು ಉತ್ತಮ ಅಂಕಣಕಾರರೂ ಆಗಿದ್ದರು. ಬೀಡುವಿನ ವೇಳೆಯಲ್ಲಿ ಹಲವು ಅಂತರ್ಜಾಲ ತಾಣಗಳನ್ನು ಜಾಲಾಡುವುದು ಮಾತ್ರವಲ್ಲದೇ ಕೆಲವು ತಾಣಗಳನ್ನು ಹೊರಡಿಸುತ್ತಲೂ ಇದ್ದಾರೆ. ಪರಿಚಿತರಲ್ಲಿ ಆತ್ಮೀಯ ಸ್ನೇಹಿತರಾಗಿ, ಪ್ರಾಮಾಣಿಕರಾಗಿ, ಸಹಾನುಭೂತಿ ತೋರುವ ಸಹೃದಯಿ ಬೀಜಿಯವರು ತಮ್ಮ ಸ್ನೇಹಿತರಿಂದಲೂ ಬೀಜಿ ಎಂದೇ ಕರೆಸಿಕೊಂಡಿದ್ದರು.
Comments are closed.