ಕರಾವಳಿ

ನಾಳೆ ದ.ಕ.ಜಿಲ್ಲೆಯ ಗುರುಪುರ ಹೊಸ ಸೇತುವೆ ಉದ್ಘಾಟನೆ

Pinterest LinkedIn Tumblr

ಮಂಗಳೂರು, ಜೂ.10: ರಾಷ್ಟ್ರೀಯ ಹೆದ್ದಾರಿ ಗುರುಪುರ ನದಿಗೆ ನಿರ್ಮಿಸಲಾದ ಹೊಸ ಸೇತುವೆಯ ಉದ್ಘಾಟನೆ ನಾಳೆ ನೆರವೇರಲಿದೆ.

ಕುಲಶೇಖರ-ಮೂಡುಬಿದಿರೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ನೂತನ ಸೇತುವೆಯ ಅಂತಿಮ ಹಂತದ ಕಾಮಗಾರಿಗಳನ್ನು ಇತ್ತೀಚಿಗೆ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲು ಅವರು ಉತ್ತರ ಕ್ಷೇತ್ರದ ಶಾಸಕ ಶ್ರೀ ಡಾ.ವೈ ಭರತ್ ಶೆಟ್ಟಿ ಅವರೊಂದಿಗೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೀಗ ಕಾಮಗಾರಿ ಅಂತ್ಯಗೊಂಡು ಉದ್ಘಾಟನೆಗೆ ಸಿದ್ದಗೊಂಡಿರುವ ಹೊಸ ಸೇತುವೆಯನ್ನು ಜೂ.12, ಶುಕ್ರವಾರದಂದು ಪೂ.11ಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಲಿರುವರು.

ಸುಮಾರು 39.42 ಕೋ.ರೂ. ವೆಚ್ಚದ ಈ ಸೇತುವೆಯ ನಿರ್ಮಾಣ ಕಾರ್ಯವು ಕಳೆದ ವರ್ಷದ ಫೆಬ್ರವರಿಯಲ್ಲಿ ಆರಂಭಗೊಂಡಿತ್ತು. ಕಾಮಗಾರಿ ಪೂರ್ಣಗೊಳಿಸಲು 2 ವರ್ಷದ ಗಡುವು ನೀಡಲಾಗಿದ್ದರೂ ಕೂಡ ನಗರದ ಕಾವೂರಿನ ಮೊಗರೋಡಿ ಕನ್‌ಸ್ಟ್ರಕ್ಷನ್ ಕಂಪೆನಿಯು ಕೇವಲ ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಿದೆ. 7 ಅಂಗಣಗಳ ಸೇತುವೆಯ ಎರಡೂ ಬದಿಯಲ್ಲಿ ಪಾದಚಾರಿಗಳಿಗೆ ನಡೆದಾಡುವ ಫೂಟ್ಪಾತ್ ಹಾಗೂ ಎರಡೂ ತುದಿಗಳಲ್ಲಿ ತಲಾ 500 ಮೀಟರ್ ಉದ್ದಕ್ಕೆ ರಸ್ತೆ ಅಗಲೀಕರಣಗೊಳಿಸಲಾಗಿದೆ.

ಗುರುಪುರ ಸೇತುವೆಯ ಕಾಮಗಾರಿಯು ಅತ್ಯಂತ ಕ್ಷಿಪ್ರಗತಿಯಲ್ಲಿ ನಡೆದಿದೆ. ಹಳೆ ಸೇತುವೆಯಲ್ಲಿ ಘನ ವಾಹನ ಹೊರತುಪಡಿಸಿ ಉಳಿದ ವಾಹನಗಳ (ತ್ರಿಚಕ್ರ, ದ್ವಿಚಕ್ರ) ಸಂಚಾರಕ್ಕೆ ಸಂಬಂಧಿಸಿ ಸಮಾಲೋಚಿಸ ಲಾಗುವುದು. ಸೇತುವೆಯ ನಿರ್ಮಾಣಕ್ಕೆ ಮೊಗರೋಡಿ ಕನ್‌ಸ್ಟ್ರಕ್ಷನ್ ಕಂಪೆನಿಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

Comments are closed.