ಕರಾವಳಿ

ಫೆಬ್ರವರಿ 14 ರಿಂದ 16 : ಅಡ್ಯಾರಿನಲ್ಲಿ ಫುಜ್ಲಾನಾ ಜಿಪಿಎಲ್ ಉತ್ಸವ 2020 – ಜಿಎಸ್ ಬಿ ಸಮುದಾಯದವರಿಗೆ ಮುಕ್ತ ಅವಕಾಶ

Pinterest LinkedIn Tumblr

ಮಂಗಳೂರು : ಬಹುನಿರೀಕ್ಷಿತ ನಾಲ್ಕನೇ ವರ್ಷದ ಕೊಡಿಯಾಲ್ ಸ್ಪೋರ್ಟ್ ಎಸೋಸಿಯೇಶನ್ ಆಯೋಜಿತ ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ ವೇದವ್ಯಾಸ ಕಾಮತ್ ಅವರ ಮುಂದಾಳತ್ವದಲ್ಲಿ ಫುಜ್ಲಾನಾ ಜಿಪಿಎಲ್ ಉತ್ಸವ ಇದೇ ಫೆಬ್ರವರಿ 14, 15 ಮತ್ತು 16 ರಂದು ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಆದ್ದೂರಿಯಾಗಿ ನಡೆಯಲಿದೆ ಎಂದು ಕೊಡಿಯಾಲ್ ಸ್ಫೋರ್ಟ್ ಎಸೋಸಿಯೇಶನ್ ಮಾರ್ಗದರ್ಶಕ ಮಂಡಳಿಯ ಸಂಚಾಲಕರಾದ ಪ್ರದೀಪ್ ಪೈ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕ್ರಿಕೆಟ್ ಪಂದ್ಯಾಟಗಳೊಂದಿಗೆ ವೈವಿದ್ಯಮಯ ವಿಶೇಷತೆಗಳು ಸೇರಿ ಹಲವಾರು ವಿಭಿನ್ನ ಕಾರ್ಯಾಗಾರಗಳು, ಸ್ಪರ್ಧೆಗಳು ನಡೆಯಲಿದ್ದು ವಿಶೇಷ ಆಕರ್ಷಣೆಯೊಂದಿಗೆ ಜಿಪಿಎಲ್ ಉತ್ಸವ 2020 ಮನಸೂರೆಗೊಳ್ಳಲಿದೆ ಎಂದರು.

ಜಿಪಿಎಲ್ ಕ್ರಿಕೆಟ್ 2020 ಯಲ್ಲಿ ಮಂಗಳೂರು ಸೇರಿ ಕರಾವಳಿ ಜಿಲ್ಲೆಯನ್ನು ಒಳಗೊಂಡು ಅಂತರರಾಜ್ಯ ತಂಡಗಳು ಸೇರಿ ಒಟ್ಟು 16 ಟೀಮ್ ಗಳ 32 ಪಂದ್ಯಗಳು ಅರ್ಹನಿಶಿಯಾಗಿ ನಡೆಯಲಿವೆ. ಮೊದಲ ಪಂದ್ಯ ಶುಕ್ರವಾರ ಫೆಬ್ರವರಿ 14 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ.

ಫೈನಲ್ ಪಂದ್ಯ ಪೆಬ್ರವರಿ 16 ರ ಭಾನುವಾರ ರಾತ್ರಿ 9 ಗಂಟೆಗೆ ಆರಂಭವಾಗಲಿದೆ. ಪಂದ್ಯದ ಬಳಿಕ ವಿಜೇತ ತಂಡಕ್ಕೆ ಟ್ರೋಫಿ, ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಸರಣಿಶ್ರೇಷ್ಟ ಕ್ರೀಡಾಪಟುವಿಗೆ ಸುಜುಕಿ ಝೀಕ್ಸರ್ ಬೈಕ್ ಉಡುಗೊರೆಯಾಗಿ ನೀಡಲಾಗುವುದು.

ಶುಕ್ರವಾರ ರಾತ್ರಿ 7 ಗಂಟೆಗೆ ಜಿಪಿಎಲ್ ಉತ್ಸವದ ಅಧಿಕೃತ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಗಣ್ಯರು ಉಪಸ್ಥಿತರಿರುವರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಫ್ಯೂಶನ್ ಮ್ಯೂಸಿಕಲ್ ಬ್ಯಾಂಡ್ ವತಿಯಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

ಶನಿವಾರ ರಾತ್ರಿ 7 ರಿಂದ 8 ಗಂಟೆಯ ತನಕ ಮಲ್ಲಕಂಬ ಪ್ರದರ್ಶನ ನಡೆಯಲಿದೆ. ರಾತ್ರಿ 8:30 ರಿಂದ ನೇತ್ರಾವತಿ ನದಿಯಲ್ಲಿ ಚಲಿಸುವ ವಿಹಾರ ನೌಕೆಯಲ್ಲಿ ಆಹ್ವಾನಿತ ಗಣ್ಯರೊಂದಿಗೆ ಪದ್ಮಶ್ರೀ ಟಿವಿ ಮೋಹನದಾಸ್ ಪೈ ಅವರು ಸಂವಾದ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಬಾರಿಯ ಹೆಚ್ಚುವರಿ ವಿಶೇಷಗಳು: ಬೋಟಿಂಗ್, ಕುದುರೆ ಸವಾರಿ, ಸಾಹಸ ಕ್ರೀಡೆಗಳು, ಜಲಕ್ರೀಡೆಗಳು, ಝುಂಬಾ ಡ್ಯಾನ್ಸ್, ವಿಹಾರನೌಕೆಯಲ್ಲಿ ಸವಾರಿ ಸಹಿತ ವಿವಿಧ ಸ್ಪರ್ಧೆಗಳಾದ ಝುಂಬಾ ಸ್ಪರ್ದೆ, ಗೂಡುದೀಪ ಸ್ಪರ್ದೆ, ಬೆಂಕಿ ಬಳಸದೆ ಆಹಾರ ತಯಾರಿಕೆ, ಮೆಹಂದಿ ಸ್ಪರ್ದೆ, ಡಾಯಿಂಗ್ ಮತ್ತು ಕಲರಿಂಗ್, ಟ್ರೇಶರ್ ಹಂಟ್, ಛದ್ಮವೇಶ ಸ್ಪರ್ದೆ, ಹೂಪೋಣಿಸುವ ಸ್ಪರ್ದೆ, ಪೋಸ್ಟರ್ ಮೆಕಿಂಗ್, ಟ್ಯಾಲೆಂಟ್ ಶೋ, ಭರತನಾಟ್ಯ ಸ್ಪರ್ದೆ ಸಹಿತ ವಿವಿಧ ಸ್ಪರ್ದೆಗಳು ನಡೆಯಲಿವೆ.

ವಿವಿಧ ಕ್ಷೇತ್ರಗಳ ಪರಿಣಿತ ಖ್ಯಾತ ಸಾಧಕರಿಂದ ವಿವಿಧ ಕಾರ್ಯಾಗಾರಗಳು ನಡೆಯಲಿದ್ದು ಅವುಗಳಲ್ಲಿ ಕಾವಿಕಲೆ, ಸಿವಿಲ್ ಪರೀಕ್ಷೆಗಳಿಗೆ ತಯಾರಿ, ಫೋಟೋಗ್ರಾಫಿ, ಕ್ಯಾಂಡಲ್ ಮೇಕಿಂಗ್, ಮಹಿಳೆಯರಿಗೆ ಸ್ವರಕ್ಷಣೆ, ಬದುಕುವ ಶೈಲಿ-ಆಹಾರ ವಿಧಾನ, ಸಂದರ್ಶನ ಎದುರಿಸುವ ಕಲೆ, ಉದ್ಯೋಗ ತರಬೇತಿ, ಬ್ಯಾಂಕಿಂಗ್ ಪರೀಕ್ಷೆ ತಯಾರಿ, ಸಣ್ಣ-ಮಧ್ಯಮ ಕೈಗಾರಿಕೆಗಳ ಸ್ಥಾಪನೆಯ ಬಗ್ಗೆ ಮಾಹಿತಿ, ಸಾಮಾಜಿಕ ಜಾಲತಾಣಗಳ ನಿರ್ವಹಣೆ ತಯಾರಿ, ಗುಡಿಕೈಗಾರಿಕೆ ಮತ್ತು ಕರಕುಶಲ ಉತ್ಪನ್ನಗಳ ನಿರ್ಮಾಣದ ಬಗ್ಗೆ ಕಾರ್ಯಾಗಾರಗಳು ಮುಖ್ಯವಾಗಿವೆ. ಮುಖ್ಯ ಅತಿಥಿಗಳಾಗಿ ಖ್ಯಾತ ಅಂತರಾಷ್ಟ್ರೀಯ ಮಟ್ಟದ ಉದ್ಯಮಿಗಳಾದ ಪ್ರಕಾಶ್ ಪೈ ಹಾಗೂ ಅನಂತ ಪೈ ಅವರು ಭಾಗವಹಿಸಲಿದ್ದಾರೆ.

ಮೂರು ದಿನಗಳ ಕಾಲ ಜಿಎಸ್ ಬಿ ಸಹಿತ ವಿಭಿನ್ನ ಖಾದ್ಯಗಳನ್ನು ಉಣಬಡಿಸುವ ಫುಡ್ ಕೋರ್ಟ್ ತೆರೆಯಲಾಗಿದ್ದು ಉಚಿತವಾಗಿ ಚಾಟ್ ಕೌಂಟರ್ಸ್, ಐಡಿಯಲ್, ಹ್ಯಾಂಗೋ, ಉಲ್ಲಾಸ್ ಐಸ್ ಕ್ರೀಂ ಕೌಂಟರ್ಸ್, ಕಬ್ಬಿನ ರಸ, ಪೋಟೆಟೋ ಟ್ವಿಸ್ಟರ್, ಫ್ರೂಟ್ ಪಂಚ್, ಚಾಕೋಲೇಟ್ ಫೌಂಟೆನ್ಸ್, ಗೋಲು, ಪುಟ್ಟು, ಚರಂಬುರಿ, ಮಹಾರಾಜಾ ಸ್ಪೆಶಲ್ ಮಶೂರೂಂ ಗೀರೋಸ್ಟ್ ಬಿರಿಯಾನಿ, ತಂದೂರ್ ಹೋಟೇಲ್ ಮತ್ತು ಕಾಮತ್ ಕೇಟರರ್ಸ್ ನವರ ವಿವಿಧ ನೀರೂರಿಸುವ ಖಾದ್ಯಗಳು, ಶ್ರೇಯಸ್ಸ್ ಸ್ವೀಟ್ಸ್ ನವರ ಸಿಹಿತಿಂಡಿಗಳು, ಮೋಕ್ ಟೇಲ್ ಕೌಂಟರ್, ಕರಿದ ತಿಂಡಿ ತಿನಿಸುಗಳ ಸಹಿತ ಹಣ್ಣುಹಂಪಲುಗಳು ಯಥೇಚ್ಚವಾಗಿ ಸೇವಿಸುವ ವ್ಯವಸ್ಥೆ ಮಾಡಲಾಗಿದೆ.

ಅವಿವಾಹಿತ ಜಿಎಸ್ ಬಿ ಸಮುದಾಯದ ಬಂಧುಗಳಿಗೆ ವೈವಾಹಿಕ ಸಮ್ಮಿಲನ ವೇದಿಕೆ, ಆಯುಷ್ಮಾನ್ ಕಾರ್ಡ್ ವಿತರಣೆ, ರಕ್ತದಾನ ಶಿಬಿರ, ಹಸಿರು ಉಳಿಸುವ ಸಂಕಲ್ಪ, ಹಾಸ್ಯಪ್ರಿಯರಿಗಾಗಿ ಆಯ್ದ ತಂಡಗಳಿಂದ ದೋನಿ ಘಡಿ ಹಾಸೂನ್ ಕಾಡಿ ಕಿರುನಾಟಕಗಳ ಸ್ಪರ್ದೆ, ಗಾಳಿಪಟ ಪ್ರದರ್ಶನ, ಫೂಲ್ವಾಮಾ ಘಟನೆಯಲ್ಲಿ ಹುತಾತ್ಮರಾದ ಯೋಧರ ಸ್ಮರಣೆಯೊಂದಿಗೆ ಆಕರ್ಷಕ ಸುಡುಮದ್ದಿನ ಪ್ರದರ್ಶನ ಕೂಡ ನಡೆಯಲಿದೆ.

ಮೂರು ದಿನ ಕೂಡ ಮಂಗಳೂರಿನ ರಥಬೀದಿ ವೆಂಕಟರಮಣ ದೇವಸ್ಥಾನದಿಂದ ಸಹ್ಯಾದ್ರಿ ಕಾಲೇಜಿನ ತನಕ ಗಂಟೆಗೊಮ್ಮೆ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು, ಜಿಎಸ್ ಬಿ ಸಮುದಾಯದವರು ಉಚಿತವಾಗಿ ಅದರಲ್ಲಿ ಪ್ರಯಾಣಿಸಬಹುದು.

ಕಾರ್ಯಕ್ರಮಗಳು ನಡೆಯುವ ಪ್ರದೇಶದಲ್ಲಿ ವಾಲೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಕಾರು, ದ್ವಿಚಕ್ರ ವಾಹನಗಳ ಪಾರ್ಕಿಂಗ್ ಗಾಗಿ ಸೂಕ್ತ ಜಾಗ ಮತ್ತು ವ್ಯವಸ್ಥೆ ಮಾಡಲಾಗಿದೆ. ಕನಿಷ್ಟ 20 ಸಾವಿರ ಜನರು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು ಕ್ರಿಕೆಟ್ ಪಂದ್ಯಾಟಗಳನ್ನು ಮತ್ತು ಈ ಎಲ್ಲಾ ಕಾರ್ಯಕ್ರಮಗಳನ್ನು ಯೂತ್ ಆಫ್ ಜಿಎಸ್ ಬಿ ಪೇಜ್ ಹಾಗೂ ಯೂಟ್ಯೂಬ್ ನಲ್ಲಿ ವೀಕ್ಷಿಸುವ ಅವಕಾಶವಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಿಎಸ್ ಬಿ ಸಮುದಾಯದವರಿಗೆ ಮುಕ್ತ ಮತ್ತು ಉಚಿತ ಪ್ರವೇಶವಿದೆ.

ಕೊಡಿಯಾಲ್ ಸ್ಫೋರ್ಟ್ ಪ್ರತಿ ವರ್ಷ ಕ್ರಿಕೆಟ್, ಕಬಡ್ಡಿ ಪಂದ್ಯಾಟಗಳನ್ನು ಏರ್ಪಡಿಸುತ್ತಿದ್ದು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ರೈಫಲಿಂಗ್, ಶಟಲ್ ಬ್ಯಾಡಿಂಟನ್ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಜಿಎಸ್ ಬಿ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯವನ್ನು ಮಾಡುತ್ತಲೇ ಬಂದಿದೆ.
ಯೂತ್ ಆಫ್ ಜಿಎಸ್ ಬಿ ಸಾಂಸ್ಕೃತಿಕ, ಕಲೆ, ಸಂಪ್ರದಾಯ, ಆಚಾರ-ವಿಚಾರ, ಸಾಮಾಜಿಕ ಕ್ಷೇತ್ರಗಳಲ್ಲಿರುವ ಸಾಧಕರಿಂದ ಮಾಹಿತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಅದನ್ನು ಪ್ರಪಂಚದಾದ್ಯಂತ ಇರುವ ಕೊಂಕಣಿ ಭಾಷಿಕರಿಗೆ ಪಸರಿಸುವ ಕಾರ್ಯವನ್ನು ಮಾಡುತ್ತಲೇ ಬಂದಿದೆ. ವಾಯ್ಸ್ ಆಫ್ ಜಿಎಸ್ ಬಿ, ಮಿಸ್, ಮಿಸ್ಟರ್, ಎಮೆಂಜಿಂಗ್ ಕಪಲ್ಸ್ ಸಹಿತ ವಿವಿಧ ಕಾರ್ಯಕ್ರಮಗಳು ಇದರಲ್ಲಿ ಮೂಡಿಬಂದಿವೆ ಎಂದು ಪ್ರದೀಪ್ ಪೈ ವಿವರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಯೂತ್ ಆಫ್ ಜಿಎಸ್ ಬಿಯ ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು, ಕಿರಣ್ ಶೆಣೈ, ಅಂಜನಾ ಕಾಮತ್ ಉಪಸ್ಥಿತರಿದ್ದರು.

Comments are closed.