ಕರಾವಳಿ

ಬೈಂದೂರಿನಲ್ಲಿ ಅಕ್ರಮ ಮರಳು ಸಾಗಾಟದ ಲಾರಿ ನುಗ್ಗಿ ಎರಡು ಅಂಗಡಿ ಜಖಂ- ತಪ್ಪಿದ ಅನಾಹುತ

Pinterest LinkedIn Tumblr

ಕುಂದಾಪುರ: ಮಂಗಳೂರು ಕಡೆಯಿಂದ ಭಟ್ಕಳದತ್ತ ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಯೊಂದು ಟಿಪ್ಪರ್ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ರಾಷ್ಟ್ರೀಯ ಹೆದ್ದಾರಿ ಸಮೀಪದ ಎರಡು ಅಂಗಡಿಗೆ ನುಗ್ಗಿದ ಘಟನೆ ಬೈಂದೂರು ಹೊಸ ಬಸ್ ನಿಲ್ದಾಣದ ಎದುರು ಭಾನುವಾರ ಬೆಳಿಗ್ಗೆ ನಡೆದಿದೆ.

ಮಂಗಳೂರಿನಿಂದ ಮರಳನ್ನು ತುಂಬಿಸಿಕೊಂಡು ನಿರಂತರವಾಗಿ ಅಕ್ರಮ ಸಾಗಾಟ ನಡೆಯುತ್ತಿದೆ. ಅಂತೆಯೇ ಭಾನುವಾರವೂ ಕೂಡ ಮರಳು ತುಂಬಿದ ಬೃಹತ್ ಲಾರಿ ವೇಗವಾಗಿ ಭಟ್ಕಳದತ್ತ ಸಾಗುತ್ತಿದ್ದು ಎದುರಿಗೆ ಬಂದ ಟಿಪ್ಪರ್ ವಾಹನವನ್ನು ತಪ್ಪಿಸುವ ದಾವಂತದಲ್ಲಿ ರಸ್ತೆ ಸಮೀಪದ ಅಂಗಡಿಗಳಿಗೆ ನುಗ್ಗಿದೆ. ಅದೃಷ್ಟವಶಾತ್ ಅಂಗಡಿ ಸಮೀಪವಿದ್ದ ಜನರು ಓಡಿದ್ದರಿಂದ ಸಂಭವ್ಯ ಅವಘಡ ತಪ್ಪಿದೆ. ಅಂಗಡಿಗಳು ಹಾಗೂ ಲಾರಿ ಜಖಂಗೊಂಡಿದೆ. ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

ಅಕ್ರಮ ಮರಳು ಸಾಗಾಟ ನಿರಂತರವಾಗಿ ನಡೆಯುತ್ತಿದ್ದು ಕೆಲವು ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ನಾಗರಿಕರು ಆರೋಪಿಸುತ್ತಿದ್ದು ಸಂಬಂದಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Comments are closed.