ಕರಾವಳಿ

ಜಾಗದ ವಿವಾದಕ್ಕೆ ಬಲಿಯಾದರಾ ಬಾಬು ಶೆಟ್ಟಿ?- 13 ಮಂದಿ ವಿರುದ್ಧ ಸಹೋದರನ ದೂರು!

Pinterest LinkedIn Tumblr

ಕುಂದಾಪುರ: ಜೋರ್ಮಕ್ಕಿ ಬಾಬು ಶೆಟ್ಟಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹದಿಮೂರು ಮಂದಿಯ ವಿರುದ್ದ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಸಂತೋಷ ಶೆಟ್ಟಿ, ತೇಜಪ್ಪ ಶೆಟ್ಟಿ, ಶೇಖರ ಶೆಟ್ಟಿ, ಪ್ರಕಾಶ್ ಶೆಟ್ಟಿ ಕೊಡ್ಲಾಡಿ, ಉದಯ ಶೆಟ್ಟಿ, ರವಿರಾಜ ಶೆಟ್ಟಿ, ನಾಗರಾಜ ದೇವಾಡಿಗ, ಸುಕೇಶ್ ಮೂಡುಬಗೆ, ಶಂಕರ ಶೆಟ್ಟಿ, ಸುರೇಶ್ ಶೆಟ್ಟಿ ಕೊಕ್ಕಡ, ಗೋಪಾಲ ಶೆಟ್ಟಿ ಅಸೋಡು, ಕುಷ್ಠಪ್ಪ ಶೆಟ್ಟಿ ಅಸೋಡು, ಪ್ರಸಾದ್ ಶೆಟ್ಟಿ ಸೇರಿ ಒಟ್ಟು ಹದಿಮೂರು ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ. ಈ ಪೈಕಿ ಪ್ರಸಾದ್ ಎನ್ನುವಾತ ಕೊಲೆಯಾದ ಬಾಬು ಶೆಟ್ಟಿ ಸೋದರ.

ಬಾಬು ಶೆಟ್ಟಿಯವರ ಅಕ್ಕನ ಗಂಡ ಆನಂದ ಶೆಟ್ಟಿ ಈ ಹಿಂದೆ ಕರ್ಕುಂಜೆ ಗ್ರಾಮದ ಕಮ್ರಾಡಿ ಎಂಬಲ್ಲಿ ಕೃಷಿ ಜಮೀನೊಂದನ್ನು ಖರೀದಿಸಿದ್ದರು. ಇದೇ ಜಾಗಕ್ಕೆ ಸಂಬಂಧಿಸಿದಂತೆ ಕುಮ್ಕಿ ಜಾಗವೊಂದರ ಎಗ್ರಿಮೆಂಟ್ ವಿಚಾರದಲ್ಲಿ ಆರೋಪಿತರಿಗೂ ಹಾಗೂ ಆನಂದ ಶೆಟ್ಟಿಯವರ ನಡುವೆ ಗಲಾಟೆಗಳಾಗಿತ್ತು. ಈ ಸಮಯದಲ್ಲಿ ಬಾಬು ಶೆಟ್ಟಿಯವರು ಅಕ್ಕ ಹಾಗೂ ಬಾವನ ಪರ ಸಂಧಾನಕ್ಕೆ ಹೋಗಿದ್ದು, ಬಾವ ಆನಂದ ಶೆಟ್ಟಿಯವರ ಪರ ನಿಂತು ಮಾತನಾಡಿದ್ದರು. ಇದೇ ದ್ವೇಷದಿಂದ ಹತ್ಯೆಗೈದಿದ್ದಾರೆ ಎಂದು ಮೃತ ಬಾಬು ಶೆಟ್ಟಿಯವರ ಸಹೋದರ ಪ್ರಕಾಶ್ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಹೋದರ ನೀಡಿದ ದೂರಿನ ಆಧಾರದಲ್ಲಿ ಹದಿಮೂರು ಮಂದಿ ಆರೋಪಿಗಳ ವಿರುದ್ದ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 341.143.147. 148, 302 ಜೊತೆಗೆ 149 ಐಪಿಸಿಯಂತೆ   ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ:
ಮಂಗಳವಾರ ಬೆಳಗ್ಗೆ ಮನೆಯ ತೋಟಗಳಿಗೆ ನೀರು ಹಾಯಿಸಿ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಜೋರ್ಮಕ್ಕಿಯ ತನ್ನ ಮನೆಯಿಂದ ಕುಂದಾಪುರಕ್ಕೆ ಹೋಗಿ ಬರುವುದಾಗಿ ಬೈಕ್‌ನಲ್ಲಿ ತೆರಳಿದ್ದ ಕೆಲವೇ ಹೊತ್ತಿನಲ್ಲಿ ಬಾಬು ಶೆಟ್ಟಿಯವರ ಹತ್ಯೆ ನಡೆದಿತ್ತು. ಬೈಕ್‌ನಲ್ಲಿ ತೆರಳುತ್ತಿದ್ದ ಅವರನ್ನು ಹಿಂಬಾಲಿಸಿರುವ ದುಷ್ಕರ್ಮಿಗಳು ಮಾರಕಾಯುಧಗಳಿಂದ ದಾಳಿ ನಡೆಸಿದ್ದು, ಗೇರು ಹಾಡಿಯೊಂದರ ಬಳಿಯಲ್ಲಿ ರಕ್ತ ಸಿಕ್ತ ದೇಹ ಬಿದ್ದಿದ್ದರೇ, ಅವರ ಬೈಕ್ ಗೇರು ತೋಪಿನ ಇನ್ನೊಂದು ತುದಿಯನ್ನು ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಬಿದ್ದಿತ್ತು. ಹತ್ಯೆಯಾದ ಬಾಬು ಶೆಟ್ಟಿಯವರ ಕುತ್ತಿಗೆ, ತಲೆ, ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಇರಿತದ ಗುರುತುಗಳು ಪತ್ತೆಯಾಗಿದ್ದು, ಕೊಲೆಯ ಭೀಕರತೆಯನ್ನು ಎತ್ತಿತೋರಿಸಿತ್ತು.

ಇನ್ನೊಂದು ಚಪ್ಪಲಿ ಪತ್ತೆ!
ಬಾಬು ಶೆಟ್ಟಿಯವರ ಹೀರೋಹೊಂಡಾ ಬೈಕ್ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೈಕ್‌ನ ಸಮೀಪವೇ ಹೆಲ್ಮೆಟ್ ಹಾಗೂ ಅವರ ಒಂದು ಸ್ಲಿಪ್ಪರ್ ಪತ್ತೆಯಾಗಿತ್ತು. ಗೇರು ತೋಪಿನಲ್ಲಿ ಬಾಬು ಶೆಟ್ಟಿ ಬಳಸುತ್ತಿದ್ದ ಕನ್ನಡಕ ಹಾಗೂ ಮೊಬೈಲ್‌ಫೋನ್ ಪತ್ತೆಯಾದರೆ, ಅವರು ಧರಿಸಿದ್ದ ಪಂಚೆ ಹಾಗೂ ಇನ್ನೊಂದು ಸ್ಲಿಪ್ಪರ್ ಪತ್ತೆಯಾಗಿರಲಿಲ್ಲ. ಉಡುಪಿ ಎಸ್‌ಪಿ ನಿಶಾ ಜೇಮ್ಸ್ ಸ್ಥಳಕ್ಕಾಗಮಿಸಿ ಗೇರುತೋಪಿನೊಳಗೆ ಕೂಂಬಿಂಗ್ ನಡೆಸಲು ಆದೇಶಿಸಿದ ಬಳಿಕ ಪೊಲೀಸರ ತಂಡ ಹುಡುಕಾಟ ನಡೆಸಿದ ವೇಳೆಯಲ್ಲಿ ಗೇರುತೋಪಿನಲ್ಲಿ ಬಾಬು ಶೆಟ್ಟಿಯವರು ಧರಿಸಿದ್ದ ಪಂಚೆ, ಸ್ಲಿಪ್ಪರ್ ಹಾಗೂ ಇನ್ನೊಂದು ಚಪ್ಪಲಿ ಪತ್ತೆಯಾಗಿರುವ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇನ್ನು ಕಾರ್ಯಾಚರಣೆಯ ವೇಳೆ ಸಿಕ್ಕ ಇನ್ನೊಂದು ಚಪ್ಪಲಿ ಯಾರದ್ದೆನ್ನುವುದು ಪೊಲೀಸರು ಇನ್ನೂ ಖಾತರಿಪಡಿಸಲಿಲ್ಲ.

ಬಾಬು ಶೆಟ್ಟಿ ಕೊಲೆ ಪ್ರಕರಣದಲ್ಲಿ ಅವರ ಸಹೋದರ ನೀಡಿದ ದೂರಿನಂತೆ  13 ಮಂದಿಯ ವಿರುದ್ದ ಎಫ್‌ಐ‌ಆರ್ ದಾಖಲಾಗಿದೆ. ಈ 13 ಮಂದಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ತನಿಖೆ ಪ್ರಗತಿಯಲ್ಲಿದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದ್ದೇವೆ.
-ಹರಿರಾಮ್ ಶಂಕರ್, ಎ‌ಎಸ್‌ಪಿ ಕುಂದಾಪುರ

ಕೆಸಿಡಿಸಿಯವರು ಗೇರುತೋಪಿನಲ್ಲಿರುವ ದಟ್ಟ ಪೊದೆಗಳನ್ನು ತೆಗೆಸುವ ವ್ಯವಸ್ಥೆ ಮಾಡಿಸಬೇಕು. ಅವರಲ್ಲಿ ಸಾಧ್ಯವಾಗದಿದ್ದರೆ ಪಂಚಾಯತ್‌ಗೆ ವಹಿಸಿಕೊಟ್ಟರೂ ನಾವು ಅದನ್ನು ಮಾಡುತ್ತೇವೆ. ಈಗಾಗಲೇ ಪಂಚಾಯತ್‌ನಿಂದ ಒಂದು ಲಕ್ಷ ಹಾಗೂ ಶಾಸಕರ ನಿಧಿಯಿಂದ ಐದು ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಮಾಡಿಸಿದ್ದೇವೆ. ಇನ್ನೂ ಮೂವತ್ತು ಲಕ್ಷ ಅನುದಾನವನ್ನು ಕಾಯ್ದಿರಿಸಲಾಗಿದೆ. ಕಲ್ಕಂಬ ರಸ್ತೆಗೆ ದಾರಿ ದೀಪ ಅಳವಡಿಸುವ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು.
-ರಾಜೀವ ಶೆಟ್ಟಿ, ಹಟ್ಟಿಯಂಗಡಿ ಗ್ರಾ.ಪಂ ಅಧ್ಯಕ್ಷರು

Comments are closed.