ಕರಾವಳಿ

ರೋಗ ನಿರೋಧಕ ಶಕ್ತಿ ಹೆಚ್ಚಳದಿಂದ ಕೊರೊನಾ ನಿಯಂತ್ರಣ ಸಾಧ್ಯ : ಡಾ. ಪ್ರವೀಣ್ ಕುಮಾರ್ ರೈ

Pinterest LinkedIn Tumblr

ಮಂಗಳೂರು: ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಳ ಮಾಡುವುದೇ ಕೊರೊನಾ ಸೋಂಕು ತಡೆಗೆ ಪರಿಹಾರ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಶೀಲರಾದಾಗ ಖಂಡಿತಾ ಕೊರೊನಾ ನಿಯಂತ್ರಣ ಸಾಧ್ಯವಿದೆ ಎಂದು ಇಂಡಿಯಾನ್ ಹೋಮಿಯೋಪಥಿ ಮೆಡಿಕಲ್ ಅಸೋಸಿಯೇಷನ್ ಅವಿಭಜಿತ ದ.ಕ. ಜಿಲ್ಲಾ ಅಧ್ಯಕ್ಷ ಡಾ. ಪ್ರವೀಣ್ ಕುಮಾರ್ ರೈ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಕೊರೊನಾ ಜಾಗೃತಿ ಅಂಗವಾಗಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಹೋಮಿಯೋಪತಿ ಕ್ಲಿನಿಕ್ ರಿಸರ್ಚ್ ಸೆಂಟರ್ ಅಧ್ಯಯನ ನಡೆಸಿದ್ದು ಇದಕ್ಕೆ ಅರ್ಸೆನಿಕಂ ಅಲ್ಬಂ-30 ಮಾತ್ರೆಯೇ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗಿದೆ.

ಕೇರಳ, ಗುಜರಾತ್ ಸರಕಾರಗಳು ಕ್ವಾರಂಟೈನ್‌ನಲ್ಲಿರುವವರಿಗೆ ಈ ಮಾತ್ರೆಯನ್ನು ನೀಡಿದ್ದು ಇದರಿಂದ ಅನುಕೂಲವಾಗಿದೆ. ಜಿಲ್ಲೆಯಲ್ಲೂ ಈಗಾಗಲೇ ಕೊವಿಡ್ ವಾರಿಯರ್‌ಗಳಾದ ಹೋಮ್ ಗಾರ್ಡ್, ಆಶಾ ಕಾರ್ಯಕರ್ತೆಯರು ಶಿಕ್ಷಕರು, ಪತ್ರಕರ್ತರಿಗೆ ಉಚಿತ ವಿತರಣೆ ಮಾಡಲಾಗಿದೆ. ಮುಂದೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ನೀಡಲಾಗವುದು ಎಂದರು.

ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಪ್ರವೀಣ್‌ರಾಜ್ ಆಳ್ವಾ ಮಾತನಾಡಿ, ಮಾತ್ರೆಯೂ ಎಲ್ಲ ಹೋಮಿಯೋಪಥಿಕ್ ಕ್ಲಿನಿಕ್ ಲಭ್ಯವಿದ್ದು, ವೈದ್ಯರನ್ನು ಸಂಪರ್ಕಿಸಿ ತೆಗೆದುಕೊಳ್ಳಿ. ನಿಯಮಿತ ಅವಧಿ ಮತ್ತು ಸೂತ್ರದಲ್ಲಿಯೇ ಈ ಮಾತ್ರೆ ತೆಗೆದುಕೊಳ್ಳಬೇಕು. ಅರ್ಸೆನಿಕಂ ಅಲ್ಬಂ-30 ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡುವುದಲ್ಲದೆ ಚಿಕೂನ್‌ಗುನ್ಯಾ, ಕಿಡ್ನಿ ಸಮಸ್ಯೆಗೂ ಅನುಕೂಲವಾಗಿದೆ ಎಂದರು.

ಮಳೆಗಾಲದಲ್ಲಿ ಕಾಡುವ ಮಲೇರಿಯಾ, ಡೆಂಗೆ ಸಂಬಂಧಿಸಿ ಡಾ. ಪ್ರಸನ್ನಕುಮಾರ್ ಮಾತನಾಡಿ, ಒಮ್ಮೆ ಮಳೆ ಬಂದು 2ರಿಂದ 3 ದಿನ ಬಿಡುವು ನೀಡಿದರೆ ಮನೆಯ ಸುತ್ತ ಸಂಗ್ರಹವಾಗ ತಿಳಿ ನೀರಿನಲ್ಲಿ ಲಾರ್ವಗಳ ಉತ್ಪತ್ತಿಯಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಇದು ಯಾವುದೇ ವ್ಯಕ್ಯಿಗೆ ಕಚ್ಚಿದಾಗ ಡೆಂಗೆ ಜ್ವರ ಬಾಧಿಸುತ್ತದೆ.

ಸಾಮಾನ್ಯವಾಗಿ ಡೆಂಗೆಯ ಈಡಿಸ್ ಸೊಳ್ಳೆ ಹಗಲಲ್ಲಿ ಕಚ್ಚಿದರೆ, ಮಲೇರಿಯಾ ಜ್ವರ ಅನಾಫಿಲಿಸ್ ಸೊಳ್ಳೆ ರಾತ್ರಿ ಕಚ್ಚುತ್ತದೆ. ಈ ಕಾರಣದಿಂದ ವಾಸಿಸುವ ಪರಿಸರವನ್ನು ನೀರು ನಿಲ್ಲದಂತೆ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಸೊಳ್ಳೆ ಕಚ್ಚದಂತೆ ಕೈಗೆ ಬೇವಿನ ಎಣ್ಣೆ ಹಚ್ಚಿದರೆ ಉತ್ತಮ. ಮಳೆಗಾಲದಲ್ಲಿ ಹೆಚ್ಚು ಬಿಸಿ ನೀರು ಸೇವಿಸಿ ಆರೋಗ್ಯದ ಕಡೆ ಗಮನಕೊಡಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಳ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಡಾ. ರಾಮಕೃಷ್ಣ ರಾವ್, ಡಾ. ಗುರುಪ್ರಸಾದ್ ಎಂ.ಎನ್., ಡಾ. ಗುರುದತ್ತರಾವ್, ಡಾ. ಡೆಲ್ಸಿ ನಿರೀಕ್ಷಾ ಉಪಸ್ಥಿತರಿದ್ದರು.

ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

Comments are closed.