ಕರಾವಳಿ

ಜೂನ್ 10ರಿಂದ ಪಿಲಿಕುಲ ನಿಸರ್ಗಧಾಮ ಸಾರ್ವಜನಿಕರ ವೀಕ್ಷಣೆಗೆ ಲಭ್ಯ 

Pinterest LinkedIn Tumblr

ಮಂಗಳೂರು : ಕೋವಿಡ್ 2019ರ ನಿಯಂತ್ರಣದ ಹಿನ್ನೆಲೆಯಲ್ಲಿ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಎಲ್ಲಾ ಆಕರ್ಷಣೆಗಳನ್ನು ಕಳೆದ ಮೂರು ತಿಂಗಳಿಂದ ಮುಚ್ಚಲಾಗಿತ್ತು.

ಇದೀಗ ಸರ್ಕಾರದ ಆದೇಶ ಅನುಸರಿಸಿ ಕೋವಿಡ್ 2019ರ ನಿಯಂತ್ರಣ ಮಾರ್ಗಸೂಚಿಯ ಎಲ್ಲಾ ಸೂಚನೆಗಳನ್ನು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿ/ ಎಸ್‌ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತುಗೊಳಪಟ್ಟು ದಿ:10-06-2020 ಬುಧವಾರದಿಂದ ಪೂರ್ವಾಹ್ನ 09.30ರಿಂದ ಸಂಜೆ 05.00ಗಂಟೆವರೆಗೆ ಜೈವಿಕ ಉದ್ಯಾನ, ಲೇಕ್ ಗಾರ್ಡನ್, ಸಂಸ್ಕೃತಿ ಗ್ರಾಮ, ಆರ್ಬೋರೇಟಮ್ ಮತ್ತು ಗುತ್ತು ಮನೆಯ ಆಕರ್ಷಣೆಗಳನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು ಎಂದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯವನ್ನು ಈಗ ತೆರೆಯದೆ ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶವನ್ನು ಅನುಸರಿಸಿ ತೆರೆಯಲಾಗುವುದು. ಪ್ರತೀ ಸೋಮವಾರ ವಾರದ ರಜೆ ಇರುತ್ತದೆ. ಸಾರ್ವಜನಿಕರು ಪಿಲಿಕುಳ ನಿಸರ್ಗಧಾಮದ ಆಕರ್ಷಣೆಗಳನ್ನು ವೀಕ್ಷಿಸಲು ಭೇಟಿ ನೀಡುವ ಸಮಯದಲ್ಲಿ ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

1. ಎಲ್ಲಾ ಸಂದರ್ಭಗಳಲ್ಲಿ ಕನಿಷ್ಠ 6 ಅಡಿ ಭೌತಿಕ ಅಂತರವನ್ನು ಕಾಯ್ದುಕೊಳ್ಳುವುದು.
2. ಸಂದರ್ಶಕರು ಮುಖಗವಸನ್ನು (ಮಾಸ್ಕ್) ಧರಿಸಲೇಬೇಕು. ಧರಿಸದಿದ್ದವರಿಗೆ ಪ್ರವೇಶವಿರುವುದಿಲ್ಲ.
3. ಎಲ್ಲಾ ಸಂದರ್ಶಕರನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ಮಾಡಲಾಗುವುದು. ಸಂದರ್ಶಕರ ದೇಹದ ಉಷ್ಣತೆಯು ಮಿತಿಗಿಂತ ಹೆಚ್ಚಿದ್ದರೆ ಅಂತಹ ವ್ಯಕ್ತಿಗಳಿಗೆ ಪ್ರವೇಶವನ್ನು ನಿರಾಕರಿಸಲಾಗುವುದು.
4. ಯಾವುದೇ ಸಂದರ್ಶಕರಿಗೆ ಜ್ವರ, ಕೆಮ್ಮು, ಶೀತ, ಗಂಟಲುನೋವು ಅಥವಾ ಉಸಿರಾಟದ ತೊಂದರೆ ಇದ್ದರೆ ಅಂತಹ ವ್ಯಕ್ತಿಗಳಿಗೆ ಪ್ರವೇಶವನ್ನು ನಿರಾಕರಿಸಲಾಗುವುದು.
5. ಲೇಕ್‌ನಲ್ಲಿ ಮಕ್ಕಳ ಆಟಕ್ಕೆ ಅವಕಾಶವಿಲ್ಲ ಎಂದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.