ಕರಾವಳಿ

ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತ್ಯು ಪ್ರಕರಣ :ಅವೈಜ್ಞಾನಿಕ ಕಟ್ಟಡ ಕಾಮಗಾರಿ ಆರೋಪ -ತನಿಖೆಗೆ ಆದೇಶ

Pinterest LinkedIn Tumblr

ಮಂಗಳೂರು, ಫೆಬ್ರವರಿ.29: ನಗರದ ಬಂಟ್ಸ್ ಹಾಸ್ಟೆಲ್‌ ಸಮೀಪದ ಕರಂಗಲ್ಪಾಡಿ ಜಂಕ್ಷನ್ ಬಳಿ ಶುಕ್ರವಾರ ಕಟ್ಟಡ ಕಾಮಗಾರಿ ವೇಳೆ ಕಾರ್ಮಿಕರ ಮೇಲೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ನಡೆದಿದ್ದು, ಅವೈಜ್ಞಾನಿಕ ಕಟ್ಟಡ ಕಾಮಗಾರಿಯಿಂದಾಗಿ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಶುಕ್ರವಾರ ಮಧ್ಯಾಹ್ನ ತಡೆಗೋಡೆ ಕಾಮಗಾರಿ ನಡೆಸುತ್ತಿದ್ದಾಗ ಕಟ್ಟಡದ ಪಾರ್ಶ್ವದಲ್ಲಿ ಮಣ್ಣು ಕುಸಿವಾಗಿದ್ದು ಮಣ್ಣಿನಡಿಗೆ ಸಿಲುಕಿಕೊಂಡ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಇಹಲೋಕದ ಪಯಣ ಮುಗಿಸಿದ್ದಾರೆ. ಮೃತಪಟ್ಟವರನ್ನು ಬಾಗಲಕೋಟೆ ಮೂಲದ ಭೀಮೇಶ್ (25ವ) ಮತ್ತು ಪಶ್ಚಿಮ ಬಂಗಾಳ ಮೂಲದ ಮೊಸ್ರಿಗುಲ್ (20ವ) ಎಂದು ಗುರುತಿಸಲಾಗಿದೆ.ಈ ವೇಳೆ ಮಣ್ಣಿನಡಿ ಸಿಲುಕಿದ್ದ ನಾಲ್ಕು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ನಗರದ ಹೃದಯಭಾಗದಲ್ಲಿ ಹೆಸರಾಂತ ಉದ್ಯಮಿಯೊಬ್ಬರು ಕಟ್ಟಡ ಕಾಮಗಾರಿ ನಡೆಸುತ್ತಿದ್ದರು. ಆರು ಅಂತಸ್ತಿನ ತ್ರೀ ಸ್ಟಾರ್ ಹೊಟೇಲ್ ನಿರ್ಮಾಣಕ್ಕಾಗಿ ಕಾಮಗಾರಿ ನಡೆಸಲಾಗುತ್ತಿತ್ತು. ಕಟ್ಟಡಕ್ಕೆ ಸೂಕ್ತ ಸೆಟ್ ಬ್ಯಾಕ್ ಇಲ್ಲದ ಕಾರಣ ತಡೆಗೋಡೆ ನಿರ್ಮಿಸಲಾಗುತ್ತಿತ್ತು. ಈ ಸಂದರ್ಭದಲ್ಲೇ ಅಂಥ ಜಾಗದಲ್ಲಿ ರಸ್ತೆಯ ಭಾಗ ಕುಸಿದು ಬಿದ್ದಿದೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರು ದುರಂತ ಸಾವು ಕಂಡಿದ್ದಾರೆ.

ಎರಡು ಅಂತಸ್ತಿಗಿಂತ ಹೆಚ್ಚು ಎತ್ತರದ ಕಟ್ಟಡ ನಿರ್ಮಾಣಕ್ಕೆ ಸುತ್ತ ಕಟ್ಟಡದ ಎತ್ತರದ ಮೂರನೇ ಒಂದರಷ್ಟು ಸೆಟ್ ಬ್ಯಾಕ್ ಏರಿಯಾ ಇರಬೇಕೆಂಬ ನಿಯಮವಿದೆ. ಆದರೆ, ಈ ಕಟ್ಟಡ ಆರು ಅಂತಸ್ತಿನದಾಗಿದ್ದು, ಈಗಾಗಲೇ ನಾಲ್ಕು ಮಹಡಿಯವರೆಗೆ ಕಟ್ಟಡ ಕಾಮಗಾರಿ ಮುಗಿಸಲಾಗಿದೆ. ಕಟ್ಟಡಕ್ಕೆ ಯಾವುದೇ ಸೆಟ್ ಬ್ಯಾಕ್ ಇರಲಿಲ್ಲ.ಆದರೆ ಕಾಮಗಾರಿ ನಡೆಸುವವರು ಕಾನೂನಿನ ಲೋಪವನ್ನು ದೂರ ಮಾಡಿ ಾಧಿಕಾರಿಗಳ ಜೊತೆ ಒಪ್ಪಂದದ ಮೂಲಕ ಎನ್ ಓಸಿ ಪಡೆದಿದ್ದರು ಎನ್ನಲಾಗಿದೆ.

ಮಂಗಳೂರಿನಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕೊಡು ಕೊಳ್ಳುವಿಕೆ ಕಾರಣದಿಂದ ಹೀಗೆ ನಿರಾತಂಕವಾಗಿ ಸೆಟ್ ಬ್ಯಾಕ್ ಇಲ್ಲದೆ ನಿರ್ಮಾಣ ಹಂತದ ಕಟ್ಟಡಗಳ ಕಾಮಗಾರಿಗಳು ಅಕ್ರಮವಾಗಿ ನಡೆಯುತ್ತಿರುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿ ಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದ ನಗರದಲ್ಲಿ ಈಗ ದುರ್ಘಟನೆ ನಡೆದು ಹೋಗಿದ್ದು, ಇಬ್ಬರು ಮೃತಪಟ್ಟ ಘಟನೆ ಬಗ್ಗೆ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ತನಿಖೆಗೆ ಸೂಚನೆ ನೀಡಿದ್ದಾರೆ. ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ಪಾಲಿಕೆ ಆಯುಕ್ತರು ವರದಿ ಕೇಳಿದ್ದು,ಕಟ್ಟಡದ ಕಾಮಗಾರಿ ಸ್ಥಗಿತಗೊಳಿಸಿ ಮಾಲಕರಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಲಾಗಿದೆ.

Comments are closed.