(ಸಾಂದರ್ಭಿಕ ಚಿತ್ರ)
ಮಂಗಳೂರು, ಮೇ 31 : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮಹಾಸ್ಪೋಟ ಸಂಭವಿಸುತ್ತಿ ದ್ದು, ದ.ಕ.ಜಿಲ್ಲೆಯಲ್ಲಿ 14 ಸೇರಿದಂತೆ ಕರ್ನಾಟಕದಲ್ಲಿ ಇಂದು ಒಂದೇ ದಿನ ಬರೋಬ್ಬರಿ 299 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ.
ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಶನಿವಾರ ಸಂಜೆ 5 ಗಂಟೆಯಿಂದ ರವಿವಾರ ಸಂಜೆ 5 ಗಂಟೆವರೆಗೆ 299 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಂದಿದ್ದು, ಇದರಲ್ಲಿ ದ.ಕ. ಜಿಲ್ಲೆಯಲ್ಲಿ 14 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ.
ದ.ಕ.ಜಿಲ್ಲೆಯ ಸೋಂಕಿತರ ಪೈಕಿ 9 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಒಬ್ಬರು ದುಬೈನಿಂದ ಬಂದಿದ್ದು, ಮತ್ತೊಬ್ಬರು ಮಲೇಶ್ಯಾದಿಂದ ಮರಳಿದವರಾಗಿದ್ದಾರೆ. ಇನ್ನು ಮೂರು ಮಂದಿ ಮಹಾರಾಷ್ಟ್ರದಿಂದ ಮರಳಿದವರಲ್ಲಿ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 3,221ಕ್ಕೆ ಏರಿಕೆಯಾಗಿದೆ. ರಾಯಚೂರು ಮತ್ತು ಬೀದರ್ ಜಿಲ್ಲೆಗಳಲ್ಲಿ ಕೊರೋನದಿಂದ ತಲಾ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 51ಕ್ಕೆ ಏರಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ರಾಯಚೂರು 83, ಯಾದಗಿರಿ 44, ಬೀದರ್ 33, ಕಲಬುರಗಿ 28, ವಿಜಯಪುರ 26, ಬೆಂಗಳೂರು ನಗರ 21, ದಕ್ಷಿಣ ಕನ್ನಡ 14, ಮಂಡ್ಯ ಮತ್ತು ಬೆಳಗಾವಿಯಲ್ಲಿ ತಲಾ 13, ಉಡುಪಿ 10, ದಾವಣಗೆರೆ 6, ಉತ್ತರ ಕನ್ನಡ 5, ಬಳ್ಳಾರಿ, ಕೋಲಾರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದೊಂದು ಪ್ರಕರಣಗಳು ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.
Comments are closed.